
ನಟಿ ರುಕ್ಮಿಣಿ ವಸಂತ್ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ತಮ್ಮ ನಟನಾ ಪ್ರತಿಭೆ ಮತ್ತು ಅದ್ಭುತ ಸೌಂದರ್ಯದಿಂದಾಗಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ರುಕ್ಮಿಣಿ ವಸಂತ್ ಈಗ ಪ್ಯಾನ್ ಇಂಡಿಯಾ ನಟಿ ಆಗಿದ್ದಾರೆ. ಆದರೆ ಅವರ ತಂದೆ ಇಡೀ ದೇಶವೇ ಹೆಮ್ಮೆ ಪಡುವ ಭಾರತೀಯ ಸೈನ್ಯದ ಮಹಾನ್ ಯೋಧ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ.

ರುಕ್ಮಿಣಿ ವಸಂತ್ ಅವರ ತಂದೆಯ ಹೆಸರು ಕರ್ನಲ್ ವಸಂತ್ ವೇಣುಗೋಪಾಲ್. ಭಾರತೀಯ ಸೇನೆ ಕಂಡ ಅಪ್ರತಿಮ ಕರ್ನಲ್ಗಳಲ್ಲಿ ಒಬ್ಬರು. ಅವರ ಶಿಸ್ತು ಮತ್ತು ವೀರತ್ವದ ಕತೆಗಳು ಸೈನ್ಯದಲ್ಲಿ ಪ್ರಚಲಿತದಲ್ಲಿವೆ.

ವಸಂತ್ ವೇಣುಗೋಪಾಲ್ ಅವರು ತಮ್ಮ ಹದಿನೆಂಟು ವರ್ಷದ ಸೈನ್ಯದ ಅವಧಿಯಲ್ಲಿ ಪಠಾಣ್ಕೋಟ್, ಉರಿ, ಸಿಕ್ಕಿಂ, ಜಮ್ಮು ಕಾಶ್ಮೀರದ ಹಲವು ಭಾಗಗಳು, ಗಾಂಧಿನಗರ, ಬೆಂಗಳೂರು, ರಾಂಚಿ ಹಲವೆಡೆ ಕರ್ತವ್ಯ ನಿರ್ವಹಿಸಿದ್ದರು.

2007 ರಲ್ಲಿ ಉರಿ ಇಲಾಖೆಯಲ್ಲಿ ನಡೆದ ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ವಸಂತ್ ವೇಣುಗೋಪಾಲ್ ನಿಧನ ಹೊಂದಿದರು. ಆಗಿನ್ನೂ ರುಕ್ಮಿಣಿಗೆ 11 ವರ್ಷ ವಯಸ್ಸು.

ಮರಣಾನಂತರ ವಸಂತ್ ವೇಣುಗೋಪಾಲ್ ಅವರಿಗೆ ಸೈನ್ಯದ ಪರಮೋಚ್ಛ ಪ್ರಶಸ್ತಿಯಾದ ಅಶೋಕ ಚಕ್ರ ನೀಡಲಾಯ್ತು. ಈ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ವ್ಯಕ್ತಿ ಆಗಿದ್ದಾರೆ ವಸಂತ್.

ಕರ್ನಲ್ ವಸಂತ್ ವೇಣುಗೋಪಾಲ್ ಜೀವನ, ಸಾಹಸ, ಸಾಧನೆಗಳನ್ನು ತಿಳಿಸುವ ವಿಕಿಪೀಡಿಯಾ ಪೇಜ್ ಇದೆ. ನಟಿ ರುಕ್ಮಿಣಿ ವಸಂತ್ ಸಹ ಹಲವು ಸಂದರ್ಭಗಳಲ್ಲಿ ತಮ್ಮ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ತಂದೆಯಂತೆ ಶಿಸ್ತಿನ ಜೀವನ ನಡೆಸುತ್ತಿದ್ದಾರೆ.