ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ ನಟಿ ಹೇಮಾ ಚೌಧರಿ ಅವರು ಅನಾರೋಗ್ಯದ ಬಳಿಕ ಚೇತರಿಕೆ ಕಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಅವರಿಗೆ ಬ್ರೇನ್ ಹೆಮರೇಜ್ ಆಗಿತ್ತು. ಆಗ ಸರ್ಜರಿಗೆ ಒಳಗಾಗಿದ್ದ ಅವರು ಈಗ ಚೇತರಿಸಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡ ಹೇಮಾ ಚೌಧರಿ ಅವರು ಇಂದು (ಅಕ್ಟೋಬರ್ 15) ಬೆಂಗಳೂರಿನ ಜೆಪಿ ನಗರದ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಭಾರತಿ ವಿಷ್ಣುವರ್ಧನ್, ತಾರಾ ಅನುರಾಧಾ ಕೂಡ ಪೂಜೆಯಲ್ಲಿ ಪಾಲ್ಗೊಂಡರು.
ಪೂಜೆಯಲ್ಲಿ ಭಾಗಿಯಾದ ಬಳಿಕ ಹಿರಿಯ ನಟಿ ತಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ. ಹಿರಿಯ ನಟಿಯರನ್ನು ಒಟ್ಟಿಗೆ ನೋಡಿ ಖುಷಿಯಾಗಿದೆ.
‘ಎಲ್ಲರಿಗೂ ನಮಸ್ಕಾರ. ಶ್ರೀಮತಿ ಭಾರತಿ ವಿಷ್ಣುವರ್ಧನ್ ಅಮ್ಮ ಹಾಗೂ ಶ್ರೀಮತಿ ಹೇಮಾ ಚೌಧರಿ ಅಮ್ಮ ಇವರೊಂದಿಗೆ ಈ ದಿನ ಪವಿತ್ರ ದೇವಾಲಯದಲ್ಲಿ. ಈ ತಾಯಂದಿರ ಜೊತೆ ಸಮಯ ಕಳೆದದ್ದು ಏನೋ ಒಂದು ಥರ ಶಕ್ತಿ ಬಂದಂತೆ ಭಾಸವಾಯಿತು’ ಎಂದು ತಾರಾ ಪೋಸ್ಟ್ ಮಾಡಿದ್ದಾರೆ.
‘ಇಬ್ಬರು ತಾಯಂದಿರಿಗೂ ಮನಃಪೂರ್ವಕ ವಂದನೆಗಳು. ಸ್ವಾಮೀ ವೆಂಕಟರಮಣ ಭಗವಂತನಿಗೆ ಸಾಷ್ಟಾಂಗ ನಮಸ್ಕಾರಗಳು’ ಎಂದು ತಾರಾ ಅನುರಾಧಾ ಅವರು ಬರೆದುಕೊಂಡಿದ್ದಾರೆ. ಹೇಮಾ ಚೌಧರಿ ಅವರು ಚೇತರಿಸಿಕೊಂಡಿದ್ದಕ್ಕೆ ಅವರ ಅಭಿಮಾನಿಗಳಿಗೆ ಸಂತಸ ಆಗಿದೆ.