
ಕಾಂಗ್ರೆಸ್ನ ಅತ್ಯಂತ ಪ್ರಭಾವಿ ಹಿರಿಯ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (94) ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

1931ರ ಜೂನ್ 16ರಂದು ದಾವಣಗೆರೆಯಲ್ಲಿ ಜನಸಿದ್ದ ಶಾಮನೂರು, ಕಲ್ಲಪ್ಪ, ಸಾವಿತ್ರಮ್ಮ ದಂಪತಿಯ ಹಿರಿಯ ಪುತ್ರ.

ಶಾಮನೂರು ಶಿವಶಂಕರಪ್ಪ 6 ಸಲ ಶಾಸಕ ಹಾಗೂ ಒಂದು ಸಲ ಸಂಸದರಾಗಿದ್ದರು. ಕೊಡುಗೈದಾನಿ, ಶಿಕ್ಷಣ ಸಂಸ್ಥೆಗಳ ಒಡೆಯರಾಗಿದ್ದು, ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಹಾಗೂ ಉದ್ಯಮಿ ಕೂಡ ಆಗಿದ್ದರು.

ಶಾಮನೂರು ಶಿವಶಂಕರಪ್ಪ 1971ರಲ್ಲಿ ಪ್ರಪ್ರಥಮ ಬಾರಿಗೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ್ದರು. ದಾವಣಗೆರೆ ನಗರ ಸಭೆ ಸದಸ್ಯರಾಗಿ, ನಂತರ ನಗರಸಭೆ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು.

1994ರಲ್ಲಿ ಕಾಂಗ್ರೆಸ್ನಿಂದ ವಿಧಾನ ಸಭೆಗೆ ದಾವಣಗೆರೆ ಕ್ಷೇತ್ರದಿಂದ ಟಿಕೆಟ್ ಪಡೆದು ಆಯ್ಕೆಯಾಗಿದ್ದರು. 1997 ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.

1999ರಲ್ಲಿ ನಡೆದ ಲೋಕಸಭೆಯ ಮಧ್ಯಂತರ ಚುನಾವಣೆಯಲ್ಲಿ ಶಾಮನೂರ ಶಿವಶಂಕರಪ್ಪ ಸೋಲು ಕಂಡಿದ್ದರು. ಐದು ದಶಕಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಸೋಲು ಇದಾಗಿತ್ತು.

ಮತ್ತೆ 2004, 2008, 2013, 2018 ಹಾಗೂ 2023 ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಸಚಿವ ಎಸ್ಎಸ್ ಮಲ್ಲಿಕಾರ್ಜುನ ಸೇರಿ ಮೂರು ಜನ ಪುತ್ರರು ಹಾಗೂ ನಾಲ್ಕು ಜನ ಪುತ್ರಿಯರನ್ನು ಶಾಮನೂರ ಶಿವಶಂಕರಪ್ಪ ಅವರು ಅಗಲಿದ್ದಾರೆ.
Published On - 8:12 pm, Sun, 14 December 25