
ಭಾರತದಲ್ಲಿ ವೈಯಕ್ತಿಕ ಆದಾಯ ತೆರಿಗೆಯನ್ನು ಕಡಿಮೆ ಮಾಡುವ ಅತ್ಯಗತ್ಯತೆ ಇದೆ ಎಂದು ಮಾಜಿ ಐಎಂಎಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸುರ್ಜಿತ್ ಭಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಜೆಟ್ ನಿರೀಕ್ಷೆ ಬಗ್ಗೆ ಮಾತನಾಡುತ್ತಿದ್ದ ಅವರು, ಭಾರತದಲ್ಲಿ ಕಾರ್ಪೊರೇಟ್ ಟ್ಯಾಕ್ಸ್ ಕಡಿಮೆ ಮಾಡುವುದರ ಬದಲು ವೈಯಕ್ತಿಕ ಆದಾಯ ತೆರಿಗೆ ಕಡಿಮೆ ಮಾಡಬೇಕು ಎಂದಿದ್ದಾರೆ. ಹಾಗೆಯೇ, ವಿದೇಶೀ ನೇರ ಹೂಡಿಕೆಗೆ ಸಂಬಂಧಿಸಿದ ನೀತಿಯಲ್ಲೂ ಬದಲಾವಣೆ ಆಗಬೇಕು ಎಂದು ಅವರು ಸರ್ಕಾರಕ್ಕೆ ಕರೆ ನೀಡಿದ್ದಾರೆ.

‘ಮೊದಲಿಗೆ, ನಮ್ಮ ಎಫ್ಡಿಐ ನೀತಿ ಬದಲಾಯಿಸಬೇಕು. ಎರಡನೆಯದಾಗಿ ಪರ್ಸನಲ್ ಇನ್ಕಮ್ ಟ್ಯಾಕ್ಸ್ ಕಡಿತಗೊಳಿಸಬೇಕು. ತೆರಿಗೆ ತೀರಾ ಹೆಚ್ಚಾಗಿದೆ’ ಎಂದು ಸುರ್ಜೀತ್ ಭಲ್ಲಾ ಅಭಿಪ್ರಾಯಪಟ್ಟಿದ್ದಾರೆ.

‘ಭಾರತವು ಕಾರ್ಪೊರೇಟ್ ಟ್ಯಾಕ್ಸ್ಗಳನ್ನು ಕಡಿಮೆ ಮಾಡುವ ಅಗತ್ಯ ಇದೆ ಎಂದು ಪ್ರಮುಖ ಅಂತಾರಾಷ್ಟ್ರೀಯ ಬ್ಯಾಂಕ್ವೊಂದು ಹೇಳಿತೆಂದು ಕೇಳಲ್ಪಟ್ಟೆ. ಹೀಗೆ ಕಾರ್ಪೊರೇಟ್ ಟ್ಯಾಕ್ಸ್ ಕಡಿತದಿಂದ ಯಾರಿಗೆ ಲಾಭ? ನಿಮಗಾಗಲೀ, ನನಗಾಗಲೀ, ಅಥವಾ ಇದನ್ನು ಕೇಳುತ್ತಿರುವ ವೀಕ್ಷಕರಿಗಾಗಲೀ ಲಾಭವಲ್ಲ. ಕಾರ್ಪೊರೇಟ್ಗಳಿಗೆ ಆಗುತ್ತೆ ಲಾಭ. ತೆರಿಗೆ ಕಡಿತಗೊಳಿಸಲು ಅವರಿಗೆ ಕೊನೆಯ ಆದ್ಯತೆ ಇರಬೇಕು. ನಾವು, ಜನಸಾಮಾನರಿಗೆ ಟ್ಯಾಕ್ಸ್ ಕಟ್ ಆಗಬೇಕು’ ಎಂದು ಟಿವಿ ವಾಹಿನಿ ಸಂದರ್ಶನದಲ್ಲಿ ಮಾಜಿ ಐಎಂಎಫ್ ಕಾರ್ಯಕಾರಿ ನಿರ್ದೇಶಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಜಿಡಿಪಿಯ ಶೇ. 19 ಮೊತ್ತದಷ್ಟು ತೆರಿಗೆ ಇದೆ. ಪೂರ್ವ ಏಷ್ಯಾದಲ್ಲಿ ಸರಾಸರಿ ಶೇ. 14.5ರಷ್ಟು ತೆರಿಗೆ ಅನುಪಾತ ಇದೆ. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಅತಿಯಾದ ತೆರಿಗೆ ಇದೆ ಎನಿಸುತ್ತದೆ. ಅಮೆರಿಕ ಮತ್ತು ಕೊರಿಯಾದಲ್ಲಿ ಇರುವಷ್ಟು ಮಟ್ಟದಲ್ಲಿ ಭಾರತದಲ್ಲಿ ಟ್ಯಾಕ್ಸ್ ರೇಶಿಯೋ ಇದೆ. ನಾವು ಜನರಿಗೆ ಅತಿಯಾಗಿ ತೆರಿಗೆ ವಿಧಿಸುತ್ತಿದ್ದೇವೆ ಎಂದು ಸುರ್ಜೀತ್ ಭಲ್ಲಾ ಬೇಸರ ವ್ಯಕ್ತಪಡಿಸಿದ್ದಾರೆ.

ತೆರಿಗೆ ಕಡಿಮೆ ಮಾಡುವುದರಿಂದ ಸರ್ಕಾರಕ್ಕೆ ಆದಾಯ ಹೆಚ್ಚಾಗುತ್ತದೆ. ತೆರಿಗೆ ಹೆಚ್ಚಿಸುವುದರಿಂದ ಇದು ಸಾಧ್ಯವಿಲ್ಲ. ವೈಯಕ್ತಿಕ ಆದಾಯ ತೆರಿಗೆ ಇಳಿಸಿರಿ, ಎಫ್ಡಿಐ ಬರಲು ಅವಕಾಶ ಕೊಡಿ... ಇದರಿಂದ ಎಲ್ಲರಿಗೂ ಒಳಿತಾಗುತ್ತದೆ’ ಎಂದಿದ್ದಾರೆ ಸುರ್ಜೀತ್ ಭಲ್ಲ.