
ಕರ್ನಾಟಕದಲ್ಲಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಕೆಲವು ಕಡೆ ಭಾರೀ ಅವಾಂತರ ಸೃಷ್ಟಿಸುತ್ತಿದ್ದರೆ, ಅತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಬತ್ತಿದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಮೇ ತಿಂಗಳಲ್ಲಿ ತುಂಬಿ ಉಕ್ಕಿ ಹರಿಯುತ್ತಿರುವ ಜೀವ ಜಲ ಪ್ರವಾಸಿಗರನ್ನು ಸೆಳೆಯುತ್ತಿದೆ.

ದಟ್ಟ ಅರಣ್ಯ ಹೊತ್ತುಕೊಂಡಿರುವ 600 ಅಡಿ ಆಳವಾದ ಕಂದಕ, ಕಂದಕದ ಮಧ್ಯೆ ಎರಡು ಹಂತದ ಜಲಪಾತ, ಇನ್ನೊಂದು ಕಡೆ ಎರಡು ಗುಡ್ಡಗಳ ಮಧ್ಯ ಹಾದು ಹೋಗುತ್ತಿರುವ ಬೆಡ್ತಿ ನದಿ. ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ತಾಲೂಕಿನ ಮಾಗೋಡು ಫಾಲ್ಸ್ನಲ್ಲಿ.

ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದಲ್ಲಿ ಜನ್ಮ ತಾಳುವ ಬೆಡ್ತಿ ನದಿ, ಪಶ್ಚಿಮ ಘಟ್ಟಗಳನ್ನು ಸೀಳಿ ಅರಬ್ಬಿ ಸಮುದ್ರ ಸೇರುವ ದಾರಿ ಮಾತ್ರ ಅತಿ ಆಕರ್ಷಣೀಯ. ರಾಜ್ಯದ ಅತಿ ಚಿಕ್ಕ ನದಿಗಳಲ್ಲಿ ಒಂದಾದ ಬೆಡ್ತಿ ನದಿ, ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದಲ್ಲಿನ ಸುಮಾರು 600 ಅಡಿ ಆಳವಾದ ಕಂದಕದ ಮಧ್ಯ ಹೋದಾಗ ಎರಡು ಹಂತದ ಜಲಪಾತಗಳನ್ನು ಸೃಷ್ಟಿಸುತ್ತೆ.

ವಿಶೇಷ ಎಂದರೆ ತನ್ನ ಪಥವನ್ನ ಪೂರ್ತಿಯಾಗಿ ಪಶ್ಚಿಮ ಘಟ್ಟಗಳಲ್ಲಿ ಮುಚ್ಚಿಕೊಂಡಿರುವ ಬೆಡ್ತಿ ನದಿ, ಕೆಲವೇ ಮೀಟರ್ ಪಥ ಮಾತ್ರ ಕಣ್ಣಿಗೆ ಬಿಳುತ್ತೆ. ಆದರೆ ಕಣ್ಣಿಗೆ ಕಾಣುವ ಕೆಲವೇ ಮೀಟರ್ ಬೆಡ್ತಿ ನದಿಯ ಪಥ ಮಾತ್ರ ನಯನ ಮನೋಹರ.

ಮಳೆಯ ಅಬ್ಬರ ಹೆಚ್ಚಾದ ಹಿನ್ನೆಲೆ, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಫಾಲ್ಸ್ಗಳಿಗೆ ನಿರ್ಬಂಧ ಹೇರಲಾಗತ್ತೆ. ಆದರೆ ಅತ್ಯಂತ ಸೇಫ್ ಆಗಿರುವ ಮಾಗೋಡ್ ಫಾಲ್ಸ್ಗೆ ನಿರ್ಬಂಧ ಮಾಡುವುದು ಭಾರೀ ವಿರಳ. ಏಕೆಂದರೆ ಈ ಜಲಪಾತದಲ್ಲಿ ಆಟ ಆಡಲು ಹಾಗೂ ಬಂಡೆ ಕಲ್ಲು ಹತ್ತಿ ಫೋಟೋ ತೆಗೆದುಕೊಳ್ಳಲು ಇಲ್ಲಿ ಅವಕಾಶ ಕಡಿಮೆ. ಹಾಗಾಗಿ ಇಲ್ಲಿಗೆ ಕುಟುಂಬ ಸಮೇತ ಬಂದು ಪ್ರಕೃತಿ ಸೌಂದರ್ಯವನ್ನ ಕಣ್ತುಂಬಿಕೊಳ್ಳಬಹುದು.

ಇನ್ನು ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ಇರುವುದರಿಂದ, ಬೈಕ್ ಅಥವಾ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತೆ. ಹಾಗಾಗಿ ಬಹಳಷ್ಟು ಪ್ರವಾಸಿಗರು ಈ ವರ್ಷ ಬರಲು ಹಿಂದೇಟು ಹಾಕುತ್ತಿದ್ದಾರೆ.

ಒಟ್ಟಾರೆಯಾಗಿ ಅವಧಿ ಪೂರ್ವ ಅಬ್ಬರದಿಂದ ಸುರಿಯುತ್ತಿರುವ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿಯ ಸೌಂದರ್ಯಕ್ಕೆ ಜೀವ ಕಳೆ ಬಂದಿದೆ. ಆಮೆ ಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಬೇಗ ಮುಗಿದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇನ್ನಷ್ಟು ಇಂಬು ಸಿಗಲಿದೆ.