ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕೂದಲೆಳೆ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾಗಿದ್ದ ದೇಶದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಒಲಿಂಪಿಕ್ಸ್ನಲ್ಲಿ ಪದಕ ವಂಚಿತರಾದ ಹತಾಶೆಯಲ್ಲಿ ವೃತ್ತಿಬದುಕಿಗೆ ವಿದಾಯ ಹೇಳಿದ್ದ ವಿನೇಶ್, ಇದೀಗ ಸರ್ಕಾರಿ ಉದ್ಯೋಗಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಉತ್ತರ ರೈಲ್ವೆಯಲ್ಲಿ OSD ಆಗಿ ಕಾರ್ಯನಿರ್ವಹಿಸುತ್ತಿದ್ದ ವಿನೇಶ್, ತಮ್ಮ ರಾಜೀನಾಮೆಯ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಇದಲ್ಲದೆ ತಮ್ಮ ನಿರ್ಧಾರಕ್ಕೆ ಸೂಕ್ತ ಕಾರಣವನ್ನೂ ನೀಡಿರುವ ಅವರು, ತನ್ನ ಕುಟುಂಬ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಈ ಕೆಲಸ ಬಿಡುತ್ತಿದ್ದೇನೆ ಎಂದು ಬರೆದಿದ್ದಾರೆ.
ಇನ್ನು ವಿನೇಶ್ ಫೋಗಟ್ ಬರೆದಿರುವ ರಾಜೀನಾಮೆ ಪತ್ರದ ಸಾರಾಂಶವನ್ನು ನೋಡುವುದಾದರೆ.. ‘ಭಾರತೀಯ ರೈಲ್ವೆಗೆ ಸೇವೆ ಸಲ್ಲಿಸುವುದು ನನ್ನ ಜೀವನದಲ್ಲಿ ಸ್ಮರಣೀಯ ಮತ್ತು ಹೆಮ್ಮೆಯ ಸಮಯವಾಗಿದೆ. ನನ್ನ ಜೀವನದ ಈ ಹಂತದಲ್ಲಿ, ನಾನು ರೈಲ್ವೆ ಸೇವೆಯಿಂದ ಹೊರಬರಲು ನಿರ್ಧರಿಸಿದ್ದು, ನನ್ನ ರಾಜೀನಾಮೆ ಪತ್ರವನ್ನು ಭಾರತೀಯ ರೈಲ್ವೆಯ ಸಕ್ಷಮ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ. ರಾಷ್ಟ್ರದ ಸೇವೆಯಲ್ಲಿ ರೈಲ್ವೆ ನನಗೆ ನೀಡಿದ ಈ ಅವಕಾಶಕ್ಕಾಗಿ ನಾನು ಭಾರತೀಯ ರೈಲ್ವೆ ಕುಟುಂಬಕ್ಕೆ ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮೇಲೆ ಹೇಳಿದಂತೆ ಉತ್ತರ ರೈಲ್ವೇಯಲ್ಲಿ OSD ಆಗಿ ಸೇವೆ ಸಲ್ಲಿಸುತ್ತಿದ್ದ ವಿನೇಶ್ ಫೋಗಟ್ ಅವರಿಗೆ ಉತ್ತಮ ಸಂಬಳ ನೀಡಲಾಗುತ್ತಿತ್ತು. ವರದಿಗಳ ಪ್ರಕಾರ, ರೈಲ್ವೇ ಓಎಸ್ಡಿ ಹುದ್ದೆಗೆ ವಾರ್ಷಿಕವಾಗಿ 15 ರಿಂದ 17 ಲಕ್ಷ ರೂ. ವೇತನ ನೀಡಲಾಗುತ್ತದೆ.
ಇದೀಗ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿರುವ ವಿನೇಶ್, ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಕಳೆದ ಕೆಲವು ದಿನಗಳಿಂದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಕಾಂಗ್ರೆಸ್ ಪಕ್ಷ ಸೇರಬಹುದು ಎಂಬ ಊಹಾಪೋಹಗಳಿವೆ. ಇದಕ್ಕೆ ಪೂರಕವಾಗಿ ವಿನೇಶ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಭೇಟಿ ಮಾಡಿದ್ದರು.
ಹೀಗಿರುವಾಗ ವಿನೇಶ್ ಮತ್ತು ಬಜರಂಗ್ ಹರ್ಯಾಣ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಂಕಾಕ್ಷಿಗಳಾಗಿದ್ದಾರೆ ಎಂಬ ಊಹಾಪೋಹವಿದೆ. ಅಕ್ಟೋಬರ್ 1 ರಂದು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಿತ್ತು. ಆದರೆ ಚುನಾವಣಾ ಆಯೋಗ ಅದನ್ನು ಮುಂದೂಡಿ ಮುಂದಿನ ದಿನಾಂಕವನ್ನು ಅಕ್ಟೋಬರ್ 5 ಎಂದು ನೀಡಿದೆ. ಅಕ್ಟೋಬರ್ 5 ರಂದು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದರ ಫಲಿತಾಂಶ ಅಕ್ಟೋಬರ್ 8 ರಂದು ಬಹಿರಂಗಗೊಳ್ಳಲಿದೆ.