
ರೂಪಾಯಿ 2 ಸಾವಿರ ನೋಟು ಹಿಂಪಡೆದ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿರುವುದು ಗೊತ್ತೇ ಇದೆ. ರೂ. 2 ಸಾವಿರ ನೋಟುಗಳನ್ನು ಹಿಂಪಡೆದ ಬಳಿಕ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ ಮೊದಲನೆಯದು ರೂ 1 ಸಾವಿರದ ನೋಟುಗಳು ಮತ್ತೆ ಚಲಾವಣೆಗೆ ತರುತ್ತಾರಾ? ಇದಕ್ಕೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧಿಕೃತ ಪ್ರತಿಕ್ರಿಯೆ ನೀಡಿದ್ದಾರೆ. 2 ಸಾವಿರ ರೂಪಾಯಿ ನೋಟು ಹಿಂಪಡೆದಿರುವ ಕುರಿತು ಪ್ರಥಮ ಬಾರಿಗೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ಏನು ಹೇಳಿದ್ದಾರೆಂದರೆ ರೂ. 1,000 ನೋಟುಗಳ ಮರು ಚಲಾವಣೆಯ ಸುದ್ದಿ ಕೇವಲ ಊಹಾಪೋಹ ಎಂದು ಅವರು ತಳ್ಳಿಹಾಕಿದ್ದಾರೆ. ಠೇವಣಿ ಇಡುವಾಗ 2 ಸಾವಿರದ ನೋಟುಗಳ ಒಟ್ಟು ಮೊತ್ತ ರೂ. 50,000 ಕ್ಕಿಂತ ಹೆಚ್ಚು ಇದ್ದರೆ ಪ್ಯಾನ್ ಸಲ್ಲಿಸುವ ಅವಶ್ಯಕತೆ ಅನ್ವಯಿಸುತ್ತದೆ ಎಂದು ಅವರು ಹೇಳಿದರು.

ಮಂಗಳವಾರದಿಂದ ಬ್ಯಾಂಕ್ ಗಳಲ್ಲಿ ನೋಟು ವಿನಿಮಯ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು. 2,000 ರೂಪಾಯಿ ನೋಟುಗಳನ್ನು ಬೇರೆ ನೋಟುಗಳೊಂದಿಗೆ ಬದಲಿಸಲು ಸಾಕಷ್ಟು ನಗದು ಲಭ್ಯವಿದೆ. ಚಲಾವಣೆಯಲ್ಲಿರುವ ಕರೆನ್ಸಿಯಲ್ಲಿ 2,000 ರೂ ನೋಟುಗಳ ಪಾಲು ಕೇವಲ 10.18% ಆಗಿರುವುದರಿಂದ ಆರ್ಥಿಕತೆಯ ಮೇಲೆ ಹಿಂಪಡೆಯುವಿಕೆಯ ಪರಿಣಾಮವು ಕಡಿಮೆಯಾಗಿದೆ ಎಂದು ಶಕ್ತಿದಾಸ್ ಹೇಳಿದರು.

ಸೆಪ್ಟಂಬರ್ 30 ರೊಳಗೆ 2,000 ರೂಪಾಯಿ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಖಜಾನೆ ತಲುಪಲಿವೆ ಎಂದು ಶಕ್ತಿಕಾಂತ ದಾಸ್ ಭವಿಷ್ಯ ನುಡಿದಿದ್ದಾರೆ. ಹಣ ವಿನಿಮಯಕ್ಕಾಗಿ ಜನರು ಬ್ಯಾಂಕ್ಗಳಿಗೆ ಮುಗಿಬೀಳುವ ಅಗತ್ಯವಿಲ್ಲ, ನಾಲ್ಕು ತಿಂಗಳ ಕಾಲಾವಕಾಶವಿದೆ ಎಂದು ಭರವಸೆ ನಿಡಿದ್ದಾರೆ.

ದೊಡ್ಡ ಮೊತ್ತದ ರೂ. 2 ಸಾವಿರ ನೋಟುಗಳ ಠೇವಣಿ ಪರಿಶೀಲಿಸುವುದನ್ನು ಆದಾಯ ತೆರಿಗೆ ಇಲಾಖೆ ನೋಡಿಕೊಳ್ಳಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಬ್ಯಾಂಕ್ ಗಳಿಗೆ ನಿರ್ದಿಷ್ಟ ನಿಯಮಾವಳಿಗಳಿವೆ. ಅವನ್ನು ಈಗಲೇ ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು. ರೂ. 1000 ನೋಟು ವಾಪಸ್ ತರುತ್ತಾರೆ ಎಂಬ ಸುದ್ದಿಯನ್ನು ಆರ್ ಬಿಐ ಗವರ್ನರ್ ತಳ್ಳಿ ಹಾಕಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ನೋಟು ವಿನಿಮಯಕ್ಕೆ ಬರುವವರಿಗೆ ನೆರಳು, ನೀರು ಮುಂತಾದ ಸೌಲಭ್ಯ ಕಲ್ಪಿಸಬೇಕು ಎಂದು ಶಕ್ತಿಕಾಂತ ದಾಸ್ ತಿಳಿಸಿದರು.
Published On - 5:30 pm, Mon, 22 May 23