ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ; ಯಾರ್ಯಾರು ಶುಭ ಕೋರಿದರು ಗೊತ್ತಾ?

|

Updated on: Nov 10, 2023 | 9:00 PM

ಬಿಜಿಪಿ ನೂತನ ರಾಜ್ಯಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಆಯ್ಕೆ ಹಿನ್ನಲೆ ರಾಜ್ಯಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅದರಂತೆ ಯಾದಗಿರಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ; ಯಾರ್ಯಾರು ಶುಭ ಕೋರಿದರು ಗೊತ್ತಾ?
ಬಿವೈ ವಿಜಯೇಂದ್ರ
Follow us on

ಬೆಂಗಳೂರು, ನ.10: ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಆಸೆಯಂತೆ ಪುತ್ರ ಬಿವೈ ವಿಜಯೇಂದ್ರ(BY Vijayendra) ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಉನ್ನತ ಸ್ಥಾನವನ್ನೇ ಅಲಂಕರಿಸಿದ್ದಾರೆ. ಈ ಕುರಿತು ಬೆಂಗಳೂರಿ(Bengaluru)ನಲ್ಲಿ ಮಾತನಾಡಿದ ಅವರು ‘ಮುಂದಿನ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುವುದು. ಅಲ್ಲಿ ಶಾಸಕರ ಅಭಿಪ್ರಾಯ ಪಡೆದು ವಿಪಕ್ಷ ನಾಯಕನ ಆಯ್ಕೆ ಮಾಡಲಾಗುವುದು ಎಂದರು. ಇನ್ನು ಇದೇ ವೇಳೆ ‘ಯಡಿಯೂರಪ್ಪ ಅವರು ನಡ್ಡಾ ಜೊತೆ ಚರ್ಚೆ ಮಾಡಿದ್ದಾರೆ. ಅವರ ಮಗ ಎನ್ನುವ ಕಾರಣಕ್ಕೆ ನನಗೆ ಈ ಹುದ್ದೆ ಕೊಟ್ಟಿಲ್ಲ. ಯಡಿಯೂರಪ್ಪ ಮಗ ಎನ್ನುವ ಹೆಮ್ಮೆ ಇದೆ. ಪಕ್ಷ ಬಿಡುವ ಯೋಚನೆಯಲ್ಲಿ ಇರುವವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಶಾಸಕಾಂಗ ಪಕ್ಷದ ಸಭೆಗೆ ದೆಹಲಿಯಿಂದ ವೀಕ್ಷಕರು ಬರಲಿದ್ದಾರೆ ಎಂದು ಹೇಳಿದರು.

ಬಿ.ವೈ. ವಿಜಯೇಂದ್ರಗೆ ಅಭಿನಂದನೆಯ ಮಹಾಪೂರ

ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಂಗಳೂರಿನಲ್ಲಿ ನಿರ್ಗಮಿತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ. ಬಿ.ವೈ.ವಿಜಯೇಂದ್ರಗೆ ತಳಮಟ್ಟದಿಂದ ಸಂಘಟನೆ ಮಾಡುವ ಶಕ್ತಿಯಿದೆ‌. ಇನ್ನು ಕಳೆದ 4 ವರ್ಷಗಳ ಕಾಲ ಪಕ್ಷದ ರಾಜ್ಯಾಧ್ಯಕ್ಷನಾಗಿರುವ ತೃಪ್ತಿ ನನಗಿದೆ. ಎಲ್ಲರೂ ಒಗ್ಗೂಡಿ ಪಕ್ಷ ಸಂಘಟಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಕರಾವಳಿಯಿಂದ ಬಂದವನು ಏನು ರಾಜ್ಯವನ್ನು ಸುತ್ತುತ್ತಾನೆ ಅಂದಿದ್ದರು. ಅದಕ್ಕೆ ಅಪವಾದವಾಗಿ ಇಡೀ ರಾಜ್ಯವನ್ನು ಸುತ್ತಿ ಸಂಘಟನೆ ಮಾಡಿದ್ದೇನೆ. ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯಗಳು ಕಂಡುಬರುತ್ತಿವೆ. ಕಳೆದ 6 ತಿಂಗಳ ಅವಧಿಯಲ್ಲಿ ಏನೂ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲದರ ವಿರುದ್ಧ ನೂತನ ಅಧ್ಯಕ್ಷ ವಿಜಯೇಂದ್ರ ಹೋರಾಟ ಮಾಡುತ್ತಾರೆ ಎಂದರು.

ಇದನ್ನೂ ಓದಿ:ಮುಂದಿನ ವಾರ ಪ್ರತಿಪಕ್ಷ ನಾಯಕನ ಆಯ್ಕೆ: ಬಿಜೆಪಿ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ

ಟ್ವೀಟ್ ಮೂಲಕ ಶುಭಕೋರಿದ ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ ಹಿನ್ನಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ
ಶುಭಕೋರಿದ್ದಾರೆ.  ‘ನೂತನ ಅಧ್ಯಕ್ಷ ವಿಜಯೇಂದ್ರಗೆ ಶುಭಾಶಯಗಳು, ಸಂಘಟನೆಯಲ್ಲಿ ಕ್ರಿಯಾಶೀಲರಾದ ಯುವ ನಾಯಕ ಇವರು, ಕಿರಿಯ ವಯಸ್ಸಿನಲ್ಲಿಯೇ ಬಹುದೊಡ್ಡ ಜವಾಬ್ದಾರಿ ಅರಸಿ ಬಂದಿದೆ. ಗುರುತರ ಹೊಣೆ ಸಮರ್ಥವಾಗಿ ನಿಭಾಯಿಸುತ್ತಾರೆಂಬ ವಿಶ್ವಾಸವಿದೆ. ನೂತನ ಅಧ್ಯಕ್ಷ ವಿಜಯೇಂದ್ರಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿರುವುದು ಸಂತಸ ತಂದಿದೆ- ಶಾಸಕ ಚನ್ನಬಸಪ್ಪ

ಶಿವಮೊಗ್ಗ:  ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿರುವುದು ಸಂತಸ ತಂದಿದೆ ಎಂದು ಶಿವಮೊಗ್ಗ ನಗರ ಬಿಜೆಪಿ ಶಾಸಕ ಚನ್ನಬಸಪ್ಪ ಹೇಳಿದ್ದಾರೆ. ವರಿಷ್ಠರು ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಟೀಕೆಗೆ ಉತ್ತರ ಕೊಟ್ಟಿದ್ದಾರೆ. ಯುವ ನಾಯಕನಿಗೆ ಅವಕಾಶ ಸಿಕ್ಕಿದ್ದು, ಮುಂಬರುವ ದಿನದಲ್ಲಿ ಪಕ್ಷದ ಸಂಘಟನೆ ಇನ್ನೂ ಚುರುಕಾಗುತ್ತದೆ. ಯುವ ಸಮೂಹ ಹೆಚ್ಚು ಬಿಜೆಪಿಯತ್ತ ಸೆಳೆಯಲು ಪಕ್ಷದ ಸಂಘಟನೆಗೆ ಅನುಕೂಲವಾಗಿದ್ದು, ತಂದೆಯ ಗರಡಿಯಲ್ಲಿ ಪಳಗಿದ ವಿಜಯೇಂದ್ರ, ಮತ್ತಷ್ಟು ಉತ್ತಮ ಕೆಲಸ ಮಾಡುವ ವಿಶ್ವಾಸ ಇದೆ ಎಂದರು.

ಇದನ್ನೂ ಓದಿ:BY Vijayendra: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ

ಯುವಕರಿಗೆ ಮನ್ನಣೆ ನೀಡಿದ ಬಿಜೆಪಿ- ಸಂಸದ ಪ್ರತಾಪ್ ಸಿಂಹ

ಮೈಸೂರು: ಬಿಜೆಪಿ ಯುವಕರಿಗೆ ಮನ್ನಣೆ ನೀಡಲಾಗಿದೆ. ಜನರು ಹೊಸತನ ಕೇಳುತ್ತಿದ್ದು, ವಿಜಯೇಂದ್ರ ರಾಜ್ಯಧ್ಯಕ್ಷರಾಗಿ ನೇಮಕವಾಗಿರುವುದು ಪಕ್ಷದ ದೃಷ್ಟಿಯಿಂದ ಅನುಕೂಲವಾಗಲಿದೆ. ಯುವಕರನ್ನೆ ಸೆಳೆಯಲು ಯುವಕರನ್ನ ನೇಮಕಮಾಡಲಾಗಿದೆ. ಯುವಕರಿಗೆ ಮನ್ನಣೆ ಹಾಕಿರುವುದು ಬಿಜೆಪಿಯಲ್ಲಿ ಇದು ಹೊಸದಲ್ಲ. ಈ ಸಂಪ್ರದಾಯ ಮೊದಲಿನಿಂದಲು ಇದೆ. ಫಡ್ನವಿಸ್ ಅವರಿಗೆ ಚಿಕ್ಕ ವಯಸ್ಸಿಗೆ ಅಧಿಕಾರ ನೀಡಲಾಗಿತ್ತು. ಅದೇ ರೀತಿ ವಿಜಯೇಂದ್ರರಿಗೆ ಯುವಕರನ್ನ ಸೆಳೆಯುವ ಶಕ್ತಿ ಇದೆ. ಲೋಕಸಭಾ ಚುನಾವಣೆ ನಮ್ಮ ದೇವರು ಮೋದಿ ಹೆಸರಿನಲ್ಲಿ ನಡೆಯಲಿದೆ. ಲೋಕಸಭಾ ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ. ಆದ್ರೆ, ವಿಜಯೇಂದ್ರ ರಾಜ್ಯ ರಾಜಕಾರಣಕ್ಕೆ ಸಮರ್ಥ ನಾಯಕ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಯ್ಕೆ ಸಂತಸ ತಂದಿದೆ; ಆರಗ ಜ್ಞಾನೇಂದ್ರ

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಆಯ್ಕೆ ಆಗಿರುವುದು ಸಂತಸ ತಂದಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ವಿಜಯೇಂದ್ರ ಅವರು ಈ ಜವಾಬ್ದಾರಿ ಉತ್ತಮವಾಗಿ ನಿಭಾಯಿಸುವ ವಿಶ್ವಾಸ ನಮಗಿದೆ ಎನ್ನುವ ಮೂಲಕ ವಿಜಯೇಂದ್ರಗೆ ಶುಭ ಕೋರಿದರು. ಇನ್ನು ಬಿಜಿಪಿ ನೂತನ ರಾಜ್ಯಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಆಯ್ಕೆ ಹಿನ್ನಲೆ ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿದೆ. ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಸಂಭ್ರಮ ಮನೆ ಮಾಡಿದ್ದು, ವಿಜಯೇಂದ್ರ ಪರ ಘೋಷಣೆ ಕೂಗಿ, ಪಟಾಕಿ ಹೊಡೆದು ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ