Sunil Kumar: ಆರ್​ಎಸ್​ಎಸ್​, ಎಬಿವಿಪಿ ಹಿನ್ನೆಲೆಯುಳ್ಳ ಸುನಿಲ್ ಕುಮಾರ್​ಗೆ ಲಭಿಸಿತು ಇಂಧನ ಖಾತೆ

| Updated By: ಸಾಧು ಶ್ರೀನಾಥ್​

Updated on: Aug 07, 2021 | 12:20 PM

2004 ರಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ, ಬಿಜೆಪಿಯ ಮುಖ್ಯ ಸಚೇತಕ ಮತ್ತು ನವೆಂಬರ್ 2020 ರಿಂದ ಕೇರಳ ಬಿಜೆಪಿಯ ಸಹ ಉಸ್ತುವಾರಿಯೂ ಆಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್​ಗೆ ಸಚಿವ ಸ್ಥಾನ ನೀಡಲಾಗಿದೆ.

Sunil Kumar: ಆರ್​ಎಸ್​ಎಸ್​, ಎಬಿವಿಪಿ ಹಿನ್ನೆಲೆಯುಳ್ಳ ಸುನಿಲ್ ಕುಮಾರ್​ಗೆ ಲಭಿಸಿತು ಇಂಧನ ಖಾತೆ
ಸುನಿಲ್ ಕುಮಾರ್ (ಸಂಗ್ರಹ ಚಿತ್ರ)
Follow us on

ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಬಸವರಾಜ ಬೊಮ್ಮಾಯಿ ಸ್ವೀಕರಿಸಿ ಸರಿಯಾಗಿ ಒಂದು ವಾರದ ಬಳಿಕ ಇಂದು (ಆಗಸ್ಟ್ 4) ಸಚಿವ ಸಂಪುಟದ ಮಂತ್ರಿಗಳ ಘೋಷಣೆ ಆಗಿದೆ. ಜೊತೆಜೊತೆಗೆ ನೂತನ ಮಂತ್ರಿಗಳ ಪ್ರಮಾಣ ವಚನ ಸಮಾರಂಭವೂ ನಡೆದಿದೆ. ಕಿರಿಯರಿಗೆ ಮಣೆ, ಹಿರಿಯರಿಗೆ ಕೊಕ್, ಭೌಗೋಳಿಕ, ಜಾತಿವಾರು ಪ್ರಾತಿನಿಧ್ಯ ಇತ್ಯಾದಿ ವಿಮರ್ಶೆಗಳ ನಡುವೆಯೇ ಹೊಸ ಸಚಿವರು ಯಾರೆಂಬುದು ಗೊತ್ತಾಗಿದೆ. ನೂತನ ಸಚಿವರಲ್ಲಿ ಕೆಲವು ಹೊಸ ಮುಖಗಳಿಗೂ ಮಣೆ ಹಾಕಲಾಗಿದೆ.

ವಿ. ಸುನಿಲ್ ​ಕುಮಾರ್ ಅವರಿಗೆ ಸಿಕ್ಕಿದೆ ಮಹತ್ವದ ಇಂಧನ ಖಾತೆ:
2004 ರಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ, ಬಿಜೆಪಿಯ ಮುಖ್ಯ ಸಚೇತಕ ಮತ್ತು ನವೆಂಬರ್ 2020 ರಿಂದ ಕೇರಳ ಬಿಜೆಪಿಯ ಸಹ ಉಸ್ತುವಾರಿಯೂ ಆಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್​ಗೆ ಸಚಿವ ಸ್ಥಾನ ನೀಡಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​), ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ರಾಷ್ಟ್ರೀಯವಾದಿ, ಹಿಂದೂವಾದಿ ಚಿಂತನೆಯ ಹಿನ್ನೆಲೆಯುಳ್ಳ ಸುನಿಲ್ ಕುಮಾರ್ ನಳಿನ್ ಕುಮಾರ್ ಆಪ್ತವಲಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಸುನಿಲ್ ಕುಮಾರ್ ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳದಲ್ಲಿ ಹಾಗೂ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೆದಿದ್ದಾರೆ. ಚಿಕ್ಕಮಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕಲಾ ಪದವಿ ಪಡೆದ ಸುನಿಲ್ ಕುಮಾರ್ ಕೆಲಕಾಲ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ.

2004 ನೇ ಇಸವಿಯ ಬಳಿಕ ಆ ಮೊದಲ ಕಾರ್ಕಳ ಶಾಸಕರಾಗಿದ್ದ ಕಾಂಗ್ರೆಸ್​ನ ದಿ. ಗೋಪಾಲ ಭಂಡಾರಿ ಅವರನ್ನು ಸೋಲಿಸಿ ಸುನಿಲ್ ಕುಮಾರ್ ಅಧಿಕಾರ ವಹಿಸಿದರು. ನಂತರ 2008 ರಲ್ಲಿ ಗೋಪಾಲ ಭಂಡಾರಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋಲುಂಡರು. ಬಳಿಕ, 2013 ಮತ್ತು 2018ರಲ್ಲಿ ಗೋಪಾಲ ಭಂಡಾರಿ ಅವರನ್ನು ಸೋಲಿಸಿ ಮತ್ತೆ ಕಾರ್ಕಳ ಶಾಸಕರಾಗಿ ಆಯ್ಕೆಯಾದರು.

ಈ ಮಧ್ಯೆ, 2012ರಲ್ಲಿ ಡಿ.ವಿ. ಸದಾನಂದ ಗೌಡ ಕರ್ನಾಟಕ ಮುಖ್ಯಮಂತ್ರಿ ಆಗಿದ್ದರಿಂದ ತೆರವಾಗಿದ್ದ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದ ಸುನಿಲ್ ಕುಮಾರ್ ಕಾಂಗ್ರೆಸ್​ನ ಜಯಪ್ರಕಾಶ್ ಹೆಗ್ಡೆ ವಿರುದ್ಧ ಸೋಲುಂಡಿದ್ದರು. 2019ರ, ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಸುನಿಲ್ ಕುಮಾರ್​ಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು.

ಇದನ್ನೂ ಓದಿ: BC Nagesh: ಜನರ ಕೈಗೆ ಸಿಗುವ ನಾಯಕ ತಿಪಟೂರಿನ ಬಿ.ಸಿ.ನಾಗೇಶ್​ಗೆ ಸಚಿವ ಸ್ಥಾನ

Karnataka Cabinet: ಚೊಚ್ಚಲ ಸಚಿವ ಸಂಪುಟ ರಚನೆ ಅಂತಿಮ; ಡಿಸಿಎಂ ಸ್ಥಾನ ಇಲ್ಲ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

(CM Basavaraj Bommai Cabinet Sunil Kumar MLA from Karkala constituency take oath as minister here is the profile)

Published On - 3:10 pm, Wed, 4 August 21