ಕಾಂಗ್ರೆಸ್ ಅಸಮಾಧಾನ ಕಿಚ್ಚು ದಿಲ್ಲಿಗೆ ಶಿಫ್ಟ್, ಆ.2ಕ್ಕೆ ಮೀಟಿಂಗ್.. ‘ಸಮನ್ವಯ’ಕ್ಕೆ ‘ಹೈ’ ಪ್ಲ್ಯಾನ್

| Updated By: ರಮೇಶ್ ಬಿ. ಜವಳಗೇರಾ

Updated on: Jul 30, 2023 | 6:32 PM

ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ ಕುದಿಯುತ್ತಿರುವ ಅಸಮಾಧಾನ ಕಿಚ್ಚು, ಇದೀಗ ಹೈಕಮಾಂಡ್ ಅಂಗಳಕ್ಕೆ ಹೋಗಿದೆ. ಸಚಿವರು ಮತ್ತು ಶಾಸಕರ ಮುನಿಸಿಗೆ ಮದ್ದರೆಯಲು ಹೈಕಮಾಂಡ್ ಮುಂದಾಗಿದ್ದು, ಆಗಸ್ಟ್ 2ಕ್ಕೆ ದೆಹಲಿಗೆ ಬನ್ನಿ ಎಂದು ಬುಲಾವ್ ನೀಡಿದೆ. ಇದೇ ವೇಳೆ ಸಮನ್ವಯ ಸಮಿತಿ ರಚನೆಯಾಗುವ ಸಾಧ್ಯತೆಯೂ ಇದೆ.

ಕಾಂಗ್ರೆಸ್ ಅಸಮಾಧಾನ ಕಿಚ್ಚು ದಿಲ್ಲಿಗೆ ಶಿಫ್ಟ್, ಆ.2ಕ್ಕೆ ಮೀಟಿಂಗ್.. ‘ಸಮನ್ವಯ’ಕ್ಕೆ ‘ಹೈ’ ಪ್ಲ್ಯಾನ್
ಡಿಕೆ ಶಿವಕುಮಾರ್​, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ
Follow us on

ಬೆಂಗಳೂರು, (ಜುಲೈ 30): ಅನುದಾನದ ಆಕ್ರೋಶ. ವರ್ಗಾವಣೆ ಸಮರ. ಮಂತ್ರಿ ಸ್ಥಾನದ ಕಿಚ್ಚು. ಸಚಿವರು ಸ್ಪಂದಿಸುತ್ತಿಲ್ಲವೆಂಬ ಸಿಟ್ಟು. ಎಲ್ಲವೂ ಒಮ್ಮೆಲೇ ಸ್ಫೋಟಗೊಂಡಿದೆ. ಪರಿಣಾಮ ಕರ್ನಾಟಕ ಕಾಂಗ್ರೆಸ್ (Karnataka Congress) ಮನೆಯಲ್ಲಿ ಅಸಮಾಧಾನದ ಬೆಂಕಿ ಹೊತ್ತಿ ಉರಿಯುತ್ತಿದೆ. ಶಾಸಕಾಂಗ ಪಕ್ಷದ ಸಭೆ(CLP Meeting) ಕರೆದಿದ್ದ ಸಿಎಂ ಸಿದ್ದರಾಮಯ್ಯ(Siddaramaiah), ತಣ್ಣೀರು ಸುರಿಯುವ ಯತ್ನ ಮಾಡಿದ್ರೂ, ಕೆಲ ಶಾಸಕರ ಎದೆಯೊಳಗಿನ ಇನ್ನೂ ಕುದಿಯುತ್ತಲೇ ಇದೆ. ಹೀಗಾಗಿ ಹೈಕಮಾಂಡ್ ಎಂಟ್ರಿ ಕೊಟ್ಟಿದ್ದು, ಆಗಸ್ಟ್ 2ಕ್ಕೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಇದೇ ವೇಳೆ ಸಮನ್ವಯ ಸಮಿತಿ ರಚನೆಯಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ರಾಜೀನಾಮೆ ವಿಚಾರ ಎತ್ತಿದ್ರಾ ಶಾಸಕರು? ಇಲ್ಲಿದೆ ಸಭೆಯ ಇನ್​ಸೈಡ್​ ಮಾಹಿತಿ

ಕಾಂಗ್ರೆಸ್ ಮನೆಯ ಬೆಂಕಿ ದೆಹಲಿಗೆ ಶಿಫ್ಟ್!

ಸಚಿವರು ಸ್ಪಂದಿಸುತ್ತಿಲ್ಲ ಎಂದು ಬಿ.ಆರ್ ಪಾಟೀಲ್ ಸೇರಿ ಹಲವು ಸಚಿವರು ಸಹಿ ಮಾಡಿದ್ದ ಪತ್ರ ಕಾಂಗ್ರೆಸ್‌ ಕೋಟೆಯನ್ನ ಅಲುಗಾಡಿಸಿತ್ತು. ಮೊನ್ನೆ ಸಭೆ ನಡೆಸಿದ್ದ ಸಿಎಂ, ಫುಲ್ ಕ್ಲಾಸ್ ತೆಗೆದುಕೊಂಡು ಅನುದಾನದ ಭರವಸೆಯನ್ನೂ ನೀಡಿದ್ದರು. ಆದ್ರೆ, ಶಾಸಕರ ಆಕ್ರೋಶ ತಣ್ಣಗೆ ಆದಂತೆ ಕಾಣುತ್ತಿಲ್ಲ. ಹೀಗಾಗಿ ಸಿಎಂ, ಡಿಸಿಎಂ ಹಾದಿಯಾಗಿ 37 ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಸಚಿವರು ಸೇರಿ ಬಸವರಾಜ ರಾಯರೆಡ್ಡಿ, ರಮೇಶ್ ಕುಮಾರ್, ಆರ್.ವಿ.ದೇಶಪಾಂಡೆ, ಬಿ.ಎಲ್.ಶಂಕರ್, ಬಿ.ಕೆ.ಹರಿಪ್ರಸಾದ್, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರಿಗೂ ಆಹ್ವಾನ ನೀಡಿದೆ.

ಅಂದಹಾಗೆ ಅಗಸ್ಟ್ 2 ರಂದು ನಡೆಯುವ ಕಾಂಗ್ರೆಸ್ ಹಿರಿಯ ಮೀಟಿಂಗ್​ನ ಅಜೆಂಡಾ ಏನು ಎಂಬ ಗುಸು ಗುಸು ಚರ್ಚೆ ಕೈ ಪಾಳಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ಅತ್ತ ಕೈ ನಾಯಕರು ಮುಂದಿನ ಲೋಕಸಭಾ ಚುನಾವಣೆಗೆ ತಯಾರಿಗೆ ಸಂಬಂಧಿಸಿದ್ದು ಎಂದು ಹೇಳುತ್ತಿದ್ದರೂ ಅಸಲಿ ಕಹಾನಿಯೇ ಬೇರೆ ಇದೆ ಎನ್ನುವುದು ದೆಹಲಿಯ 10 ಜನಪತ್ ರಸ್ತೆಯಿಂದ ಕೇಳಿ ಬರುತ್ತಿರುವ ಮಾಹಿತಿ. ಸಚಿವರು, ಶಾಸಕರ ಮುನಿಸು ಅತಿರೇಖಕ್ಕೆ ತಿರುಗಿದ್ರೆ, ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎನ್ನುವುದನ್ನು ಅರಿತ ಹೈಕಮಾಂಡ್ ಅಲರ್ಟ್ ಆಗಿದೆ. ಹಾಗಾದ್ರೆ, ಆಗಸ್ಟ್ 2ರ ಸಭೆಯ ಅಜೆಂಡಾ ಏನು ಎನ್ನುವುದು ಈ ಕೆಳಗಿನಂತಿದೆ ನೋಡಿ.

‘ಹೈ’ ಸಭೆಯಲ್ಲಿ ಏನೆಲ್ಲ ಚರ್ಚೆ?

ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆಯಾಗುವ ಸಾಧ್ಯತೆ ಇದ್ದು, ಸರ್ಕಾರದ ಪ್ರಮುಖ ನೀತಿ ನಿರ್ಧಾರಗಳನ್ನ ರಚಿಸುವುದು ನಾಮನಿರ್ದೇಶನ, ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಸಂಘಟಿತ ತೀರ್ಮಾನ ಕೈಗೊಳ್ಳುವುದು. ಶಾಸಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಶಾಸಕರ ಹಾಗೂ ಸಚಿವರ ನಡುವೆ ಕೊಂಡಿಯಾಗಿ ಕೆಲಸ ಮಾಡಲು ಈ ಸಮಿತಿ ಸಹಕಾರಿ ಎಂಬುದು ಕೆಲ ಹಿರಿಯ ನಾಯಕರ ಮಾತು. ಏಕಪಕ್ಷೀಯ ನಿರ್ಧಾರದ ಬದಲು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದಕೊಳ್ಳುವಂತೆ ಮಾಡುವುದು. ಈ ಸಮಿತಿಯಲ್ಲಿ ಸಿಎಂ, ಡಿಸಿಎಂ ಸೇರಿ ಹಿರಿಯ ನಾಯಕರು ಇರಲಿದ್ದಾರೆ. ಇದರ ಜತೆ ಜತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬಗ್ಗೆ ಸಹ ಚರ್ಚೆಯಾಗುವ ಸಾಧ್ಯತೆ ಇದ್ದು, ರಾಜಸ್ಥಾನ, ಮಧ್ಯಪ್ರದೇಶ, ತೆಲಗಾಂಣದ ಚುನಾವಣೆ ಹಿನ್ನೆಲೆ ಸುರ್ಜೇವಾಲಗೆ ಬೇರೆ ಜವಾಬ್ದಾರಿ ಕೊಟ್ಟು, ಕರ್ನಾಟಕಕ್ಕೆ ಹೊಸಬರನ್ನ ಕಳುಹಿಸಲಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ.

ಶಾಸಕರ ದೂರು ದುಮ್ಮಾನಗಳನ್ನ ಆಲಿಸಿ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಮಿತಿ ಅವಶ್ಯಕತೆ ಇದೆ ಎಂಬುದು ಕೆಪಿಸಿಸಿ ಒಳಗಿನಿಂದ ಕೇಳಿ ಬರುತ್ತಿರುವ ಮಾತು. ಹೀಗಾಗಿ ಏಕಪಕ್ಷಿಯ ನಿರ್ಧಾರದ ಬದಲು ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಮನ್ವಯ ಸಮಿತಿ ಮಾದರಿಯ ತಂಡವನ್ನ ರಚಿಸುವ ಸಾಧ್ಯತೆ ಇದೆ. ಈ ಸಮಿತಿಯಲ್ಲಿ ಕಾಂಗ್ರೆಸ್ ಮೂರನೇ ಬಣದ ನಾಯಕರು ಎಂಟ್ರಿ ಕೊಟ್ಟರು ಅಚ್ಚರಿ ಏನಿಲ್ಲ. ಇದಾಗ್ಯೂ ಅಸಮಾಧಾನಿತರು ಸಚಿವರ ವಿರುದ್ದ ಮತ್ತದೇ ಆರೋಪಗಳ ಹೈಕಮಾಂಡ್ ಮುಂದೆ ಮಂಡಿಸುವ ಸಾಧ್ಯತೆ ಇದೆ. ಇನ್ನೂ ಈಗಾಗಲೇ ಮೂಲೆಗುಂಪಾಗಿ, ರಾಜಕೀಯ ನಿರಾಶ್ರಿತರಾಗಿರುವ ಕೆಲ ನಾಯಕರಿಗೆ ಈ ಸಭೆ ಕಾಳಜಿ ಕೇಂದ್ರದಂತೆ ಸಿಕ್ಕಿದ್ದು, ಸಿಕ್ಕ ಅವಕಾಶ ಬಿಡುವುದು ಬೇಡ ಎಂದು ತೀರ್ಮಾನಿಸಿದ್ದಾರೆ.

ಒಟ್ಟಿನಲ್ಲಿ ಆಗಸ್ಟ್ ಎರಡರ ದೆಹಲಿ ಯಾತ್ರೆ ಕುತೂಹಲ ಮೂಡಿಸಿದ್ದು, ಕೆಲ ನಾಯಕರು ಆಷಾಢ ಆದ ಮೇಲೆ ಶ್ರಾವಣ ಬಂದೇ ಬರುತ್ತೆ ತಾಳ್ಮೆ ಇರಲಿ ಅಂತಿದ್ರೆ, ಮತ್ತೆ ಕೆಲವರು ಆಷಾಢದ ಮಳೆಯಲ್ಲೇ ಬೀಜ ಬಿತ್ತಿ ಬಿಡೋಣ ಆಗಿದ್ದು ಆಗಲಿ ಅಂತಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ