ಸಿಎಂ ಇಬ್ರಾಹಿಂ ನನ್ನ ಸ್ನೇಹಿತ, ಅವರು ಕಾಂಗ್ರೆಸ್​​ನಲ್ಲಿರುತ್ತಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

| Updated By: shivaprasad.hs

Updated on: Jan 28, 2022 | 4:13 PM

Siddaramaiah: ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ, ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಸಿ.ಎಂ ಇಬ್ರಾಹಿಂ ಹೇಳಿಕೆಯ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕೋಪದಲ್ಲಿ ಇಬ್ರಾಹಿಂ ಹಾಗೆ ಹೇಳಿದ್ದಾರೆ. ಅವರು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ನುಡಿದಿದ್ಧಾರೆ.

ಸಿಎಂ ಇಬ್ರಾಹಿಂ ನನ್ನ ಸ್ನೇಹಿತ, ಅವರು ಕಾಂಗ್ರೆಸ್​​ನಲ್ಲಿರುತ್ತಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಸಿಎಂ ಇಬ್ರಾಹಿಂ (C.M Ibrahim) ಕೋಪದಲ್ಲಿ ಮಾತನಾಡಿದ್ದಾರೆ. ಅವರೆಲ್ಲೂ ಹೋಗುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ನುಡಿದಿದ್ದಾರೆ. ಬೆಂಗಳೂರಿನಲ್ಲಿ ಅವರು ಮಾತನಾಡಿದರು. ನಾನು ಇನ್ನೂ ಸಿ.ಎಂ.ಇಬ್ರಾಹಿಂ ಜೊತೆ ಮಾತುಕತೆ ನಡೆಸಿಲ್ಲ. ಇಬ್ರಾಹಿಂ ಎಲ್ಲೂ ಹೋಗುವುದಿಲ್ಲ ಕಾಂಗ್ರೆಸ್‌ನಲ್ಲಿರುತ್ತಾರೆ. ಅವರು ಏನೋ ಕೋಪದಲ್ಲಿ ಮಾತನಾಡಿದ್ದಾರೆ. ಹಲವರು ಬಾರಿ ಪಕ್ಷ ಬಿಡುವ ಮಾತುಗಳನ್ನು ಹೇಳಿದ್ದಾರೆ. ರಾಜ್ಯಸಭಾ ಸದಸ್ಯನಾಗಿ ಮಾಡದ ಹಿನ್ನೆಲೆ ಜೆಡಿಎಸ್ ಬಿಟ್ಟಿದ್ದರು. ಆದರೆ ಈಗ ಸಿ.ಎಂ.ಇಬ್ರಾಹಿಂಗೆ ಅಂತಹ ಪರಿಸ್ಥಿತಿ ಬಂದಿಲ್ಲ. ಇಬ್ರಾಹಿಂ ಕೋಪದಲ್ಲಿ ಮಾತನಾಡಿದ್ದಾರೆ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಡಿ. ಸ್ನೇಹದಲ್ಲಿ ಭಿನ್ನಾಭಿಪ್ರಾಯ ಬಂದಾಗ ಕುಳಿತು ಚರ್ಚಿಸುತ್ತೇವೆ ಎಂದು ಸಿದ್ದರಾಮಯ್ಯ ನುಡಿದಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯನವರು ನನ್ನನ್ನು ಯಾರೂ ತಬ್ಬಲಿ ಮಾಡುವುದಕ್ಕೆ ಆಗುವುದಿಲ್ಲ. ರಾಜ್ಯದ ಜನರು ನನ್ನ ಜೊತೆ ಇರುವವರೆಗೆ ತಬ್ಬಲಿ ಆಗಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಿ.ಎಂ.ಇಬ್ರಾಹಿಂ ಜೆಡಿಎಸ್​​ಗೆ ಹೋಗುವುದಿಲ್ಲ ಎಂದ ಸಿದ್ದರಾಮಯ್ಯ, ಅವರು ಸುಮ್ಮನೆ ಮಾತನಾಡುತ್ತಿರುತ್ತಾರೆ. ಪರಿಷತ್ ಸದಸ್ಯರಾಗಿರುವ ಇಬ್ರಾಹಿಂ ನನಗೆ ಒಳ್ಳೆಯ ಸ್ನೇಹಿತ. ಅವರು ಏನು ಹೇಳಿದರೂ ನನಗೆ ವಿಷ್ ಮಾಡಿದಂತೆ. ಈ ಹಿಂದೆ ಬಾದಾಮಿಯಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದವರಲ್ಲಿ ಅವರೂ ಒಬ್ಬರು ಎಂದು ಹೇಳಿದ್ದಾರೆ.

ಗಾಂಧೀಜಿ, ಡಾ.ಅಂಬೇಡ್ಕರ್ ಭಾವಚಿತ್ರ ತೆಗೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಗಣರಾಜ್ಯೋತ್ಸವದಂದು ಧ್ವಜಾರೋಹಣ ವೇಳೆ ತೆಗೆದಿದ್ದು ತಪ್ಪು. ಫೋಟೋ ಇಡುವುದಕ್ಕೆ ಯಾರೂ ಆದೇಶ ಮಾಡಬೇಕಾಗಿಲ್ಲ. ಮಹನೀಯರ ಫೋಟೋಗಳನ್ನು ಇಡುವುದು ಕಡ್ಡಾಯ. ಜನವರಿ 26 ಸಂವಿಧಾನ ಜಾರಿಯಾದ ದಿನ. ಸಂವಿಧಾನ ರಚನೆ ಮಾಡಿದ್ದು ಡಾ.ಬಿ.ಆರ್.ಅಂಬೇಡ್ಕರ್​ರವರೇ. ಹಾಗಾಗಿ ಡಾ.ಅಂಬೇಡ್ಕರ್​ ಫೋಟೋ ಇಟ್ಟರೆ ತಪ್ಪಾಗುವುದಿಲ್ಲ. ಅವರ ಫೋಟೊವನ್ನು ತೆಗೀರಿ ಎಂದು ನ್ಯಾಯಾಧೀಶರು ಹೇಳಿರುವುದು ಅಕ್ಷಮ್ಯ ಅಪರಾಧ. ಅವರ ಮೇಲೆ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ಕ್ರಮ ಕೈಗೊಳ್ಳಬೇಕು. ಎಂದು ಹೇಳಿದರು.

ಮಂಗಳೂರಿನಲ್ಲಿ ಆಕ್ಷೇಪಾರ್ಹ ಬ್ಯಾನರ್ ಅಳವಡಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ:

‘ಹಿಂದುಗಳಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ’ ಎಂಬ ಆಕ್ಷೇಪಾರ್ಹ ಬ್ಯಾನರ್​ ಒಂದನ್ನು ಮಂಗಳೂರಿನಲ್ಲಿ ಅಳವಡಿಕೆ ಮಾಡಿದ್ದಕ್ಕೆ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಬ್ಯಾನರ್ ಹಾಕಿದವರಿಗೆ ಸಂವಿಧಾನ ಓದಿಕೊಳ್ಳುವಂತೆ ಹೇಳಿ ಎಂದ ಸಿದ್ದರಾಮಯ್ಯ, ಸಹಿಷ್ಣುತೆ, ಸಹಬಾಳ್ವೆಯಿಂದ ಜೀವಿಸಲು ಸಂವಿಧಾನ ಹೇಳಿದೆ. ಬ್ಯಾನರ್ ಹಾಕಿದವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಬಿಜೆಪಿ ಚುನಾವಣೆಗಾಗಿ ಇದೆಲ್ಲಾ ಮಾಡುತ್ತದೆ ಎಂದು ಆರೋಪಿಸಿದ್ದಾರೆ.

ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದ ಸುನೀಲ್ ಕುಮಾರ್ ಕಾರ್ಕಳ ಅವರಿಂದ ಇನ್ನೇನು ನಿರೀಕ್ಷೆ ಮಾಡಬಹುದು ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಅವರು ಸಮಾಜ ಒಡೆಯುವವರು. ಹಿಂದೂ ಬೇರೆ, ಹಿಂದುತ್ವ ಬೇರೆ. ನಾವು ಹಿಂದೂಗಳು ಒಟ್ಟಿಗೆ ಬಾಳಲು ಕರೆ ಕೊಟ್ಟರೆ, ಅವರು ಹಿಂದುತ್ವದ ಹೆಸರಲ್ಲಿ ಸಮಾಜ ಒಡೆಯುವವರು. 2013 ರಲ್ಲಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷ ಏಳು ಸ್ಥಾನ ಗೆದ್ದಿತ್ತು, ಬಿಜೆಪಿ ಒಂದೇ ಗೆದ್ದಿತ್ತು. ಯಾವುದು ಯಾರ ಭದ್ರ ಕೋಟೆನೂ ಅಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಸಂವಿಧಾನ ವಿರೋಧಿ, ಸಂವಿಧಾನವನ್ನು ಗೌರವಿಸಲ್ಲ ಹಾಗೆಯೇ ಮಾನವೀಯತೆಗೆ ಬೆಲೆ ಕೊಡುವುದಿಲ್ಲಎಂದಿರುವ ಸಿದ್ದರಾಮಯ್ಯ, ಬಿಜೆಪಿ ಏನೇ ಆಟ ಆಡಿದರೂ ಅವರ ಕೊಳಕುತನ ರಾಜ್ಯದ ಜನರಿಗೆ ಗೊತ್ತಾಗುತ್ತದೆ. ವಿಜ್ಞಾನಿಗಳು, ಸಾಹಿತಿಗಳು, ನಿವೃತ್ತ ಜಡ್ಜ್‌ಗಳು ಸೇರಿದಂತೆ 40 ಜನರು ಸಿಎಂ ಬೊಮ್ಮಾಯಿಗೆ ಪತ್ರವನ್ನು ಬರೆದಿರುವುದನ್ನು ಇದೇ ವೇಳೆ ಸಿದ್ದರಾಮಯ್ಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸಂವಿಧಾನ ವಿರೋಧಿ ಚಟುವಟಿಕೆಯಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಸುದ್ದಿಗೋಷ್ಠಿಯ ಪೂರ್ಣ ವಿಡಿಯೋ ಇಲ್ಲಿ ಲಭ್ಯವಿದೆ:

ಇದನ್ನೂ ಓದಿ:

ಸಿದ್ದರಾಮಯ್ಯಗೆ ರಾಜಕೀಯ ಮರುಹುಟ್ಟು ನೀಡಿದ್ದಕ್ಕೆ ಅವರಿಂದ ಒಳ್ಳೆಯ ಉಡುಗೊರೆ ಸಿಕ್ಕಿದೆ! ಸಿ ಎಮ್ ಇಬ್ರಾಹಿಂ

ಸಿಎಂ ಇಬ್ರಾಹಿಂಗೆ ರಾಜಕೀಯದಲ್ಲಿ ದೊಡ್ಡ ವ್ಯಾಲ್ಯೂ ಇದೆ, ಬಿಜೆಪಿಗೆ ಕರೆತರಲು ನಾಯಕರೊಂದಿಗೆ ಮಾತನಾಡುವೆ: ಸಚಿವ ಶ್ರೀರಾಮುಲು

Published On - 1:49 pm, Fri, 28 January 22