ಕೊಪ್ಪಳ: ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲ ಎಂಬ ಹೇಳಿಕೆ ಬಗ್ಗೆ ಬಸವರಾಜ ರಾಯರೆಡ್ಡಿ ಹೇಳಿದ್ದೇನು?

| Updated By: ಗಣಪತಿ ಶರ್ಮ

Updated on: Aug 02, 2023 | 8:16 PM

ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಕಾರ್ಯಗಳಿಗಾಗಿ ಇನ್ನೂ 10 ಸಾವಿರ ಕೋಟಿ ರೂಪಾಯಿ ಹಣ ಹೊಂದಿಸಬಹುದು. ನಮ್ಮ ಸರ್ಕಾರ ಬಂದ ಮೇಲೆ ಹಾಲಿನ ದರ ಮಾತ್ರ ಹೆಚ್ಚಾಗಿದೆ. ವಿದ್ಯುತ್ ದರ ಬಿಜೆಪಿ ಸರ್ಕಾರವಿದ್ದಾಗಲೇ ವಿದ್ಯುತ್ ಹೆಚ್ಚಳ ಆಗಿತ್ತು ಎಂದು ಬಸವರಾಜ ರಾಯರೆಡ್ಡಿ‌ ಹೇಳಿದರು.

ಕೊಪ್ಪಳ: ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲ ಎಂಬ ಹೇಳಿಕೆ ಬಗ್ಗೆ ಬಸವರಾಜ ರಾಯರೆಡ್ಡಿ ಹೇಳಿದ್ದೇನು?
ಬಸವರಾಜ ರಾಯರೆಡ್ಡಿ
Follow us on

ಕೊಪ್ಪಳ, ಆಗಸ್ಟ್ 1: ಗ್ಯಾರಂಟಿ ಯೋಜನೆಗಳಿಂದಾಗಿ ಈ ವರ್ಷ ಅಭಿವೃದ್ಧಿ ಕಾರ್ಯಕ್ಕೆ (Development) ಅನುದಾನ ನೀಡಲು ಸಾಧ್ಯವಿಲ್ಲ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ (Basvaraj Rayareddi), ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಒಳ್ಳೆಯ ಬಜೆಟ್ ನೀಡಿದ್ದಾರೆ. ಅಭಿವೃದ್ಧಿ ಯೋಜನೆಗಳಿಗಾಗಿ ಶೇಕಡಾ 64 ರಷ್ಟು ಹಣ ನೀಡಿದ್ದಾರೆ ಎಂದು ತಿಳಿಸಿದರು. ಕೊಪ್ಪಳದಲ್ಲಿ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಚಟುವಟಿಕೆಗಾಗಿ ಶೇ 61ರಷ್ಟು ಹಣ ಮೀಸಲಿಟ್ಟಿದ್ದರು. ಆದರೆ, ಸಿದ್ದರಾಮಯ್ಯನವರು ಅದಕ್ಕಿಂತ ಹೆಚ್ಚು ಅನುದಾನ ಘೋಷಿಸಿದ್ದಾರೆ ಎಂದು ರಾಯರೆಡ್ಡಿ ಹೇಳಿದರು.

ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಕಾರ್ಯಗಳಿಗಾಗಿ ಇನ್ನೂ 10 ಸಾವಿರ ಕೋಟಿ ರೂಪಾಯಿ ಹಣ ಹೊಂದಿಸಬಹುದು. ನಮ್ಮ ಸರ್ಕಾರ ಬಂದ ಮೇಲೆ ಹಾಲಿನ ದರ ಮಾತ್ರ ಹೆಚ್ಚಾಗಿದೆ. ವಿದ್ಯುತ್ ದರ ಬಿಜೆಪಿ ಸರ್ಕಾರವಿದ್ದಾಗಲೇ ವಿದ್ಯುತ್ ಹೆಚ್ಚಳ ಆಗಿತ್ತು ಎಂದು ಬಸವರಾಜ ರಾಯರೆಡ್ಡಿ‌ ಹೇಳಿದರು.

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ ಬಸವರಾಜ ರಾಯರೆಡ್ಡಿ

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ. ನನಗೆ ಸಚಿವ ಸ್ಥಾನದ ಅವಶ್ಯಕತೆಯಿಲ್ಲ. ಮುಂದೆಯೂ ನನ್ನನ್ನು ಮಂತ್ರಿಯನ್ನಾಗಿ ಮಾಡುವುದು ಬೇಡ. ಸಚಿವ ಸ್ಥಾನ ಬೇಡ ಎಂಬುದಾಗಿ ಬೇಕಾದರೆ ಬರೆದು ಕೊಡುತ್ತೇನೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.

ಮುಖ್ಯಮಂತ್ರಿಯವರು ನನಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲು ಸಿದ್ಧರಾಗಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಕೊಡ್ತೇನೆ ಎಂದಿದ್ದರು. ನಾನೇ ಬೇಡ ಎಂದು ಹೇಳಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನನಗೆ ಸ್ವಲ್ಪ ಧಿಮಾಕು ಜಾಸ್ತಿಯೇ ಇದೆ, ಯಾರನ್ನೂ ಕೇರ್ ಮಾಡಲ್ಲ; ಬಸವರಾಜ ರಾಯರೆಡ್ಡಿ ಹೀಗೆನ್ನಲು ಕಾರಣವೇನು?

ಶಾಸಕರು, ಸಚಿವರ ಮಧ್ಯೆ ಸಮನ್ವಯ ಆಗಲಿ ಎಂಬ ಉದ್ದೇಶದಿಂದಷ್ಟೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಆಳಂದ ಶಾಸಕ ಬಿಆರ್ ಪಾಟೀಲ್ ಹಾಗೂ ಸಚಿವ ಪ್ರಿಯಾಂಕ್​ ನಡುವೆ ಸಮನ್ವಯ ಕೊರತೆ ಆಗಿರಬಹುದು. ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಕೂಡ ಪತ್ರಕ್ಕೆ ಸಹಿ ಮಾಡಿದ್ದರು. ಸಚಿವ ಸ್ಥಾನ ಸಿಗದಿದ್ದಕ್ಕೆ ಬಿಆರ್ ಪಾಟೀಲ್​ಗೂ ಯಾವುದೇ ಬೇಸರವಿಲ್ಲ. ಆದರೆ ಗೌರವ ಸಿಗುತ್ತಿಲ್ಲ ಎಂದಷ್ಟೇ ಅವರಿಗೆ ಬೇಸರ ಇದೆ. ಪ್ರಿಯಾಂಕ್ ಕೂಡ ಒಳ್ಳೆಯ ವ್ಯಕ್ತಿ, ಬಹಳ ಸೌಜನ್ಯದಿಂದ ನಡೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮಂಗಳೂರು; ಅಹವಾಲು ಆಲಿಸದ ಸಿದ್ದರಾಮಯ್ಯ, ಯುಟಿ ಖಾದರ್ ಎದುರು ಕಡಲ್ಕೊರೆತ ಸಂತ್ರಸ್ತರ ಅಸಮಾಧಾನ

ಪತ್ರಕ್ಕೆ ಸಹಿ ಮಾಡಿ ಎಂಬುದಾಗಿ ಶಾಸಕ ಕೆಎಂ ಶಿವಲಿಂಗೇಗೌಡ ಅವರಿಗೆ ಹೇಳಿದ್ದು ನಿಜ. ಸಚಿವರು ಶಾಸಕರಿಗೆ ಪ್ರತ್ಯೇಕ ಸಮಯ ನೀಡಬೇಕು. ಪತ್ರ ಬರೆಯಬಾರದಿತ್ತು ಎಂದು ಮುಖ್ಯಮಂತ್ರಿಗಳು ನನಗೆ ಹೇಳಿಲ್ಲ ಎಂದು ರಾಯರೆಡ್ಡಿ ತಿಳಿಸಿದರು.

ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ರಾಯರೆಡ್ಡಿ ಹಾಗೂ ಇತರ ಶಾಸಕರ ಸಹಿಯುಳ್ಳ ಬಹಿರಂಗ ಪತ್ರ ಬರೆದ ವಿದ್ಯಮಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ವಾಗ್ದಾಳಿ ನಡೆಸಲು ಹೊಸ ಅಸ್ತ್ರ ಒದಗಿಸಿಕೊಟ್ಟಂತಾಗಿತ್ತು. ಇದು ರಾಜ್ಯ ರಾಜಕೀಯದಲ್ಲಿ ಕೋಹಾಹಲ ಸೃಷ್ಟಿಗೆ ಕಾರಣವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Tue, 1 August 23