ಪಕ್ಷ ವಿಸರ್ಜಿಸುತ್ತೇನೆ ಎಂದವರು ಜಾತ್ಯತೀತತೆಯನ್ನೇ ವಿಸರ್ಜಿಸಿದ್ದಾರೆ; ಬಿಜೆಪಿ, ಜೆಡಿಎಸ್​ ಮೈತ್ರಿಗೆ ಕಾಂಗ್ರೆಸ್ ವ್ಯಂಗ್ಯ

JDS BJP Alliance; ಜೆಡಿಎಸ್ ಇಂದು ಅಧಿಕೃತವಾಗಿ ಎನ್​ಡಿಎ ಮೈತ್ರಿಕೂಟದೊಳಗೆ ವಿಲೀನವಾಗಿದೆ. ಇನ್ಮುಂದೆ ಜೆಡಿಎಸ್ ಪಕ್ಷವು ತನ್ನ ಹೆಸರಿನ ಮುಂದಿರುವ ‘ಸೆಕ್ಯೂಲರ್’ ಪದವನ್ನು ಕೈಬಿಡುವುದು ಒಳ್ಳೆಯದು. ಕೇವಲ ಜೆಡಿ ಎಂದು ಇಟ್ಟುಕೊಳ್ಳಬಹುದು. ಇಲ್ಲವೇ KD ಎಂದು ಬದಲಿಸಿಕೊಳ್ಳಬಹುದು. ಕೆ.ಡಿ. ಅಂದರೆ ಅಪಾರ್ಥ ಬೇಡ! ಕೆ.ಡಿ. ಅಂದರೆ ಕಮಲ ದಳ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಪಕ್ಷ ವಿಸರ್ಜಿಸುತ್ತೇನೆ ಎಂದವರು ಜಾತ್ಯತೀತತೆಯನ್ನೇ ವಿಸರ್ಜಿಸಿದ್ದಾರೆ; ಬಿಜೆಪಿ, ಜೆಡಿಎಸ್​ ಮೈತ್ರಿಗೆ ಕಾಂಗ್ರೆಸ್ ವ್ಯಂಗ್ಯ
ಪ್ರಾತಿನಿಧಿಕ ಚಿತ್ರ

Updated on: Sep 22, 2023 | 8:02 PM

ಬೆಂಗಳೂರು, ಸೆಪ್ಟೆಂಬರ್ 22: ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ (JDS BJP Alliance) ಮಾಡಿಕೊಂಡಿರುವುದನ್ನು ಕಾಂಗ್ರೆಸ್ (Congress) ವ್ಯಂಗ್ಯವಾಡಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಪಕ್ಷ ವಿಸರ್ಜಿಸುತ್ತೇನೆ ಎಂದವರು ಜಾತ್ಯತೀತತೆಯನ್ನೇ ವಿಸರ್ಜಿಸಿದ್ದಾರೆ ಎಂದು ಟೀಕಿಸಿದೆ. ಶುಕ್ರವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ, ಮೈತ್ರಿ ವಿಚಾರವನ್ನು ಅಂತಿಮಗೊಳಿಸಿರುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.

‘ಜೆಡಿಎಸ್ ಇಂದು ಅಧಿಕೃತವಾಗಿ ಎನ್​ಡಿಎ ಮೈತ್ರಿಕೂಟದೊಳಗೆ ವಿಲೀನವಾಗಿದೆ. ಇನ್ಮುಂದೆ ಜೆಡಿಎಸ್ ಪಕ್ಷವು ತನ್ನ ಹೆಸರಿನ ಮುಂದಿರುವ ‘ಸೆಕ್ಯೂಲರ್’ ಪದವನ್ನು ಕೈಬಿಡುವುದು ಒಳ್ಳೆಯದು. ಕೇವಲ ಜೆಡಿ ಎಂದು ಇಟ್ಟುಕೊಳ್ಳಬಹುದು. ಇಲ್ಲವೇ KD ಎಂದು ಬದಲಿಸಿಕೊಳ್ಳಬಹುದು. ಕೆ.ಡಿ. ಅಂದರೆ ಅಪಾರ್ಥ ಬೇಡ! ಕೆ.ಡಿ. ಅಂದರೆ ಕಮಲ ದಳ! ಪಕ್ಷ ವಿಸರ್ಜಿಸುತ್ತೇನೆ ಎಂದವರು ಜಾತ್ಯತೀತತೆಯನ್ನು ವಿಸರ್ಜಿಸಿದ್ದಾರೆ, ಅಭಿನಂದನೆಗಳು’ ಎಂದು ಕಾಂಗ್ರೆಸ್ ಉಲ್ಲೇಖಿಸಿದೆ.


ಇದನ್ನೂ ಓದಿ: ಎನ್​ಡಿಎ ಒಕ್ಕೂಟ ಸೇರಿದ ಜೆಡಿಎಸ್: ಯಾರು ಏನಂದ್ರು?

ಸೆಕ್ಯುಲರ್ ಪದ ತೆಗೆದುಹಾಕಲಿ; ಚಲುವರಾಯಸ್ವಾಮಿ

2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಸಚಿವ ಚಲುವರಾಯಸ್ವಾಮಿ, ಜೆಡಿಎಸ್‌ ಹೆಸರಿನಲ್ಲಿರುವ ಸೆಕ್ಯುಲರ್ ಅನ್ನೋ ಪದವನ್ನು ತೆಗೆದು ಹಾಕಲಿ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಜನತಾ ಪರಿವಾರ ಹುಟ್ಟಿದ ಬಳಿಕ ಎಂದೂ ಇಂಥ ನಿರ್ಧಾರ ಕೈಗೊಂಡಿರಲಿಲ್ಲ. ಈಗ ಜೆಡಿಎಸ್​​ನವರು ಬಿಜೆಪಿ ಜತೆ ಹೋಗಿದ್ದಾರೆ ಅಂದರೆ, ಅದರಲ್ಲೇ ಅರ್ಥ ಆಗುತ್ತದೆ. ಅವರಿಗೆ ಇವರ ಅವಶ್ಯಕತೆ ಇತ್ತು, ಇವರಿಗೆ ಅವರ ಅವಶ್ಯಕತೆ ಇತ್ತು ಎಂದು ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us