Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಕ್ಕಲಿಗರನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ; ಡಿ 15ರಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಭೆ

ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಕಾಂಗ್ರೆಸ್​ ಸಹಜವಾಗಿಯೇ ಜಾತಿ ಸಮೀಕರಣ ಶುರು ಮಾಡಿದೆ. ಇದೀಗ ಒಕ್ಕಲಿಗರ ಮತಗಳನ್ನು ಸೆಳೆಯಲು ತಂತ್ರಗಳನ್ನು ಮಾಡುತ್ತಿದೆ.

ಒಕ್ಕಲಿಗರನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ; ಡಿ 15ರಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಭೆ
Congress Flag
Follow us
TV9 Web
| Updated By: ಆಯೇಷಾ ಬಾನು

Updated on: Dec 12, 2022 | 9:20 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಡಿ.15ರಂದು ಕಾಂಗ್ರೆಸ್​​ ಪಕ್ಷದ ಒಕ್ಕಲಿಗ ನಾಯಕರ ಸಭೆ ನಡೆಯಲಿದೆ. ಚುನಾವಣಾ ಪೂರ್ವಭಾವಿಯಾಗಿ(Karnataka Assembly Elections 2023) ಕೃಷ್ಣ ಭೈರೇಗೌಡ, ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಒಕ್ಕಲಿಗ ನಾಯಕರ(Vokkaliga Community) ಸಭೆ ನಿಗದಿ ಮಾಡಲಾಗಿದೆ. ಒಕ್ಕಲಿಗ ಸಮುದಾಯವನ್ನು ಕಾಂಗ್ರೆಸ್​ನತ್ತ(Congress) ಸೆಳೆಯಲು ತಂತ್ರಗಾರಿಕೆ ಮಾಡಲಾಗುತ್ತಿದ್ದು ಹಲವು ವಿಚಾರ ಕುರಿತು ಸಭೆ ನಡೆಸಲಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ತಂತ್ರ-ರಣತಂತ್ರ ಗರಿಗೆದರಿದೆ. ರಾಜಕೀಯ ಪಕ್ಷಗಳು ಮತದಾರರಿಗೆ ಮಣೆ ಹಾಕಲು ಒಂದಿಲ್ಲೊಂದು ಉಪಾಯಗಳನ್ನು ಮಾಡುತ್ತಿವೆ. ಸದ್ಯ ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಕಾಂಗ್ರೆಸ್​ ಸಹಜವಾಗಿಯೇ ಜಾತಿ ಸಮೀಕರಣ ಶುರು ಮಾಡಿದೆ. ಇದೀಗ ಒಕ್ಕಲಿಗರ ಮತಗಳನ್ನು ಸೆಳೆಯಲು ತಂತ್ರಗಳನ್ನು ಮಾಡುತ್ತಿದೆ. ಇದಕ್ಕೆ ಪ್ರಮುಖ ಒಕ್ಕಲಿಗರ ನಾಯಕರನ್ನು ಒಟ್ಟುಗೂಡಿಸಿ ಸಮುದಾಯದ ಮತ ಸೆಳೆಯಲು ಬೇಕಾದ ಕಾರ್ಯತಂತ್ರಗಳ ಬಗ್ಗೆ ಚಿಂತನೆ ನಡೆಸಲು ಮುಂದಾಗಿದೆ. ಇದೇ ತಿಂಗಳ ಡಿಸೆಂಬರ್​ 15ರಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಒಕ್ಕಲಿಗ ನಾಯಕರ ಜೊತೆ ಕಾಂಗ್ರೆಸ್ ಸಭೆ ನಡೆಸಲಿದೆ.

ಇದನ್ನೂ ಓದಿ: ಸಿದ್ದು-ಡಿಕೆಶಿ ಪ್ರತ್ಯೇಕ ಬಸ್​ ಯಾತ್ರಗೆ ಬ್ರೇಕ್, ಸಿಎಂ ಅಭ್ಯರ್ಥಿ ವಿಚಾರಕ್ಕೂ ಮಾನ್ಯತೆ ನೀಡದ ‘ಕೈ’ ಹೈಕಮಾಂಡ್

ಇನ್ನು ಮತ್ತೊಂದೆಡೆ ಜೆಡಿಎಸ್​ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಒಕ್ಕಲಿಗರ ಬೆಂಬಲ ಹೆಚ್ಚಿದೆ. ಈ ಹಿಂದೆ ಒಕ್ಕಲಿಗ ಸಮುದಾಯ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ನೇರ ಕಾರಣವಾಗಿದೆ. ಆದ್ರೆ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಆದ ಬಳಿಕ ಒಕ್ಕಲಿಗರ ಬೆಂಬಲ ಬದಲಾಗಿತ್ತು. ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ಕಡೆ ಒಕ್ಕಲಿಗರ ಮತ ಸೆಳೆಯಲು ಡಿಕೆ ಶಿವಕುಮಾರ್ ಅವರು ಕೂಡ ಫೀಲ್ಡ್​ಗೆ ಇಳಿದಿದ್ದರು. 1999-2004ರಲ್ಲಿ ಕಾಂಗ್ರೆಸ್‍ನಿಂದ ಎಸ್.ಎಂ.ಕೃಷ್ಣ ಅವರು ರಾಜ್ಯದ ಕೊನೆಯ ಒಕ್ಕಲಿಗ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್‍ನಿಂದ ಮುಖ್ಯಮಂತ್ರಿಯಾಗಲು ಒಕ್ಕಲಿಗ ಸಮುದಾಯ ನನಗೆ ಬೆಂಬಲ ನೀಡಬೇಕೆಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದರು. ಅಲ್ಲದೆ ಒಕ್ಕಲಿಗ ನಾಯಕರು ಕೂಡ ತಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಬೇಕೆಂಬ ಬಯಕೆ ಹೊರ ಹಾಕಿದ್ದರು. ಸದ್ಯ ಈಗ ಕಾಂಗ್ರೆಸ್ ಮತ್ತೊಂದು ತಂತ್ರಗಾರಿಕೆಗೆ ಮುಂದಾಗಿದ್ದು ಒಕ್ಕಲಿಗ ಸಮುದಾಯದ ನಾಯಕರೊಂದಿಗೆ ಸಭೆ ನಡೆಸಲು ಮುಂದಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ