Belagavi: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ರಾಜನಾಥ್ ಸಿಂಗ್​ರಿಂದ ಬಿಎಸ್​ವೈ ಗುಣಗಾನ

|

Updated on: Mar 02, 2023 | 2:41 PM

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಎರಡನೇ ರಥಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಚಾಲನೆ ನೀಡಿದರು. ಬಳಿಕ ಭಾಷಣ ಮಾಡಿದ ಅವರು, ಬಹುಪಾಲು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ಹೊಗಳುವುದಕ್ಕೇ ಮೀಸಲಿಟ್ಟರು.

Belagavi: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ರಾಜನಾಥ್ ಸಿಂಗ್​ರಿಂದ ಬಿಎಸ್​ವೈ ಗುಣಗಾನ
ಬೆಳಗಾವಿಯಲ್ಲಿ ರಾಜನಾಥ್ ಸಿಂಗ್ (ಚಿತ್ರ ಕೃಪೆ; ಬಿಜೆಪಿ ಟ್ವಿಟರ್ ಖಾತೆ)
Image Credit source: Twitter
Follow us on

ಬೆಳಗಾವಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ (BJP Vijay Sankalpa Yatra) ಎರಡನೇ ರಥಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಚಾಲನೆ ನೀಡಿದರು. ಬಳಿಕ ಭಾಷಣ ಮಾಡಿದ ಅವರು, ಬಹುಪಾಲು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ (BS Yediyurappa) ಅವರನ್ನು ಹೊಗಳುವುದಕ್ಕೇ ಮೀಸಲಿಟ್ಟರು. ‘ಕರ್ನಾಟಕದ ಎಲ್ಲ ಜನರಿಗೆ ನಮಸ್ಕಾರ’ ಎಂದು ಕನ್ನಡಲ್ಲೇ ಮಾತು ಆರಂಭಿಸಿದ ಅವರು, ಇಂದು ಬಿಜೆಪಿಗೆ ಶುಭ ದಿನ ಆಗಿದೆ. ತ್ರಿಪುರಾ, ನಾಗಾಲ್ಯಾಂಡ್​​ನಲ್ಲಿ ಬಿಜೆಪಿ ಗೆದ್ದು ಸರ್ಕಾರ ರಚನೆ ಮಾಡಲಿದೆ. ಮೇಘಾಲಯದಲ್ಲಿ ಈಗಾಗಲೇ ಹೆಚ್ಚು ಸ್ಥಾನ ದೊರೆತಿವೆ ಎಂದರು. ಬಸವಣ್ಣ, ರನ್ನ ಪೊನ್ನ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣಯನ್ನು ಅವರನ್ನು ಸ್ಮರಿಸಿದ ಸಿಂಗ್, ರಾಯಣ್ಣ ಪ್ರತಿಮೆ, ಸಮಾಧಿಗೆ ಮಾಲಾರ್ಪಣೆ ಮಾಡಿ ನಾನು ಧನ್ಯನಾಗಿದ್ದೇನೆ ಎಂದರು. ಜತೆಗೆ ಯೋಧ ಹಣಮಂತಪ್ಪನ ಅವರ ಶೌರ್ಯವನ್ನೂ ಸ್ಮರಿಸಿದರು.

‘ಬಿಎಸ್​ವೈ ಸೇವೆ ಎಂದಿಗೂ ಮರೆಯಲ್ಲ’

ಬೆಳಗಾವಿಯು ಕರ್ನಾಟಕದ ಶಿರ ಇದ್ದ ಹಾಗೆ. ಹೀಗಾಗಿ ಯಾತ್ರೆಗೆ ಬೆಳಗಾವಿಯನ್ನು ಯೋಚಿಸಿ ಆಯ್ಕೆ ಮಾಡಲಾಗಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಸಿಂಗ್ ಕರೆ ನೀಡಿದರು. ತಮ್ಮ ಆರೋಗ್ಯದ ಕಾರಣಕ್ಕಾಗಿ ಯಡಿಯೂರಪ್ಪ ಅಧಿಕಾರ ತ್ಯಾಗ ಮಾಡಿದ್ದಾರೆ. ಯಡಿಯೂರಪ್ಪ ಸಹಮತದಿಂದಲೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದರು. ಬೊಮ್ಮಾಯಿ ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ಯಡಿಯೂರಪ್ಪಗೆ ಇಡೀ ಕರ್ನಾಟಕ ಸನ್ಮಾನ ಮಾಡಬೇಕು. ಅವರನ್ನು ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಡಿದ್ದೇವೆ. ಅವರು ಕರ್ನಾಟಕಕ್ಕೆ ಮಾಡಿದ ಸೇವೆಯನ್ನು ಬಿಜೆಪಿ ಎಂದಿಗೂ ಮರೆಯುವುದಿಲ್ಲ. ಯಡಿಯೂರಪ್ಪ ಇಚ್ಛೆಯೊಂದಿಗೇ ಪೂರ್ಣ ಪ್ರಮಾಣದ ಸರ್ಕಾರ ರಚನೆ ಆಗಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ದಕ್ಷಿಣ ಭಾರತದ ನಂಬರ್ ವನ್ ರಾಜ್ಯವನ್ನಾಗಿ ಮಾಡಲಿದ್ದೇವೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗದ ಸುಂದರ ಏರ್ಪೋರ್ಟ್ ಉದ್ಘಾಟನೆ ಮಾಡಿದ್ದಾರೆ. ಅಷ್ಟೇ ಅಲ್ಲ ರಸ್ತೆ ಸಂಪರ್ಕ ವಿಚಾರದಲ್ಲಿಯೂ ನಮ್ಮ ಸರ್ಕಾರ ಅದ್ಭುತ ಕೆಲಸ ಮಾಡಿದೆ. 50 ವರ್ಷಗಳಲ್ಲಿ ಕಾಂಗ್ರೆಸ್ ಮಾಡದ ಕೆಲಸವನ್ನು 9 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ಪಕ್ಷ ಕಟ್ಟಿದ ಪ್ರಮುಖರಲ್ಲಿ ಒಬ್ಬರಾದ ನನ್ನನ್ನು ಕಡೆಗಣಿಸುವ ಪ್ರಶ್ನೆಯೇ ಬರುವುದಿಲ್ಲ: ಬಿಎಸ್​ವೈ

ಕರ್ನಾಟಕದಲ್ಲಿ ಹೆಲಿಕ್ಯಾಪ್ಟರ್ ಸಿದ್ಧಪಡಿಸುವ ಕಾರ್ಖಾನೆ ಆರಂಭವಾಗಿದೆ. ಇಂಡಸ್ಟ್ರೀಸ್ ಕಾರಿಡಾರ್ ಮೂಲಕ ರಾಜ್ಯದ ಯುವಕರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಕರ್ನಾಟಕದಲ್ಲಿ ಮೂರು ಇಂಡಸ್ಟ್ರೀಸ್ ಕಾರಿಡಾರ್ ಮಾಡಲಾಗಿದೆ. ಮನೆ, ಜಮೀನಿಗೆ ನೀರು ಕೊಡುವ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್​​ನವರು ಹೇಳವುದು ಒಂದು ಮಾಡೋದು ಮತ್ತೊಂದು. ಆದರೆ ಬಿಜೆಪಿ ಹಾಗಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿದೆ ಹಾಗೂ ಈಡೇರಿಸುತ್ತಿದೆ. ಪ್ರಾಣವನ್ನಾದರೂ ಬಿಟ್ಟೆವು ವಚನ ಬಿಡುವುದಿಲ್ಲ ಎಂಬುದು ನಮ್ಮ ಘೋಷಣೆ. ಕಾಶ್ಮೀರದ 370 ಕಲಂ ತೆಗೆದು ಹಾಕಲಾಗಿದೆ‌. ತ್ರಿವಳಿ ತಲಾಕ್‌ ಕಾನೂನು ನಿಷೇಧಿಸಲಾಗಿದೆ. ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಚಿತ್ರದುರ್ಗ, ತುಮಕೂರು ಜಿಲ್ಲೆಗೆ ಇದರಿಂದ ಲಾಭ ಆಗಿದೆ. ಜಲ್ ಜೀವನ್ ಮಷಿನ್ ಮೂಲಕ ಜನರಿಗೆ ಶುದ್ಧ ನೀರು ಕೊಡಲಾಗಿದೆ ಎಂದು ಅವರು ಹೇಳಿದರು.

ಈ ಮಧ್ಯೆ, ವಿಜಯ ಸಂಕಲ್ಪ ಯಾತ್ರೆಯ ಬಸ್​​​ನಲ್ಲಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಭೈರತಿ ಬಸವರಾಜ್, ಸಿಸಿ ಪಾಟೀಲ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೆರಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ