ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾಯ್ತು, ಖಾತೆ ಹಂಚಿಕೆ ಕಸರತ್ತು ಶುರು: ಸೀನಿಯರ್ಸ್​ಗೆ ಪ್ರಬಲ ಖಾತೆ ಭಾಗ್ಯ!

ಪ್ರಮಾಣ ವಚನ ಸ್ವೀಕರಿಸಿದ್ದಾಯ್ತು.. ಆಯ್ತು, ಇನ್ನೇನಿದ್ರೂ ಯಾರಿಗೆ ಯಾವ ಖಾತೆ ಸಿಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಖಾತೆಗಳು ಸಹ ಬಹುತೇಕ ಕನ್ಫರ್ಮ್ ಆಗಿದೆ. ಅಂತಿಮ ಮುದ್ರೆಯೊಂದೇ ಬಾಕಿ ಇದೆ. ಈ ನಡುವೆ ಖಾತೆಗಾಗಿ ನಾನಾ ಕಸರತ್ತು, ಲಾಬಿ ಒಳಗೊಳಗೆ ಜೋರಾಗಿಯೇ ನಡೀತಿದೆ.

ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾಯ್ತು, ಖಾತೆ ಹಂಚಿಕೆ ಕಸರತ್ತು ಶುರು: ಸೀನಿಯರ್ಸ್​ಗೆ ಪ್ರಬಲ ಖಾತೆ ಭಾಗ್ಯ!
Follow us
|

Updated on: May 28, 2023 | 7:43 AM

ಬೆಂಗಳೂರು: ಸಿದ್ದರಾಮಯ್ಯ ಸಂಪುಟದಲ್ಲಿ ಸಿಎಂ, ಡಿಸಿಎಂ ಸೇರಿ ಒಟ್ಟು 34 ಸಚಿವರಿದ್ದಾರೆ. ಫಲಿತಾಂಶ ಹೊರ ಬಿದ್ದ 15 ದಿನಗಳ ಬಳಿಕ ಸಿದ್ದರಾಮಯ್ಯ ಸಂಪುಟ ಫುಲ್ ಫಿಲ್ ಆಗಿದೆ. ಮೊದಲಿಗೆ ಸಿಎಂ, ಡಿಸಿಎಂ ಹಾಗೂ 8 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ ನಿನ್ನೆ(ಮೇ 27) 24 ಶಾಸಕರಿಗೆ ಸಚಿವರಾಗಿ ಪಟ್ಟಾಭಿಷೇಕ ಮಾಡಲಾಗಿದೆ. ಸದ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ, ಡಿಸಿಎಂ ಸೇರಿ 34 ಸಚಿವರ ದರ್ಬಾರ್ ಶುರುವಾಗಿದೆ. ಪ್ರಮಾಣ ವಚನ ಸ್ವೀಕರಿಸಿದ್ದಾಯ್ತು ಇನ್ನೇನಿದ್ರೂ ಯಾರಿಗೆ ಯಾವ ಖಾತೆ ಸಿಗುತ್ತೆ ಎನ್ನುವ ಕುತೂಹಲ ಮೂಡಿಸಿದೆ. ಖಾತೆಗಳು ಸಹ ಬಹುತೇಕ ಕನ್ಫರ್ಮ್ ಆಗಿದೆ. ಅಂತಿಮ ಮುದ್ರೆಯೊಂದೇ ಬಾಕಿ ಇದೆ. ಈ ನಡುವೆ ಖಾತೆಗಾಗಿ ನಾನಾ ಕಸರತ್ತು, ಲಾಬಿ ಒಳಗೊಳಗೆ ಜೋರಾಗಿಯೇ ನಡೆಯುತ್ತಿದೆ.

ಇದನ್ನೂ ಓದಿ: ಸಂಪ್ರದಾಯ ಮುರಿದ್ರಾ ಸಿದ್ದರಾಮಯ್ಯ? ಸಿಎಂ ವಿರುದ್ಧ ಬಿಕೆ ಹರಿಪ್ರಸಾದ್ ಆಕ್ರೋಶ

ಸಿಎಂ ಬಳಿ ಹಣಕಾಸು, ಗುಪ್ತಚರ?

ಸಾಮಾನ್ಯವಾಗಿ ಮುಖ್ಯಮಂತ್ರಿ ಆದವರೇ ತಮ್ಮ ಬಳಿ ಹಣಕಾಸು ಖಾತೆ ಉಳಿಸಿಕೊಳ್ಳುತ್ತಾರೆ. ಸಂಪ್ರದಾಯದಂತೆ ಸಿಎಂ ಸಿದ್ದರಾಮಯ್ಯ ಅವವರೇ ಹಣಕಾಸು ಖಾತೆ ಉಳಿಸಿಕೊಳ್ಳೋ ಸಾಧ್ಯತೆ ಇದೆ. ಇದರ ಜೊತೆಗೆ ಗುಪ್ತಚರ, ಆಡಳಿತ ಸುಧಾರಣೆಯನ್ನೂ ಸಿಎಂ ಬಳಿಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಡಿಕೆಶಿಗೆ ನಗರಾಭಿವೃದ್ಧಿ, ಪರಂಗೆ ಗೃಹ?

ಉಪ ಮುಖ್ಯಮಂತ್ರಿ, ಕಾಂಗ್ರೆಸ್​ನ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್‌ಗೆ ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಬಲ ಖಾತೆ ಸಿಗುವ ಸಾಧ್ಯತೆ ಇದೆ. ಡಿಕೆಶಿ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದು ಅದೇ ಖಾತೆ ಒಲಿಯಲಿದೆ ಅಂತ ಹೇಳಲಾಗ್ತಿದೆ. ಇನ್ನು ಈಗಾಗಲೇ ಗೃಹ ಖಾತೆ ನಿರ್ವಹಿಸಿ ಅನುಭವವಿರುವ ಡಾ.ಜಿ.ಪರಮೇಶ್ವರ್​ಗೆ ಮತ್ತೊಮ್ಮೆ ಗೃಹ ಖಾತೆ ಸಿಗುವ ಸಾಧ್ಯತೆ ಇದೆ.

ಗೃಹ ಖಾತೆ ಸಿಕ್ಕಿರೂ ಪರಮೇಶ್ವರ್ ಅತೃಪ್ತಿ!

ಡಾ.ಜಿ.ಪರಮೇಶ್ವರ್​ಗೆ ಗೃಹ ಖಾತೆ ಪಕ್ಕಾ ಅಂತ ಹೇಳಲಾಗ್ತಿದೆ. ಸಿಎಂ ನಂತರದ ಖಾತೆ ಅನ್ನೋ ಪ್ರಭಾವಳಿ ಗೃಹ ಖಾತೆ ಸುತ್ತ ಇರುತ್ತೆ. ಹಿಂದೆ ಗೃಹ ಖಾತೆಯನ್ನೂ ಪರಮೇಶ್ವರ್ ನಿರ್ವಹಿಸಿದ್ದಾರೆ. ಹೀಗಿದ್ರೂ ಪರಮೇಶ್ವರ್ ಅವರಿಗೆ ಗೃಹ ಖಾತೆ ಬಗ್ಗೆ ಅತೃಪ್ತಿ ಇದೆ ಎನ್ನಲಾಗಿದೆ. ಪರಮೇಶ್ವರ್ ಕಂದಾಯ ಇಲಾಖೆ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋ ಮಾಹಿತಿ ಇದೆ.

ಸೀನಿಯರ್ಸ್​ಗೆ ಪ್ರಬಲ ಖಾತೆ ಭಾಗ್ಯ!

ಹಿರಿಯರಾದ ಹೆಚ್‌.ಕೆ.ಪಾಟೀಲ್‌ಗೆ ಕಾನೂನು ಮತ್ತು ಸಂಸದೀಯ ಖಾತೆ, ಕೆ.ಹೆಚ್.ಮುನಿಯಪ್ಪಗೆ ಆಹಾರ & ನಾಗರಿಕ ಸರಬರಾಜು, ಕೆ.ಜೆ. ಜಾರ್ಜ್ ಇಂಧನ ಖಾತೆ ಸಿಗುವ ಸಾಧ್ಯತೆ ಇದೆ. ಮೊದಲ ಕಂತಲ್ಲೇ ಸಂಪುಟ ಸೇರಿದ್ದ ಕೆ.ಜೆ. ಜಾರ್ಜ್ ಇಂಧನ ಖಾತೆ ಸಿಗುವ ಸಾಧ್ಯತೆ ಇದೆ. ಎಂ.ಬಿ ಪಾಟೀಲ್‌ಗೆ ಬೃಹತ್ ಕೈಗಾರಿಕೆ, ಐಟಿ-ಬಿಟಿ, ರಾಮಲಿಂಗಾರೆಡ್ಡಿಗೆ ಸಾರಿಗೆ ಇಲಾಖೆ ಹಾಗೂ ಪ್ರಿಯಾಂಕ್‌ ಖರ್ಗೆಗೆ ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಖಾತೆ ಹಂಚಿಕೆ ಆಗಬಹುದು ಅಂತ ಹೇಳಲಾಗ್ತಿದೆ.

ಖಂಡ್ರೆಗೆ ಅರಣ್ಯ, ಗುಂಡೂರಾವ್‌ಗೆ ಆರೋಗ್ಯ?

ಕೃಷ್ಣಭೈರೇಗೌಡಗೆ ಕಂದಾಯ ಇಲಾಖೆ ಜವಾಬ್ದಾರಿ ನೀಡೋ ಸಾಧ್ಯತೆ ಇದ್ದು, ಚಲುವರಾಯಸ್ವಾಮಿ ಅವರಿಗೆ ಕೃಷಿ ಖಾತೆ ನೀಡಬಹುದು ಎನ್ನಲಾಗಿದೆ. ಹಾಗೆಯೇ ಕೆ. ವೆಂಕಟೇಶ್‌ಗೆ ಪಶುಸಂಗೋಪನಾ, ಡಾ.ಹೆಚ್‌ಸಿ ಮಹದೇವಪ್ಪಗೆ ಸಮಾಜ ಕಲ್ಯಾಣ ಇಲಾಖೆ ನೀಡೋ ಸಾಧ್ಯತೆ ಇದೆ. ಈಶ್ವರ್‌ ಖಂಡ್ರೆಗೆ ಅರಣ್ಯ ಖಾತೆ, ಕೆ.ಎನ್‌ ರಾಜಣ್ಣಗೆ ಸಹಕಾರ, ದಿನೇಶ್‌ ಗುಂಡೂರಾವ್‌ಗೆ ಆರೋಗ್ಯ ಖಾತೆ ಹಂಚಿಕೆ ಮಾಡ್ತಾರಂತೆ. ಶರಣ ಬಸಪ್ಪ ದರ್ಶಾನಪುರಗೆ ಸಣ್ಣ ಕೈಗಾರಿಕೆ ಖಾತೆ ಸಿಗುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.

ಸಾರಿಗೆ ಇಲಾಖೆ ಬಗ್ಗೆ ರಾಮಲಿಂಗಾರೆಡ್ಡಿ ಬೇಸರ!

ಸಿಎಂ, ಡಿಸಿಎಂ ಜೊತೆ ಮೇ 20 ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ರಾಮಲಿಂಗಾರೆಡ್ಡಿಗೆ ಸಾರಿಗೆ ಇಲಾಖೆ ಸಿಗುವ ಸಾಧ್ಯತೆ ಇದೆ. ಹೀಗಾಗಿ ತಮ್ಮ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿರೋ ರಾಮಲಿಂಗಾರೆಡ್ಡಿ, ಕಂದಾಯ ಅಥವಾ ಬೆಂಗಳೂರು ಉಸ್ತುವಾರಿ ನೀಡುವಂತೆ ಪಟ್ಟು ಹಿಡಿದ್ದಾರಂತೆ.

ಸಚಿವರ ಖಾತೆ ಕಿರಿಕ್?

ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಬಗ್ಗೆ ಹಿರಿಯ ಸಚಿವ ಕೆ.ಹೆಚ್​.ಮುನಿಯಪ್ಪಗೆ ಬೇಸರವಿದೆ. ಸಮಾಜ ಕಲ್ಯಾಣ ಇಲಾಖೆ ಅಥವಾ ಕಂದಾಯ ಇಲಾಖೆ ಸಿಕ್ರೆ ನಿಭಾಯಿಸುವ ಮನಸ್ಥಿತಿಯಲ್ಲಿದ್ದಾರೆ. ಇನ್ನು ಗೃಹ ಖಾತೆ ಮೇಲೆ ಕಣ್ಣಿಟ್ಟಿರುವ ಪ್ರಿಯಾಂಗ್ ಖರ್ಗೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಿಗುವ ಸಾಧ್ಯತೆ ಇದೆ. ಕೆಲ ಸಚಿವರಿಗೆ ಪ್ರಭಾವಿ ಖಾತೆ ಧಕ್ಕುವ ಸಾಧ್ಯತೆ ಇದ್ರೂ ಮುನಿಸು ಇದ್ದೇ ಇದೆ.