ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಕೇಸ್​: ಸಿಎಂ ಸಿದ್ಧರಾಮಯ್ಯ ಭೇಟಿ ಮಾಡಿ​ ಸ್ಪಷ್ಟೀಕರಣ ನೀಡಿದ ಶಾಸಕ ತನ್ವೀರ್ ಸೇಠ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2023 | 3:07 PM

ಡಿಜೆ ಹಳ್ಳಿ/ಕೆಜಿ ಹಳ್ಳಿ ಪ್ರಕರಣಗಳಲ್ಲಿ ಅಮಾಯಕರ ವಿರುದ್ಧದ ದೂರು ವಾಪಸ್​ಗೆ ಶಾಸಕ ತನ್ವೀರ್ ಸೇಠ್ ಪತ್ರ ವಿಚಾರವಾಗಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ನಿಯಮಾನುಸಾರ ದೂರು ವಾಪಸ್‌ಗೆ ಮನವಿ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.

ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಕೇಸ್​: ಸಿಎಂ ಸಿದ್ಧರಾಮಯ್ಯ ಭೇಟಿ ಮಾಡಿ​ ಸ್ಪಷ್ಟೀಕರಣ ನೀಡಿದ ಶಾಸಕ ತನ್ವೀರ್ ಸೇಠ್​
ಶಾಸಕ ತನ್ವೀರ್ ಸೇಠ್, ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಜುಲೈ 27: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರ ಬಿಡುಗಡೆಗೆ ಕೋರಿ ಗೃಹಸಚಿವ ಡಾ. ಜಿ. ಪರಮೇಶ್ವರ್​ಗೆ ಶಾಸಕ ತನ್ವೀರ್ (Tanveer Sait) ಪತ್ರ ಬರೆದಿದ್ದಾರೆ. ಸದ್ಯ ಇದೀಗ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ತನ್ವೀರ್ ಸೇಠ್, ಪ್ರಕರಣದಲ್ಲಿ ಆಗಿನ ಸರ್ಕಾರದ ಒತ್ತಡಕ್ಕೆ ಪೊಲೀಸರು ಹಲವು ಅಮಾಯಕರು, ಮುಗ್ಧರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಯಾರದ್ದೋ ತಪ್ಪಿಗೆ ಈ ಅಮಾಯಕರು ಜೈಲು, ಬೇಲು ಅಂತ ಓಡಾಡಿದ್ದಾರೆ ಎಂದು ಹೇಳಿದರು.

ನಾನು ಗಲಭೆಗೆ ಕಾರಣರಾದ ಅಪರಾಧಿಗಳ ಪರ ಮಾತಾಡಿಲ್ಲ, ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಲಿ. ಆದರೆ ಮುಗ್ಧರು, ಅಮಾಯಕರಿಗೆ ಶಿಕ್ಷೆ ಆಗಬಾರದು, ಅವರ ಬದುಕು ನಾಶ ಆಗಬಾರದು ಅನ್ನೋದಷ್ಟೇ ನನ್ನ ಉದ್ದೇಶ ಎಂದರು.

ಇಂಥವರ ವಿರುದ್ಧ ಪರಿಶೀಲನೆ ನಡೆಸಿ ನಿಯಮಾನುಸಾರ ದೂರು ವಾಪಸ್‌ಗೆ ಮನವಿ ಮಾಡಿದ್ದೇನೆ ಅಷ್ಟೇ. ಆದರೆ ಈ‌ ಪತ್ರದ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸಲಾಗಿದೆ. ಇದಕ್ಕೆ ಬಿಜೆಪಿಯವರ ಅಪಪ್ರಚಾರವೇ ಕಾರಣ ಎಂದು ಶಾಸಕ ತನ್ವೀರ್ ಸೇಠ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಶಾಸಕ ತನ್ವೀರ್ ಸೇಠ್​ ಉಗ್ರಗಾಮಿ ಸಂಘಟನೆ ಮುಖ್ಯಸ್ಥ: ಬಿಜೆಪಿ ಸಂಸದ ಎಸ್​ ಮುನಿಸ್ವಾಮಿ ತೀವ್ರ ವಾಗ್ದಾಳಿ

ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪ್ರತಿಕ್ರಿಯಿಸಿದ್ದು, ಅಮಾಯಕರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ತನ್ವಿರ್ ಸೇಠ್ ಬರೆದ ಪತ್ರದ ಹಿಂದೆ ಹಿರಿಯ ನಾಯಕರು ಇದ್ದಾರೆ. ಅಂದು ನನ್ನ ವಿರುದ್ಧ ಪಿತೂರಿ ಮಾಡಿದರು. ಸರ್ಕಾರದ ಈ ನಡೆ ವಿರುದ್ಧ ಕೋರ್ಟ್​​ ಮೂಲಕ ಹೋರಾಟ ಮಾಡುತ್ತೇನೆ. ಆರೋಪಿಗಳ ಬಿಡುಗಡೆಗೆ ಹುನ್ನಾರ ನಡೆಯುತ್ತಿದೆ ಅನ್ನೋ ಅನುಮಾನವಿದೆ ಎಂದು ಹೇಳಿದರು.

ತನ್ವೀರ್ ಸೇಠ್ ವಿರುದ್ಧ ಕಿಡಿಕಾರಿದ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ

ತನ್ವೀರ್ ಸೇಠ್​ ಪತ್ರ ವಿಚಾರವಾಗಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟ ಕಿಡಿಕಾರಿದ್ದಾರೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಸಂದರ್ಭದಲ್ಲಿ ಸಿಕ್ಕ ಸಿಕ್ಕವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ನಮ್ಮ ಸಂಘಟನೆಯ ಅಧ್ಯಕ್ಷ ಮುನೇಗೌಡರ ನಿವಾಸದ ಮೇಲೆ ಕೂಡ ದಾಳಿ ಮಾಡಿದ್ದು, ದ್ವಿಚಕ್ರ ವಾಹನ ಸುಟ್ಟಿದ್ದಾರೆ. ಇದೆಲ್ಲಾ ನೆನಪು ಮಾಡಿಕೊಳ್ಳದೆ ಕೇಸ್ ವಾಪಸ್ ಪಡೆಯಿರಿ ಅಂತೀರಲ್ಲ. ಪ್ರಕರಣದ ಆರೋಪಿಗಳನ್ನು ತನ್ವೀರ್ ಸೇಠ್ ಅಮಾಯಕರು ಎಂದಿದ್ದಾರೆ ಎಂದರು.

ಇದನ್ನೂ ಓದಿ: ಡಿಜೆ ಹಳ್ಳಿ-ಕೆಜಿ ಹಳ್ಳಿ ಸೇರಿದಂತೆ ಇತರೆ ಹಿಂಸಾಚಾರ ಪ್ರಕರಣಗಳನ್ನು ಮರು ಪರಿಶೀಲಿಸಿ ಹಿಂಪಡೆಯುವಂತೆ ಸೂಚಿಸಿದ ಗೃಹ ಸಚಿವ

ನಾಡು, ನುಡಿ, ಜಲ ವಿಚಾರದಲ್ಲಿ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ನಮ್ಮ ಮೇಲೆ ಸಾಕಷ್ಟು ಕೇಸ್ ಹಾಕಿದ್ದಾರೆ, ನೀವು ಒಂದು ಮಾತನಾಡಿಲ್ಲ. ಕಳೆದ 15 ವರ್ಷಗಳಿಂದ ನಮ್ಮನ್ನು ಸುತ್ತಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯಲು ಮನವಿ ಮಾಡಿದ್ದೇವೆ. ಈ ಹಿಂದೆ ಬೊಮ್ಮಾಯಿ ಅವರಿಗೂ 3 ಬಾರಿ ಮನವಿ ಮಾಡಿದ್ದೆವು. ಕನ್ನಡಪರ ಹೋರಾಟಗಾರರ ಮೇಲಿನ ಕೇಸ್​ಗಳನ್ನು ಹಿಂಪಡೆಯುತ್ತಿಲ್ಲ.  ಕನ್ನಡಪರ ಹೋರಾಟಗಾರರು, ರೈತರ ಮೇಲಿನ ಕೇಸ್ ಹಿಂಪಡೆಯಬೇಕು. ಒಂದು ವೇಳೆ ಕೇಸ್ ವಾಪಸ್ ಪಡೆಯದಿದ್ರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:06 pm, Thu, 27 July 23