ಶೆಟ್ಟರ್​​ ಬಿಜೆಪಿಗೆ ಮರಳಿದ ಬೆನ್ನಲ್ಲೇ ಲಕ್ಷ್ಮಣ ಸವದಿ ಜತೆ ಮಾತುಕತೆ ನಡೆಸಿದ ಡಿಕೆ ಶಿವಕುಮಾರ್

ಶೆಟ್ಟರ್ ಅವರನ್ನು 35,000 ಮತಗಳಿಂದ ಜನರು ತಿರಸ್ಕರಿಸಿದ್ದರೂ ನಾವು (ಕಾಂಗ್ರೆಸ್) ಅವರನ್ನು ಗೌರವದಿಂದ ನೋಡಿಕೊಂಡು ಎಂಎಲ್‌ಸಿ ಮಾಡಿದ್ದೇವೆ. ಈಗ ಅವರು ಬಿಜೆಪಿ ಸೇರಿರುವುದು ಅವರ ಆತ್ಮಸಾಕ್ಷಿಗೆ ಮತ್ತು ಜನರಿಗೆ ಬಿಟ್ಟ ವಿಚಾರ ಎಂದು ಶಿವಕುಮಾರ್ ಹೇಳಿದ್ದಾರೆ.

ಶೆಟ್ಟರ್​​ ಬಿಜೆಪಿಗೆ ಮರಳಿದ ಬೆನ್ನಲ್ಲೇ ಲಕ್ಷ್ಮಣ ಸವದಿ ಜತೆ ಮಾತುಕತೆ ನಡೆಸಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ & ಲಕ್ಷ್ಮಣ ಸವದಿ
Follow us
| Updated By: ಗಣಪತಿ ಶರ್ಮ

Updated on: Jan 26, 2024 | 8:02 AM

ಬೆಂಗಳೂರು, ಜನವರಿ 26: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿಗೆ (BJP) ಮರಳಿರುವುದು ಕಾಂಗ್ರೆಸ್​​​ಗೆ ಶಾಕ್ ನೀಡಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿಯಿಂದ ಬಂದಿರುವ ಮತ್ತೊಬ್ಬ ನಾಯಕ ಲಕ್ಷ್ಮಣ್ ಸವದಿ (Laxman Savadi) ಬಳಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾತುಕತೆ ನಡೆಸಿದ್ದಾರೆ. ಶೆಟ್ಟರ್ ಬಿಜೆಪಿ ಸೇರ್ಪಡೆ ಸಾಧ್ಯತೆ ಬಗ್ಗೆ ತಮಗೂ ಸುಳಿವು ಇರಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಶೆಟ್ಟರ್ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ತಕ್ಷಣ, ಶಿವಕುಮಾರ್ ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿ ಅವರನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳಲು ಮಾತುಕತೆ ನಡೆಸಿದ್ದಾರೆ.

ಲಿಂಗಾಯತ ಸಮುದಾಯಕ್ಕೆ ಸೇರಿದ ಬಿಜೆಪಿ ನಾಯಕರಲ್ಲಿ ಸವದಿ ಕೂಡ ಒಬ್ಬರು, ಅವರು ಮೇ 10 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ಗೆ ಸೇರಿದ್ದರು.

ಶೆಟ್ಟರ್ ಅವರನ್ನು 35,000 ಮತಗಳಿಂದ ಜನರು ತಿರಸ್ಕರಿಸಿದ್ದರೂ ನಾವು (ಕಾಂಗ್ರೆಸ್) ಅವರನ್ನು ಗೌರವದಿಂದ ನೋಡಿಕೊಂಡು ಎಂಎಲ್‌ಸಿ ಮಾಡಿದ್ದೇವೆ. ಈಗ ಅವರು ಬಿಜೆಪಿ ಸೇರಿರುವುದು ಅವರ ಆತ್ಮಸಾಕ್ಷಿಗೆ ಮತ್ತು ಜನರಿಗೆ ಬಿಟ್ಟ ವಿಚಾರ ಎಂದು ಶಿವಕುಮಾರ್ ಹೇಳಿದ್ದಾರೆ.

ಕ್ಷೇತ್ರದ ನಾಯಕರಿಂದ ಬಿಜೆಪಿ ಸೇರಲು ಆಫರ್ ಬರುತ್ತಿದೆ ಎಂದು ಶೆಟ್ಟರ್ ಕೆಲವು ದಿನ ಹಿಂದೆ ಹೇಳಿದ್ದರು. ಆದರೆ ಆ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದೂ ಹೇಳಿದ್ದರು. ಅವರ ಮಾತನ್ನು ನಾನು ನಂಬಿದ್ದೇನೆ, ಏಕೆಂದರೆ ಕಾಂಗ್ರೆಸ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಶೆಟ್ಟರ್ ಹಿರಿತನವನ್ನು ಪರಿಗಣಿಸಿ ಕಾಂಗ್ರೆಸ್ ಅವರನ್ನು ಗೌರವದಿಂದ ನಡೆಸಿಕೊಂಡಿತ್ತು. ರಾಮಮಂದಿರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಅವರನ್ನು ಬಲವಂತದಿಂದ ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ.

ಏತನ್ಮಧ್ಯೆ, ಲೋಕಸಭೆ ಚುನಾವಣೆಗೆ ಲಿಂಗಾಯತ ಮತಗಳ ಮೇಲೆ ಬಿಜೆಪಿ ನಾಯಕರು ದೃಷ್ಟಿ ನೆಟ್ಟಿರುವಂತೆ ತೋರುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಹೀಗಾಗಿ ಶೆಟ್ಟರ್ ಅವರನ್ನು ಮತ್ತೆ ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Also Read: ಜಗದೀಶ್ ಶೆಟ್ಟರ್​ ಕಾಂಗ್ರೆಸ್​ಗೆ ಶೆಟರ್ ಹಾಕಿ ಬಿಜೆಪಿಗೆ ವಾಪಸ್ ಆಗಿದ್ಯಾಕೆ? ಇಲ್ಲಿವೆ ಕಾರಣಗಳು

ಶೆಟ್ಟರ್ ನಡೆಯನ್ನು ಪ್ರಶ್ನಿಸಿದ ಎಂಬಿ ಪಾಟೀಲ್, ಮಾಜಿ ಸಿಎಂ ತರಾತುರಿಯಲ್ಲಿ ಬಿಜೆಪಿಗೆ ಮರಳಿರುವುದು ಅವರ ಸ್ಥಾನಮಾನಕ್ಕೆ ತಕ್ಕುದಲ್ಲ. ವಿಶೇಷವಾಗಿ ಕೇಸರಿ ಪಕ್ಷವು ಅವರನ್ನು ಕೈಬಿಟ್ಟ ನಂತರ ಕಾಂಗ್ರೆಸ್ ಅವರನ್ನು ಚೆನ್ನಾಗಿ ನಡೆಸಿಕೊಂಡಿತ್ತು ಎಂದು ಹೇಳಿದ್ದಾರೆ.

ಶೆಟ್ಟರ್​ಗೆ ಕಾಂಗ್ರೆಸ್‌ನಲ್ಲಿ ಉತ್ತಮ ಭವಿಷ್ಯವಿತ್ತು. ಪಕ್ಷವು ಅವರಿಗೆ ಧಾರವಾಡ ಲೋಕಸಭಾ ಸ್ಥಾನಕ್ಕೆ ಟಿಕೆಟ್ ನೀಡಬಹುದು ಎಂಬ ಆಲೋಚನೆ ಇತ್ತು. ಬಿಜೆಪಿ ಅವರ ಮೇಲೆ ಒತ್ತಡ ಹೇರಿದೆಯೋ ಅಥವಾ ಆಮಿಷ ಒಡ್ಡಿದೆಯೋ ಗೊತ್ತಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ