5 ಗ್ಯಾರಂಟಿ ಯೋಜನೆಗಳನ್ನು ಪಡೆಯಲು ರಾಜ್ಯದ ಜನರು ಇನ್ನೊಂದು ವಾರ ಕಾಯಬೇಕಾ?

|

Updated on: May 27, 2023 | 4:23 PM

ಪೂರ್ಣ ಪ್ರಮಾಣದ ಸಂಪುಟ ರಚನೆ ಆಗಿದೆ. ಇಂದು ಅಥವಾ ನಾಳೆ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಂಪುಟ (Siddaramaiah Cabinet) ಕಸರತ್ತಿಗೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್‌ಗೆ ಕಗ್ಗಂಟಾಗಿದ್ದ ಸಂಪುಟ ವಿಸ್ತರಣೆ ಕೊನೆಗೂ ಮುಗಿದಿದೆ. 24 ಮಂತ್ರಿಗಳು ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ. ಇಂದು ಅನೌಪಚಾರಿಕ ಕ್ಯಾಬಿನೆಟ್ ಸಭೆ ಆಗಿದೆ. ಆದರೆ ಸಭೆಯಲ್ಲಿ ಕಾಂಗ್ರೆಸ್​ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಕುರಿತಾಗಿ ಯಾವುದೇ ಚರ್ಚೆಯಾಗಿಲ್ಲ. ಮುಂದಿನ‌ವಾರ ಕ್ಯಾಬಿನೆಟ್ ಸಭೆ ನಡೆಯಲಿದೆ. ಹಾಗಾದರೆ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ರಾಜ್ಯದ ಜನತೆ ಇನ್ನು ಒಂದು ವಾರ ಕಾಯಬೇಕಾ ಎನ್ನುವ ಪ್ರಶ್ನೆ ಹುಟ್ಟುಕೊಂಡಿದೆ.

ಕ್ಯಾಬಿನೆಟ್ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ: ರಾಮಲಿಂಗ ರೆಡ್ಡಿ

ಸಚಿವ ರಾಮಲಿಂಗ ರೆಡ್ಡಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, 24 ಮಂತ್ರಿಗಳು ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ. ಅನೌಪಚಾರಿಕ ಕ್ಯಾಬಿನೆಟ್ ಸಭೆ ಆಗಿದೆ. ರಾಜ್ಯಪಾಲರಿಗೆ ಸಚಿವರ ಲಿಸ್ಟ್‌ ಅನ್ನು ಸಿಎಂ ಕಳುಹಿಸುತ್ತಾರೆ. ನಂತರವಷ್ಟೇ ಖಾತೆ ಬಗ್ಗೆ ಅಧಿಕೃತವಾಗಿ ಗೊತ್ತಾಗುತ್ತೆ. ಮುಂದಿನ‌ವಾರ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಆಗುತ್ತೆ ಎಂದರು.

ಇದನ್ನೂ ಓದಿ: ಲಕ್ಷ್ಮಣ ಸವದಿಗೆ ಮಂತ್ರಿಗಿರಿ ನೀಡಬೇಕು: ಮೂರು ಸಾವಿರ ಮಠದ ಸ್ವಾಮೀಜಿ ಆಗ್ರಹ

ಇಂದು ಅಥವಾ ನಾಳೆ ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಸಿದ್ದರಾಮಯ್ಯ

ಪೂರ್ಣ ಪ್ರಮಾಣದ ಸಂಪುಟ ರಚನೆ ಆಗಿದೆ. ಇಂದು ಅಥವಾ ನಾಳೆ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಆ ಮೂಲಕ ಖಾತೆ ಹಂಚಿಕೆಯನ್ನು ಮುಂದಿನ ಕ್ಯಾಬಿನೆಟ್ ಸಭೆಗೆ ಮುಂದುಡಿದ್ದಾರೆ. ಸಂಪುಟ ಸಭೆ ಬಳಿಕ ಮಾತನಾಡಿದ ಅವರು ಕೆಲವು ಮಾನದಂಡಗಳ ಆಧಾರದಲ್ಲಿ ಸಂಪುಟ ವಿಸ್ತರಣೆ ಮಾಡಲಾಗಿದೆ. ಮುಂದಿನ ಸಂಪುಟದಲ್ಲಿ ಐದು ಗ್ಯಾರಂಟಿ ಜಾರಿ ಮಾಡುತ್ತೇವೆ. ಈಗಲೂ ನಾವು ಜನರಿಗೆ ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದು ಹೇಳಿದರು.

ವಿರೋಧ ಪಕ್ಷದವರು ಜನರಿಗೆ ಕೊಟ್ಟ ಭರವಸೆ ಈಡೇರಿಸಿರಲಿಲ್ಲ. ಪ್ರಣಾಳಿಕೆಯಲ್ಲಿ ಕೊಟ್ಟಿರುವ ಎಲ್ಲಾ ಭರವಸೆ ಈಡೇರಿಸುತ್ತೇವೆ ಎಂದು ಹೇಳಿದರು. ಯಾರು ಮೊದಲ ಬಾರಿ ಗೆದ್ದಿದ್ದಾರೆ ಅವರನ್ನು ಮಂತ್ರಿ ಮಾಡಿಲ್ಲ. ಮೂರು ನಾಲ್ಕು ಭಾರಿ ಗೆದ್ದವರಿಗೆ ಮಂತ್ರಿ ಮಾಡಿದ್ದೇವೆ. ಹಳೆ ಮತ್ತು ಹೊಸ ಮುಖಗಳು ಇದ್ದಾವೆ. ಎಲ್ಲರನ್ನೂ ಯಾಕೆ ಮಾಡಿದ್ದಿವಿ ಅಂದರೆ ಸರ್ಕಾರ ಜನರಿಗೆ ಕೊಟ್ಟಿರುವ ಭರವಸೆ ಈಡೇರಿಸಬೇಕು. ಜನ ಬದಲಾವಣೆ ಬಯಸಿದ್ದಾರೆ. ಹೊಸ ಬದಲಾವಣೆ ತರಬೇಕು ಎಂದರು.

ಇದನ್ನೂ ಓದಿ: Siddaramaiah Cabinet:ಸಿದ್ದರಾಮಯ್ಯ ಸಂಪುಟ ಫುಲ್​ ಫಿಲ್: ಅನುಭವಿ- ಉತ್ಸಾಹಿ ತಂಡ ಹೀಗಿದೆ

ಸಚಿವ ಸ್ಥಾನ ಸಿಗದಕ್ಕೆ ಅಸಮಾಧಾನ

ಕೊಡಗಿನ ಸಚಿವ ಸ್ಥಾನ ಸಿಗದಕ್ಕೆ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಿನಗೆ ಅಸಮಾಧಾನ ಇರಬೇಕು. ನೀನು ಕೊಡಗಿನವಾ? ಒಂದು ಮಾನದಂಡ ಉಪಯೋಗಿಸಿದ್ದೀವಿ. ಹೊಸದಾಗಿ ಸುಮಾರು ಜಿಲ್ಲೆಗಳಿಗೆ ಕೊಟ್ಟಿಲ್ಲ. ಕೊಡಗು, ಚಿಕ್ಕಮಗಳೂರು, ಹಾಸನಕ್ಕೆ ಕೊಟ್ಟಿಲ್ಲ. ಮೊದಲ ಬಾರಿಗೆ ಗೆದ್ದವರಿಗೆ ಕೊಟ್ಟಿಲ್ಲ. ಯಾವಾಗಲೂ ಅಸಮಾಧಾನದಲ್ಲಿ ಸಮಾಧಾನ ಇದೆ. ರಾತ್ರಿ ಪುಟ್ಟರಂಗ ಶೆಟ್ಟಿ ಜೊತೆ ಮಾತಾಡಿದ್ದೀನಿ. ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.