DK Shivakumar: ತಡವಾಗಿ ಬಂದದ್ದಕ್ಕೆ ಪತ್ರಿಕಾಗೋಷ್ಠಿ ಬಹಿಷ್ಕಾರ; ಪತ್ರಕರ್ತರ ವಿರುದ್ಧ ಡಿಕೆ ಶಿವಕುಮಾರ್ ಗರಂ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತುಂಬಾ ತಡವಾಗಿ ಬಂದ ಕಾರಣ ಕೆಲವು ಮಾಧ್ಯಮಗಳ ಪ್ರತಿನಿಧಿಗಳು ಪತ್ರಿಕಾಗೋಷ್ಠಿ ಬಹಿಷ್ಕರಿಸಿದ ವಿದ್ಯಮಾನ ಬೆಂಗಳೂರಿನಲ್ಲಿ ನಡೆದಿದೆ.

DK Shivakumar: ತಡವಾಗಿ ಬಂದದ್ದಕ್ಕೆ ಪತ್ರಿಕಾಗೋಷ್ಠಿ ಬಹಿಷ್ಕಾರ; ಪತ್ರಕರ್ತರ ವಿರುದ್ಧ ಡಿಕೆ ಶಿವಕುಮಾರ್ ಗರಂ
ಡಿಕೆ ಶಿವಕುಮಾರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Apr 26, 2023 | 7:52 PM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ತುಂಬಾ ತಡವಾಗಿ ಬಂದ ಕಾರಣ ಕೆಲವು ಮಾಧ್ಯಮಗಳ ಪ್ರತಿನಿಧಿಗಳು ಪತ್ರಿಕಾಗೋಷ್ಠಿ ಬಹಿಷ್ಕರಿಸಿದ ವಿದ್ಯಮಾನ ಬೆಂಗಳೂರಿನಲ್ಲಿ ನಡೆದಿದೆ. ಇದರಿಂದ ಸಿಟ್ಟಾದ ಡಿಕೆ ಶಿವಕುಮಾರ್ ಪತ್ರಕರ್ತರ ವಿರುದ್ಧ ಹರಿಹಾಯ್ದಿರುವ ವಿಡಿಯೋ ತುಣುಕನ್ನು ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದು, ಟೀಕಿಸಿದ್ದಾರೆ. ಮೂಲಗಳ ಪ್ರಕಾರ, ಹೆಲಿಕಾಪ್ಟರ್​​​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪ್ರಯಾಣ ವಿಳಂಬವಾದದ್ದರಿಂದ ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿಗೆ ನಿಗದಿಗಿಂತ ಸುಮಾರು ಒಂದು ಗಂಟೆ ತಡವಾಗಿ ಬಂದಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಕೆಲವು ಪತ್ರಕರ್ತರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದೇ ತೆರಳಿದ್ದಾರೆ.

ಕೆಲವು ಮಂದಿ ಪತ್ರಕರ್ತರು ಪತ್ರಿಕಾಗೋಷ್ಠಿ ಬಹಿಷ್ಕರಿಸಿ ತೆರಳಲು ಮುಂದಾಗುತ್ತಿದ್ದಂತೆಯೇ ತುಸು ಗರಂ ಆದ ಡಿಕೆ ಶಿವಕುಮಾರ್, ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡಲಾಗದು ಎಂದಿದ್ದಾರೆ. ಏನು ಎಲ್ಲರೂ ಕೈಯಲ್ಲಿ ವಾಚ್​ ಹಿಡಿದುಕೊಂಡೇ ಇರುತ್ತೀರಾ? ಎಲ್ಲವೂ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಪತ್ರಿಕಾಗೋಷ್ಠಿಯನ್ನು ಯಾವಾಗ ಕರೆಯಬೇಕು, ಯಾರನ್ನು ಕರೆಯಬೇಕು ಮತ್ತು ಯಾವಾಗ ತುರ್ತು ಪತ್ರಿಕಾಗೋಷ್ಠಿ ಕರೆಯಬೇಕು ಎಂಬುದು ನನಗೆ ಗೊತ್ತಿದೆ. ನನ್ನನ್ನೇ ಬ್ಲಾಕ್​ಮೇಲ್ ಮಾಡಲು ಪ್ರಯತ್ನಿಸಬೇಡಿ ಎಂದು ಡಿಕೆ ಶಿವಕುಮಾರ್ ಕೋಪದಿಂದ ಹೇಳಿದ್ದಾರೆ. ನಂತರ, ತಮ್ಮ ಮಾಧ್ಯಮ ಸಂಯೋಜಕರನ್ನು ಉದ್ದೇಶಿಸಿ ಯಾರೆಲ್ಲ ವಾಪಸ್ ಹೋಗಿದ್ದಾರೋ ಅವರ ವಿವರ ಕೊಡಿ. ಅವರು ಕೆಲಸ ಮಾಡುವ ಮಾಧ್ಯಮ ಸಂಸ್ಥೆಗಳ ಆಡಳಿತ ಮಂಡಳಿ ಜತೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಪದೇಪದೇ ತಡವಾಗಿ ಬಂದಿದ್ದಕ್ಕೆ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದ ಸುದ್ದಿಗಾರರಿಗೆ ಕಾಂಗ್ರೆಸ್ ಪಕ್ಷದಲ್ಲಿನ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿ ಡಿಕೆ ಶಿವಕುಮಾರ್ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಎಲ್ಲಾ ಪತ್ರಕರ್ತರು ಕೇವಲ ಕೆಲವು ಆಹಾರ ಮತ್ತು ವೈನ್‌ಗಾಗಿ ತಮ್ಮ ಆತ್ಮಸಾಕ್ಷಿಯನ್ನು ಮಾರುವವರಲ್ಲ ಎಂಬುದನ್ನು ಡಿಕೆ ಶಿವಕುಮಾರ್ ಅರಿತುಕೊಳ್ಳಬೇಕು ಎಂದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಫ್ರೀಡಂ ಆಫ್ ಪ್ರೆಸ್​ಗೆ ಧಕ್ಕೆ ತಂದ್ರಾ ಡಿಕೆ ಶಿವಕುಮಾರ್? 

ಡಿಕೆ ಶಿವಕುಮಾರ್​ ವಿರುದ್ಧ ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದ ನಿಯೋಗದಿಂದ ದೂರು ನೀಡಲಾಗಿದೆ. ವಿಡಿಯೋ ಸಾಕ್ಷಿ ಸಮೇತ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ, ಡಿಕೆಶಿ ಅವರು ಮೊನ್ನೆ ಪ್ರೆಸ್‌ಮೀಟ್ ಕರೆದಿದ್ದು, ಲೇಟಾಗಿ ಬಂದು ಅವರೇ ಪತ್ರಕರ್ಗರಿಗೆ ಬೆದರಿಕೆ ಹಾಕಿದಾರೆ. ಡಿಕೆಶಿ ಈಗಲೇ ಹೀಗೆ, ಇನ್ನು ಇವರು ಅಧಿಕಾರಕ್ಕೆ ಬಂದ್ದರೆ ಗೂಂಡಾಗಿರಿ ಮಾಡುತ್ತಾರೆ. ಅವರು ಫ್ರೀಡಂ ಆಫ್ ಪ್ರೆಸ್​ಗೆ ಧಕ್ಕೆ ತಂದಿದಾರೆ. ಪತ್ರಕರ್ತರ ಪರ ನಾಮಿದ್ದೇವೆ. ಅವರಿಗೆ ಯಾವುದೇ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Wed, 26 April 23