ಚಂಡೀಗಢ: ಹರ್ಯಾಣದ (Haryana) ಕಾಂಗ್ರೆಸ್ ಶಾಸಕ ಕುಲದೀಪ್ ಬಿಷ್ಣೋಯ್ (Kuldeep Bishnoi)ಅವರು ಇಂದು (ಬುಧವಾರ) ರಾಜೀನಾಮೆ ನೀಡಿದ್ದಾರೆ. ಬಿಷ್ಣೋಯ್ ಚಂಡೀಗಢದಲ್ಲಿ ಅಸೆಂಬ್ಲಿ ಸ್ಪೀಕರ್ ಗಿಯಾನ್ ಚಂದ್ ಗುಪ್ತಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ನಾಳೆ ಬಿಜೆಪಿಗೆ (BJP) ಸೇರ್ಪಡೆಯಾಗಲಿದ್ದಾರೆ. ಇವರ ರಾಜೀನಾಮೆಯಿಂದಾಗಿ ಪ್ರಸ್ತುತ ಹಿಸಾರ್ ಜಿಲ್ಲೆಯ ಆದಂಪುರ ಸ್ಥಾನಕ್ಕೆ ಉಪಚುನಾವಣೆ ಮಾಡಬೇಕಾಗುತ್ತದೆ. ಕಾಂಗ್ರೆಸ್ ತನ್ನ ಸಿದ್ಧಾಂತದಿಂದ ಹಿಂದೆ ಸರಿದಿದೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಕಾಲದಲ್ಲಿ ಇದ್ದಂತೆ ಈಗಿಲ್ಲ ಎಂದ ಬಿಷ್ಣೋಯ್ ಹೇಳಿದ್ದಾರೆ. ಜೂನ್ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ನಂತರ 53 ವರ್ಷದ ಬಿಷ್ಣೋಯ್ ಅವರನ್ನು ಕಾಂಗ್ರೆಸ್ ಎಲ್ಲಾ ಪಕ್ಷದ ಸ್ಥಾನಗಳಿಂದ ಹೊರಹಾಕಿತ್ತು.
ನಾಲ್ಕು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಂಸದರಾಗಿದ್ದ ಬಿಷ್ಣೋಯ್ ಮೊದಲಿನಿಂದಲೂ ಕಾಂಗ್ರೆಸ್ ಬಗ್ಗೆ ಅಸಮಾಧಾನಗೊಂಡಿದ್ದರು. ಈ ವರ್ಷದ ಆರಂಭದಲ್ಲಿ ಪರಿಷ್ಕರಣೆ ಹೊತ್ತಲ್ಲಿ ಹರ್ಯಾಣ ಘಟಕದ ಮುಖ್ಯಸ್ಥರ ಹುದ್ದೆಗೆ ಪಕ್ಷವು ಅವರನ್ನು ಕಡೆಗಣಿಸಿದ ನಂತರ ಅವರು ಬಂಡಾಯವೆದ್ದಿದ್ದರು.