ವಿದೇಶದಿಂದ ಕುಮಾರಸ್ವಾಮಿ ವಾಪಸ್: ಕಾಂಬೋಡಿಯಾಗೆ ಹೋಗಿದ್ಯಾಕೆ? ಕಾರಣ ಬಿಚ್ಚಿಟ್ಟ ಮಾಜಿ ಸಿಎಂ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಕಾಂಬೋಡಿಯಾದಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ನಿನ್ನೆ (ಆ.13) ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಬೋಡಿಯಾದ ಐತಿಹಾಸಿಕ ಪ್ರಸಿದ್ಧವಾದ ಆಂಗ್‌ಕರ್ ವಾಟ್ ದೇವಾಲಯ ಇತಿಹಾಸ, ಸಂಸ್ಕೃತಿಯನ್ನು ಹಾಡಿಹೊಗಳಿದ್ದಾರೆ. ಹಾಗಾದ್ರೆ, ಕುಮಾರಸ್ವಾಮಿ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ನೋಡಿ.

ವಿದೇಶದಿಂದ ಕುಮಾರಸ್ವಾಮಿ ವಾಪಸ್: ಕಾಂಬೋಡಿಯಾಗೆ ಹೋಗಿದ್ಯಾಕೆ? ಕಾರಣ ಬಿಚ್ಚಿಟ್ಟ ಮಾಜಿ ಸಿಎಂ
ಕಾಂಬೋಡಿಯಾದ ಆಂಗ್‌ಕರ್ ವಾಟ್ ದೇವಾಲಯದಲ್ಲಿ ಹೆಚ್​ಡಿಕೆ
Edited By:

Updated on: Aug 14, 2023 | 7:45 AM

ಬೆಂಗಳೂರು, (ಆಗಸ್ಟ್ 14): ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ವಿದೇಶ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ (Bengaluru) ವಾಪಸ್ ಆಗಿದ್ದಾರೆ. ನಿನ್ನೆ (ಆಗಸ್ಟ್ 13) ರಾತ್ರಿ 11.30ರ ವಿಮಾನದಲ್ಲಿ ಕೌಲಾಲಂಪುರದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇನ್ನು ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಹಿರಿಯರು ದೇಶ ಸುತ್ತು ಕೋಶ ಓದು ಅಂತ ಗಾದೆ ಮಾತು ಹೇಳಿದ್ದಾರೆ. ಯಾವ್ಯಾವ ದೇಶದಲ್ಲಿ ಏನೇನಿದೆ ಎಂದು ತಿಳಿದುಕೊಳ್ಳಬೇಕು ಅಲ್ವಾ. ಯಾವ್ಯಾವ ದೇಶದಲ್ಲಿ ಏನೆಲ್ಲ ಅಭಿವೃದ್ದಿಯಾಗಿದೆ. ನಮ್ಮಲ್ಲಿ ಯಾವ ರೀತಿ ನಡೆಯುತ್ತಿದೆ. ಇದನ್ನೆಲ್ಲ ನೋಡಲು ನಾನು ಕಂಬೋಡಿಯಾಗೆ(Cambodia) ಹಲವಾರು ಸ್ನೇಹಿತರ ಜೊತೆ ಹೋಗಿದ್ದೆ ಎಂದು ವಿದೇಶ ಪ್ರವಾಸದ ಕಾರಣ ಬಿಚ್ಚಿಟ್ಟರು.

ನಮಗೇನು ವಿದೇಶಕ್ಕೆ ಹೋಗುವ ಯೋಗ್ಯತೆ ಇಲ್ವಾ? ಆ ಪಾಪದ ಹಣವನ್ನ ತೆಗೆದುಕೊಂಡು ಹೋಗಬೇಕಾ ನಾನು. ನಾನು ಕಳೆದ 12 ವರ್ಷಗಳಿಂದ ಪಕ್ಷ ಸಂಘಟನೆಗೆ ನನ್ನ ಸಮಯವನ್ನ ಮೀಸಲಿಟ್ಟಿದ್ದೆ. ಮಲೇಶಿಯಾಗೆ ಹೋಗಿಲ್ಲ. ಕಾಂಬೋಡಿಯಾಗೆ ಹೋಗಿದ್ದೆ. ಅಲ್ಲಿನ ಸುಂದರ ಅತಿದೊಡ್ಡ ಹಿಂದೂ ದೇವಸ್ಥಾನ ನೋಡಲು ಹೋಗಿದ್ದೆ. ಮೂರು ದಿನ ಸುತ್ತಿದ್ರು ಆ ದೇವಸ್ಥಾನ ನೋಡಲು ಆಗುವುದಿಲ್ಲ. ಆ ಸಂಸ್ಕ್ರತಿಯನ್ನ ನೋಡಲು ಆದೇಶದ ಆರ್ಥಿಕ ಬೆಳವಣಿಗೆ ನೋಡಲು ಹೋಗಿದ್ದೆ ಎಂದರು.

ಇದನ್ನೂ ಓದಿ:  ನಮಗೇನು ಯೋಗ್ಯತೆ ಇಲ್ವಾ? ವಿದೇಶದಿಂದ ವಾಪಸ್ ಆಗ್ತಿದ್ದಂತೆ ಹೆಚ್​ಡಿ ಕುಮಾರಸ್ವಾಮಿ ಗರಂ ಆಗಿದ್ದೇಕೆ?

ಇನ್ನು ಇದೇ ವೇಳೆ ಹೆಚ್​ಡಿಕೆ ವಿದೇಶದಲ್ಲೇ ಇರಲಿ ಅವರಿಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೆಲ ಸಚಿವರು ಲೂಟಿ ಹೊಡೆಯಲು ಬಿಟ್ಟುಬಿಡಲಿ ಎಂದು ಹೀಗೆ ಹೇಳಿದ್ದಾರೆ. ವಿದೇಶದಲ್ಲಿ ಇದ್ದು ಬಿಡಿ ಅಂತಾ ಸಲಹೆ ಕೊಟ್ಟಿದ್ದಾರೆ. ಅದಕ್ಕೆ ಗೌರವ ಕೊಡಬೇಕಲ್ವಾ?, ಅವರ ಹೇಳಿಕೆ ಪಾಲಿಸಬೇಕಲ್ವಾ? ವಿದೇಶದಲ್ಲೇ ಇದ್ದು ಬಿಡಲಿ ಎಲ್ಲ ವ್ಯವಸ್ಥೆ ಮಾಡ್ತೀವಿ ಅಂತ ಹೇಳಿದ್ರು. ಮಾನ ಮರ್ಯಾದೆ ಇಲ್ಲದೆ ಇಲ್ಲಿ ದರೋಡೆ ಮಾಡಿಕೊಂಡು ಕೂತಿದ್ದಾರೆ. ಅದಕ್ಕೆ ಸಚಿವರು ನಮ್ಮನ್ನು ವಿದೇಶದಲ್ಲೇ ಇರಲು ಹೇಳಿದ್ದಾರೆ ತಿರುಗೇಟು ನೀಡಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:17 am, Mon, 14 August 23

Loading...
Unable to load recommendations.
Follow Us