ಉಪಮುಖ್ಯಮಂತ್ರಿ ಪಾಳಿ ಹೋಯ್ತು, ಈಗ ಪ್ರಮೋಷನ್ ಸಿಎಂ ಪಾಳಿ: ಮುಖ್ಯಮಂತ್ರಿ ಆಸೆ ಬಿಚ್ಚಿಟ್ಟ ಶ್ರೀರಾಮುಲು
ಸಾರಿಗೆ ನೌಕರರು ವೇತನ ಹೆಚ್ಚಳ ಬೇಡಿಕೆ ಇಟ್ಟಿದ್ದಾರೆ. ಶೇ 10 ರಷ್ಟು ಹೆಚ್ಚಳಕ್ಕೆ ನಾನು ಹೇಳಿದ್ದೆನೆ. ಅವರು ಒಪ್ಪಿಲ್ಲ, ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುವೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

ರಾಯಚೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಹತ್ತಿರದಲ್ಲಿದ್ದು, ರಾಜಕೀಯ ನಾಯಕರ ಒಂದೊಂದು ಹೇಳಿಕೆಯೂ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಈ ಹಿಂದೆ ಉಪಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಚಿವ ಬಿ. ಶ್ರೀರಾಮುಲು (B Sriramulu) ಹೆಸರು ಮುನ್ನಲೆಗೆ ಬಂದಿತ್ತು. ಈಗ ಮತ್ತೆ ಚುನಾವಣೆ ಹತ್ತಿರವಾಗುತ್ತಿದ್ದು, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಶ್ರೀರಾಮುಲು ಅವರಿಗೆ ಡಿಸಿಎಂ (DCM) ಸ್ಥಾನ ಒಲಿಯಲಿದೆ ಎಂಬ ವಂದತಿಗಳು ಮತ್ತೆ ಎದ್ದಿವೆ. ಆದರೆ ಇದಕ್ಕೆ ತೆರೆ ಎಳೆದ ಶ್ರೀರಾಮುಲು ಒಂದು ಹೆಜ್ಜೆ ಮುಂದೆ ಹೋಗಿ ಉಪ ಮುಖ್ಯಮಂತ್ರಿ ಪಾಳಯ ಹೋಗಿದೆ, ಈಗ ಪ್ರಮೋಷನ್, ಈಗ ಮುಖ್ಯಮಂತ್ರಿ ಪಾಳಯ, ಪಾರ್ಟಿ ಅವಕಾಶ ಮಾಡಿಕೊಟ್ಟರೇ ಸಿಎಂ ಆಗುತ್ತೇನೆ ಎನ್ನುವ ಮೂಲಕ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಾರಿಗೆ ನೌಕರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ
ರಾಯಚೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ವೇತನ ಹೆಚ್ಚಳ ಬೇಡಿಕೆ ಇದೆ. ಶೇ 10 ರಷ್ಟು ಹೆಚ್ಚಳಕ್ಕೆ ನಾನು ಹೇಳಿದ್ದೆನೆ, ಅವರು ಒಪ್ಪಿಲ್ಲ, ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುವೆ ಎಂದು ಹೇಳಿದರು.
ಬಿಎಂಟಿಸಿ ನಿರ್ವಾಹಕ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ
ಬಿಎಂಟಿಸಿ ಬಸ್ಗೆ ಬೆಂಕಿ ತಗುಲಿ ನಿರ್ವಾಹಕ ಸಾವನ್ನಪ್ಪಿದ ವಿಚಾರವಾಗಿ ಮಾತನಾಡಿದ ಅವರು ಬೆಂಕಿ ಅನಾಹುತವಾಗಿ ಅವರು ಸಾವನ್ನಪ್ಪಿದ್ದಾರೆ. 5 ಲಕ್ಷ ರೂ. ಪರಿಹಾರ ಕೊಡಬೇಕು, ಅವರ ಕುಟುಂಬಕ್ಕೆ ಸರ್ಕಾರಿ ಕೆಲಸ ಕೊಡಬೇಕು ಅಂತ ಆದೇಶ ಮಾಡಿದ್ದೇನೆ. ಶೀಘ್ರವೆ ಈ ಕೆಲಸ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಸಾರಿಗೆ ನಿಗಮಗಳ ನೌಕರರ ಜೊತೆ ಸಚಿವ ಶ್ರೀರಾಮುಲು ಸಭೆ ವಿಫಲ
ಮೋದಿ ಹೆಸರಿನಲ್ಲಿ ವೋಟು ಕೇಳಿದವರಿಗೆ ಚಪ್ಪಲಿಯಲ್ಲಿ ಹೊಡಿರಿ ಎಂಬ ಪ್ರಮೋದ ಮುತಾಲಿಕ್ ಹೇಳಿಕೆ ವಿಚಾರವಾಗಿ ಮಾತನಾಡಿ ಮುತಾಲಿಕ್ ಅವರ ಬಗ್ಗೆ ಏನೂ ಹೇಳಲ್ಲ. ಓಬ್ಬ ಪ್ರಾಮಾಣಿಕ ಹಿಂದುಪರ ಹೋರಾಟಗಾರ. ಮೋದಿ ಹೆಸರು ಹೇಳೋಕೆ ನಮಗೆ ಹಕ್ಕಿದೆ. ಈ ರೀತಿ ಮಾತನಾಡೋದು ಯಾರಿಗೂ ಶೋಭೆ ತರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೋದಿಯನ್ನ ಗಟಾರ ಕ್ಲೀನ್ ಮಾಡಲು ರಾಜ್ಯ ಬಿಜೆಪಿಯವರು ಕರೆಸುತ್ತಾರೆ ಅಂತ ಹೆಚ್ಡಿಕೆ ವಿಚಾರವಾಗಿ ಮಾತನಾಡಿ ಅವರ ಪಾರ್ಟಿಯಲ್ಲಿ ಕಾರ್ಯಕರ್ತರು ಇಲ್ಲ. ಚುನಾವಣೆ ವರ್ಷ ಮೋದಿಜೀ ಅವರು ಬರಬೇಕಿದೆ. ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರನ್ನ ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡಲಿ
ಕಾಂಗ್ರೆಸ್ ಪಕ್ಷದಲ್ಲಿ ಜಗಳಗಳು ಪ್ರಾರಂಭವಾಗಿವೆ. ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲ, ಜಗಳಗಳಿವೆ. ಮನೆಯೊಂದು ಮೂರು ಬಾಗಿಲು, ಮುರಿದ ಮನೆಯಾಗುತ್ತದೆ. ಸಿದ್ದರಾಮಯ್ಯ ಅವರು ಹರಕೆಯ ಕುರಿಯಾಗಿದ್ದಾರೆ. ಅವರು ಹರಕೆಯ ಕುರಿಯಾಗಬಾರದು. ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ ದೇವರಾಜ್ ಅರಸು, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಬಂಗಾರಪ್ಪ ಅವರನ್ನು ಯಾವ ರೀತಿಯಲ್ಲಿ ನಡೆಸಿಕೊಂಡಿತು. ಅದೇ ರೀತಿಯಲ್ಲಿ ಸಿದ್ದರಾಮಯ್ಯ ಅವರನ್ನು ನಡೆಸಿಕೊಳ್ಳುತ್ತದೆ. ಆ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದು. ಕಾಂಗ್ರೆಸ್ ಪಕ್ಷಕ್ಕೆ ದಮ್ಮು ತಾಕತ್ತ್ ಇದ್ದರೇ, ಸಿದ್ದರಾಮಯ್ಯ ಅವರನ್ನ ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡಿ ಎಂದು ಚಾಲೆಂಜ್ ಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ