ಮುಂಬೈನಲ್ಲಿ ನಡೆಯುತ್ತಿರುವ ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸಭೆಯಲ್ಲಿ 28 ಪಕ್ಷಗಳ ಉಪಸ್ಥಿತಿ; ಕಾರ್ಯತಂತ್ರ ಬಗ್ಗೆ ಚರ್ಚೆ

INDIA Alliance Meeting: 28 ರಾಜಕೀಯ ಪಕ್ಷಗಳ ಸುಮಾರು 63 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಈ ಸಭೆಯಲ್ಲಿ ಲೋಗೋ, ಸಮನ್ವಯ ಸಮಿತಿ ಮತ್ತು ಕ್ರಿಯಾ ಯೋಜನೆ ಬಗ್ಗೆ ನಿರ್ಧಾರವಾಗಲಿದೆ. ಸಭೆಯಲ್ಲಿ ಪ್ರಮುಖ ಅಜೆಂಡಾ ಎಂದರೆ ಲೋಗೋವನ್ನು ಆಯ್ಕೆ ಮಾಡುವುದು ಮತ್ತು ಸಮನ್ವಯ ಸಮಿತಿಯನ್ನು ಸ್ಥಾಪಿಸುವುದು ಆಗಿದೆ

ಮುಂಬೈನಲ್ಲಿ ನಡೆಯುತ್ತಿರುವ ವಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಸಭೆಯಲ್ಲಿ 28 ಪಕ್ಷಗಳ ಉಪಸ್ಥಿತಿ; ಕಾರ್ಯತಂತ್ರ ಬಗ್ಗೆ ಚರ್ಚೆ
ಇಂಡಿಯಾ ಮೈತ್ರಿಕೂಟದ ಸಭೆ
ರಶ್ಮಿ ಕಲ್ಲಕಟ್ಟ

Updated on: Aug 31, 2023 | 8:58 PM

ಮುಂಬೈ ಆಗಸ್ಟ್ 31: ವಿಪಕ್ಷಗಳ ಮೈತ್ರಿಕೂಟ ಇಂಡಿಯಾದ (I.N.D.I.A)ಸಭೆ ಮುಂಬೈನಲ್ಲಿ  ನಡೆಯುತ್ತಿದೆ. ಕಾಂಗ್ರೆಸ್‌  ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಸೋನಿಯಾ ಗಾಂಧಿ ಅವರು ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ಗೆ ಆಗಮಿಸಿದ್ದು, ಇಂದು  ಮತ್ತು ನಾಳೆ ದಿನ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂಕೆ ಸ್ಟಾಲಿನ್, ಸೀತಾರಾಮ್ ಯೆಚೂರಿ, ಡಿ ರಾಜಾ, ಅಖಿಲೇಶ್ ಯಾದವ್, ರಾಮ್ ಗೋಪಾಲ್ ಯಾದವ್, ಮೆಹಬೂಬಾ ಮುಫ್ತಿ, ಮನೋಜ್ ಝಾ, ಮತ್ತು ರಾಘವ್ ಚಡ್ಡಾ ಸೇರಿದಂತೆ ಹಲವಾರು ನಾಯಕರು ಮುಂಬೈಗೆ ಆಗಮಿಸಿದ್ದಾರೆ.

28 ರಾಜಕೀಯ ಪಕ್ಷಗಳ ಸುಮಾರು 63 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಈ ಸಭೆಯಲ್ಲಿ ಲೋಗೋ, ಸಮನ್ವಯ ಸಮಿತಿ ಮತ್ತು ಕ್ರಿಯಾ ಯೋಜನೆ ಬಗ್ಗೆ ನಿರ್ಧಾರವಾಗಲಿದೆ. ಸಭೆಯಲ್ಲಿ ಪ್ರಮುಖ ಅಜೆಂಡಾ ಎಂದರೆ ಲೋಗೋವನ್ನು ಆಯ್ಕೆ ಮಾಡುವುದು ಮತ್ತು ಸಮನ್ವಯ ಸಮಿತಿಯನ್ನು ಸ್ಥಾಪಿಸುವುದು ಆಗಿದೆ. ಮೈತ್ರಿಕೂಟವು ಸಂಚಾಲಕರನ್ನು ಹೊಂದಬೇಕೇ ಅಥವಾ ಬೇಡವೇ ಮತ್ತು 2024 ರ ಚುನಾವಣೆಗೆ ಜಂಟಿ ಕ್ರಿಯಾ ವೇಳಾಪಟ್ಟಿಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ನಾವು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬಗ್ಗೆ ಕುಳಿತು ಚರ್ಚಿಸುತ್ತೇವೆ ಎಂದು ಹಿರಿಯ ನಾಯಕ ಶರದ್ ಪವಾರ್ ಗುರುವಾರ ಸುದ್ದಿಗಾರರಿಗೆ ಹೇಳಿದ್ದಾರೆ. ನಾವು ಇನ್ನೂ ಸೀಟು ಹಂಚಿಕೆಗೆ ಸಂವಾದವನ್ನು ಪ್ರಾರಂಭಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಇಂದು ಬೆಳಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರು ತಮ್ಮ ವೈಎಸ್‌ಆರ್‌ಟಿಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಊಹಾಪೋಹಗಳ ನಡುವೆಯೇ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಅವರೊಂದಿಗೆ ಚರ್ಚೆಗಳು ನಡೆದವು. ವೈಎಸ್ ರಾಜಶೇಖರ್ ರೆಡ್ಡಿ ಅವರ ಪುತ್ರಿ ತೆಲಂಗಾಣ ಜನರಿಗೆ ಅನುಕೂಲವಾಗುವಂತೆ ನಿರಂತರವಾಗಿ ಕೆಲಸ ಮಾಡಲಿದ್ದಾರೆ ಎಂದು ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಿಳಾ ಹೇಳಿದ್ದಾರೆ.

ಇದನ್ನೂ ಓದಿ: ಅದಾನಿ ಸಮೂಹದಿಂದ ನಿಯಮ ಉಲ್ಲಂಘನೆ ಬಗ್ಗೆ ಜೆಪಿಸಿ ತನಿಖೆಯಾಗಲಿ: ರಾಹುಲ್ ಗಾಂಧಿ

ಇಂಡಿಯಾ ಮೈತ್ರಿಕೂಟ ಸಭೆ: ಏನೇನಾಯ್ತು?

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮತ್ತು ತೇಜಸ್ವಿ ಯಾದವ್ ಮುಂಬೈನಲ್ಲಿ ನಡೆಯುವ ಸಭೆಗೆ ಆಗಮಿಸಿದ್ದಾರೆ.

ಮುಂಬೈಗೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಸಂಸತ್ತಿನ ವಿಶೇಷ ಅಧಿವೇಶನದ ಬಗ್ಗೆ ಕೇಳಿದಾಗ “ಅವರು ತರಲಿ, ಹೋರಾಟ ಮುಂದುವರಿಯುತ್ತದೆ” ಎಂದು  ಪ್ರತಿಕ್ರಿಯಿಸಿದ್ದಾರೆ. ಸಂಸತ್ ವಿಶೇಷ ಅಧಿವೇಶನದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ದು ಸ್ವಲ್ಪ ಗಾಬರಿಯ ಸೂಚಕವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ನಾನು ಸಂಸತ್ತಿನಲ್ಲಿ ಮಾತನಾಡಿದಾಗ ಸಂಭವಿಸಿದ ಅದೇ ರೀತಿಯ ಗಾಬರಿ ಇದು. ಭಯಭೀತರಾಗಿದ್ದರಿಂದ ಅವರು ಇದ್ದಕ್ಕಿದ್ದಂತೆ ನನ್ನ ಸಂಸತ್ ಸದಸ್ಯತ್ವವನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು. ಹಾಗಾಗಿ, ಈ ವಿಷಯಗಳು ಪ್ರಧಾನಿಯವರಿಗೆ ತುಂಬಾ ಹತ್ತಿರವಾಗಿರುವ ಕಾರಣ ಅವರು ಭಯಭೀತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ನೀವು ಅದಾನಿ ವಿಷಯವನ್ನುಹೇಳಿದಾಗಲೆಲ್ಲಾ ಪ್ರಧಾನಿ ತುಂಬಾ  ಆತಂಕಕ್ಕೊಳಗಾಗುತ್ತಾರೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us