ಕರ್ನಾಟಕದಲ್ಲಿ ನಡೆಯುತ್ತಿರುವ ಕಮಿಷನ್​​ ಲಾಬಿಗಳು ಬಹಿರಂಗ: ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಅಶ್ವತ್ತಮ್ಮ ಪತಿ ಅಂಬಿಕಾಪತಿ ಹಾಗೂ ಸಹೋದರ ಪ್ರದೀಪ್ ಮನೆ ಮೇಲೆ ನಡೆದ ಐಟಿ ದಾಳಿ ವೇಳೆ 42 ಕೋಟಿ ರೂ. ಪತ್ತೆಯಾಗಿದೆ. ಇದು ವಿಪಕ್ಷ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದ್ದು, ಕಮಿಷನ್ ಆರೋಪಗಳನ್ನು ಮಾಡಲು ಆರಂಭಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್​​ ಲಾಬಿಗಳು ಬಹಿರಂಗವಾಗಿವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿರುವ ಕಮಿಷನ್​​ ಲಾಬಿಗಳು ಬಹಿರಂಗ: ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ
Image Credit source: PTI
Edited By: Rakesh Nayak Manchi

Updated on: Oct 14, 2023 | 3:14 PM

ಬೆಂಗಳೂರು, ಅ.14: ಬೆಂಗಳೂರಿನಲ್ಲಿ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಅಶ್ವತ್ತಮ್ಮ ಪತಿ ಅಂಬಿಕಾಪತಿ ಹಾಗೂ ಸಹೋದರ ಪ್ರದೀಪ್ ಮನೆ ಮೇಲೆ ನಡೆದ ಐಟಿ ದಾಳಿ (IT Raid) ರಾಜಕೀಯ ತಿರುವು ಪಡೆದುಕೊಂಡಿದ್ದು, ಲೋಕಸಭೆ ಹೊಸ್ತಿಲಲ್ಲಿ ವಿಪಕ್ಷ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ. ಅಲ್ಲದೆ, ಈ ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿದ್ದ ಕಮಿಷನ್ ಆರೋಪವನ್ನು ಮುಂದುವರಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್​​ ಲಾಬಿಗಳು ಬಹಿರಂಗವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರು ಬಿಲ್​ಗಾಗಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಆಗ ಬಿಲ್ ಹಣ ಕೊಡದೇ ಕಮಿಷನ್ ಕುದುರಿಸುವ ಕೆಲಸ ಆಗುತ್ತಿತ್ತು. ಈಗ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ಅಪಾರ ಹಣ ಸಿಕ್ಕಿದೆ. ಈವರೆಗೂ ಗುತ್ತಿಗೆದಾರರ ಮನೆಯಲ್ಲಿ ಇಷ್ಟು ದೊಡ್ಡ ಹಣ ಸಿಕ್ಕಿರಲಿಲ್ಲ ಎಂದರು.

ಇದನ್ನೂ ಓದಿ: ಬಂಡಲ್‌ಗಳಷ್ಟು ಹಣ ಯಾರದ್ದು? ಐಟಿ ರೇಡ್‌ ಬೆನ್ನಲ್ಲೇ ಹುಟ್ಟಿಕೊಂಡ ರಾಜಕೀಯ ನಂಟು!

42 ಕೋಟಿ ಸಿಕ್ಕಿದ್ದಕ್ಕೂ ಗುತ್ತಿಗೆದಾರರ ಹಣ ಬಿಡುಗಡೆ ಆಗಿದ್ದಕ್ಕೂ ಲೆಕ್ಕ ಸರಿ ಇದೆ. ಸಿಕ್ಕಿಬಿದ್ದವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಾಂಟ್ರಾಕ್ಟರ್. ಇಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಧ್ಯಕ್ಷರು ಬಹಳ ಆತ್ಮೀಯರು. ಯಾರು ಕಮೀಷನ್ ಕೊಟ್ಟಿದ್ದಾರೋ ಅವರಿಗೆ ಹಣ ಕೊಟ್ಟಿದ್ದಾರೆ. ಬಡಪಾಯಿಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಅವರು ಕೂಡಲೇ ತಾವೇ ಮಾಡಿರುವ ಆಯೋಗದ ಮೂಲಕ ತನಿಖೆ ಮಾಡಿಸಲಿ ಎಂದು ಹೇಳಿದ ಬೊಮ್ಮಾಯಿ, ಗುತ್ತಿಗೆದಾರರು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಹಿಂದೆ ನಮ್ಮ ಸರ್ಕಾರದ ಮೇಲೆ 40 ಪರ್ಸೆಂಟ್ ಆರೋಪ ಮಾಡಿದ್ದೀರಿ. ಈಗ 50 ಪರ್ಸೆಂಟ್ ಸರ್ಕಾರದ ಜೊತೆ ಕೆಲಸ ಮಾಡುತ್ತಿದ್ದೀರಿ. ಯಾವ ಸರ್ಕಾರ ಸರಿ ಅಂತಾ ನೀವೇ ಆಲೋಚನೆ ಮಾಡಿ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us