ಪಾಕಿಸ್ತಾನಕ್ಕೆ ಬೆಂಬಲಿಸಲು ಚಿನ್ನಸ್ವಾಮಿಗೆ ಹೋಯ್ತೇ ಸಂಪುಟ ಪಟಲಾಂ: ಕಾಂಗ್ರೆಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

| Updated By: ಗಣಪತಿ ಶರ್ಮ

Updated on: Oct 21, 2023 | 1:04 PM

HD Kumaraswamy Pressmeet Details: ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್​ ಮುಖ್ಯ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಅವರ ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು ಇಲ್ಲಿವೆ.

ಪಾಕಿಸ್ತಾನಕ್ಕೆ ಬೆಂಬಲಿಸಲು ಚಿನ್ನಸ್ವಾಮಿಗೆ ಹೋಯ್ತೇ ಸಂಪುಟ ಪಟಲಾಂ: ಕಾಂಗ್ರೆಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ
ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಅಕ್ಟೋಬರ್ 21: ‘ರಾಜ್ಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ವಿದ್ಯುತ್ ಇಲ್ಲದೆ ರೈತರು ಕಂಗೆಟ್ಟಿದ್ದಾರೆ. ನೂರಾರು ಸಮಸ್ಯೆಗಳ ಬಗ್ಗೆ ಗಮನಹರಿಸುವ ಬದಲು ಕಾಂಗ್ರೆಸ್ ಸರ್ಕಾರದ ಇಡೀ ಸಚಿವ ಸಂಪುಟ ಪಟಲಾಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ – ಪಾಕಿಸ್ತಾನ ನಡುವಣ ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಲು ಹೋಗಿತ್ತು. ಇವರೇನು ಪಾಕಿಸ್ತಾನವನ್ನು ಬೆಂಬಲಿಸಲು ಹೋಗಿದ್ದರಾ’ ಎಂದು ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು. ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್​ (JDS) ಮುಖ್ಯ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, ವಿಶ್ವಕಪ್ ಪಂದ್ಯ ನೋಡಲು ಹೋಗಿದ್ದು ತಪ್ಪೆನ್ನುತ್ತಿಲ್ಲ. ಭಾರತ ತಂಡದ ಪಂದ್ಯ ಇದ್ದಿದ್ದು ಅದನ್ನು ನೋಡಲು ಹೋಗಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಆದರೆ ಅಲ್ಲಿ ಇದ್ದಿದ್ದು, ಆಸ್ಟ್ರೇಲಿಯಾ, ಪಾಕಿಸ್ತಾನ ನಡುವಣ ಪಂದ್ಯ. ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಹರಿಸುವ ಬದಲು ಅಲ್ಲಿ ಹೋಗಿ ಸಮಯ ಕಳೆಯಬೇಕಿತ್ತಾ ಎಂಬುದಷ್ಟೇ ನನ್ನ ಪ್ರಶ್ನೆ. ಇವರು ನಮಗೆ ದೇಶ ಪ್ರೇಮದ ಪಾಠ ಹೇಳುತ್ತಾರೆ ಎಂದರು.

ನಮ್ಮನ್ನು ಕೈ ಎತ್ತಿಸಿ ಬಫೂನ್​​ಗಳನ್ನಾಗಿ ಮಾಡಿ ಮನೆಗೆ ಕಳುಹಿಸಿದರು. ಈಗ ಪಾಪಾ ಅವರಿಬ್ಬರು ಕೈ ಎತ್ತಿಕೊಂಡು ಓಡಾಡ್ತಿದ್ದಾರೆ ಎಂದು ಸಿಎಂ, ಡಿಸಿಎಂ ವಿರುದ್ಧ ಕಿಡಿಕಾರಿದರು.

ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಲ್ಲ: ಹೆಚ್​ಡಿಕೆ

ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡುವುದಿಲ್ಲ. ಕಾಂಗ್ರೆಸ್​ ಸರ್ಕಾರದಲ್ಲಿ ರಾಜ್ಯದ ಪರಿಸ್ಥಿತಿ ಬಗ್ಗೆ ಜನರಿಗೆ ತಿಳಿಸುತ್ತೇನೆ. 40% ಕಮಿಷನ್ ಬಗ್ಗೆ ಡಂಗುರ ಸಾರಿ ಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಕಮಿಷನ್, ಪರ್ಸೆಂಟೇಜ್​ನಿಂದ ಸಾರ್ವಜನಿಕರಿಗೆ ಮನೋರಂಜನೆ ಸಿಗ್ತಿದೆ. ಅತ್ಯಂತ ಪ್ರಾಮಾಣಿಕ ಸತ್ಯಹರಿಶ್ಚಂದ್ರ ಸರ್ಕಾರ ಇದು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಇದನ್ನೂ ಓದಿ: ವಿದ್ಯುತ್ ಕೃತಕ ಅಭಾವ ಸೃಷ್ಟಿಸಿರುವ ಕಾಂಗ್ರೆಸ್ ಸರ್ಕಾರ: ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ನುಡಿದಂತೆ ನಡೆದಿದ್ದೇವೆ ಎಂಬ ಭಾವನೆ ಇದೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇದೆ ಹಾಗೂ ಅಂತರ್ಜಲ ಕುಸಿತವಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು. ಜತೆಗೆ, ವಿದ್ಯುತ್​​ ಕೊರತೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದರು.

ಕೇಂದ್ರಕ್ಕೆ ಪತ್ರ ಬರೆದು ಸುಮ್ಮನೆ ಕುಳಿತರ ಆಗುತ್ತದೆಯೇ: ಕುಮಾರಸ್ವಾಮಿ ಪ್ರಶ್ನೆ

ಪದೇ ಪದೇ ನಮ್ಮ ಡಿಸಿಎಂ ಡಿಕೆ ಶಿವಕುಮಾರ್ ವಿಪಕ್ಷದ ನುಡಿಮುತ್ತುಗಳು ಅಂತಾ ಹೇಳುತ್ತಿದ್ದಾರೆ. ಪ್ರತಿ ನಿತ್ಯ ಸರ್ಕಾರದ ನುಡಿಮುತ್ತುಗಳನ್ನೂ ನಾವು ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸುಮ್ಮನೆ ಕುಳಿತುಕೊಂಡರೆ ಭೇಟಿಗೆ ಅವಕಾಶ ಕೊಡ್ತಾರಾ? ಸಮಯ ಅವರು ನಿಗದಿ ಮಾಡುವುದಕ್ಕಿಂತ ನೀವು ಹೋಗಿ ಒತ್ತಡ ಹಾಕಬೇಕಲ್ವಾ? ಕ್ಯಾಬಿನೆಟ್ ರ್ಯಾಂಕ್ ಕೊಟ್ಟು ದೆಹಲಿ ಪ್ರತಿನಿಧಿ ಅವರನ್ನು ಬೇರೆ ಕೂರಿಸಿದ್ದೀರಿ. ಈ ವರ್ಷ ಇನ್ನು ಎಲ್ಲಿ ನೀವು ಅಕ್ಕಿ ಖರೀದಿ ಮಾಡುತ್ತೀರಿ ಎಂದು ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದರು.

ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Sat, 21 October 23