Loksabha Elections 2024: ಈ ಬಾರಿ ಪ್ರತಾಪ್ ಸಿಂಹಗೆ ಕೈತಪ್ಪುತ್ತಾ ಮೈಸೂರು ಲೋಕಸಭಾ ಟಿಕೆಟ್?

| Updated By: ರಮೇಶ್ ಬಿ. ಜವಳಗೇರಾ

Updated on: Nov 30, 2023 | 12:41 PM

ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಪೈಪೋಟಿ ನೀಡಲು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಈ ಬಾರಿ ಕನಿಷ್ಠ 20 ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಗುರಿ ಇಟ್ಟುಕೊಂಡಿವೆ. ಆದ್ರೆ, ಜೆಡಿಎಸ್​, ಹಾಲಿ ಬಿಜೆಪಿ ಸಂಸದ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಬಿಜೆಪಿಗೆ ಬೆಂಬಲ ನೀಡಿರುವ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ಮಂಡ್ಯ ಕ್ಷೇತ್ರ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದೆ. ಇದರ ಬೆನ್ನಲ್ಲೇ ಇದೀಗ ಮೈಸೂರು-ಕೊಡಗು ಕ್ಷೇತ್ರದ ಮೇಲೂ ಸಹ ಕಣ್ಣಿಟ್ಟಿದೆ. ಹೀಗಾಗಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಆತಂಕ ಶುರುವಾಗಿದೆ.

Loksabha Elections 2024: ಈ ಬಾರಿ ಪ್ರತಾಪ್ ಸಿಂಹಗೆ ಕೈತಪ್ಪುತ್ತಾ ಮೈಸೂರು ಲೋಕಸಭಾ ಟಿಕೆಟ್?
ಸಂಸದ ಪ್ರತಾಪ್ ಸಿಂಹ
Follow us on

ಬೆಂಗಳೂರು, (ನವೆಂಬರ್ 30): 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ (Loksabha Elections ) ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿರುವ ಪ್ರತಾಪ್ ಸಿಂಹ(Pratap Simha) ಅವರಿಗೆ ಈ ಬಾರಿಗೆ ಬಿಜೆಪಿ ಟಿಕೆಟ್​ ಸಿಗುತ್ತಾ ಎಂಬ ಪ್ರಶ್ನೆ ಉದ್ಭವಾಗಿದೆ. ಏಕೆಂದರೆ ಲೋಕ ಸಮರಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿಗೆ ಮುಂದಾಗಿದ್ದು, ದಳದಿಂದಲೂ ಮೈಸೂರು ಕ್ಷೇತ್ರಕ್ಕೆ (mysuru Loksabha constituency) ಅಭ್ಯರ್ಥಿಗಳ ಹೆಸರು ಕೇಳಿ ಬರುತ್ತಿದೆ. ಹೌದು..ಬಿಜೆಪಿಗೆ ಬೆಂಬಲ ನೀಡಿರುವ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ಮಂಡ್ಯ ಕ್ಷೇತ್ರ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದೆ. ಇದರ ಬೆನ್ನಲ್ಲೇ ಇದೀಗ ಮೈಸೂರು-ಕೊಡಗು ಕ್ಷೇತ್ರದ ಮೇಲೂ ಸಹ ಕಣ್ಣಿಟ್ಟಿದೆ. ಹೀಗಾಗಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್​ ಕೈತಪ್ಪುವ ಭೀತಿ ಶುರುವಾಗಿದೆ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್​, ಕ್ಷೇತ್ರ ಹಂಚಿಕೆ ಮಾತುಕತೆ ವೇಳೆ ಮೈಸೂರು ಲೋಕಸಭಾ ಕ್ಷೇತ್ರ ಕೇಳಲು ದಳಪತಿಗಳ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ತುಮಕೂರು ಕ್ಷೇತ್ರಗಳ ಜೊತೆಗೆ ಹೊಸದಾಗಿ ಮೈಸೂರು ಲೋಕಸಭಾ ಕ್ಷೇತ್ರ ಬೇಕೆಂದು ಬಿಜೆಪಿ ಹೈಕಮಾಂಡ್​ ಬಳಿ ಬೇಡಿಕೆ ಇಡಬೇಕೆನ್ನುವ ಚರ್ಚೆ ಜೆಡಿಎಸ್​ನಲ್ಲಿ ನಡೆದಿದೆ.

ಇದನ್ನೂ ಓದಿ: ಸೋಲಿನ ಭೀತಿಯಿಂದ ಹೆಸರಿಗೆ ಮತ್ತೊಂದು ಎಂ ಸೇರಿಸಿದ ಪ್ರತಾಪ್ ಸಿಂಹ: ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಕುಮಾರಸ್ವಾಮಿ ಸಹ ಒಲವು ಹೊಂದಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಹಿಡಿತ ಮತ್ತು ಪ್ರಾಬಲ್ಯ ಹೆಚ್ಚಿದೆ. ಇದರಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದರೆ ಗೆಲುವಿನ ಹಾದಿ ಸುಗುಮ ಎನ್ನುವ ಲೆಕ್ಕಾಚಾರ ಕುಮಾರಸ್ವಾಮಿ ಅವರದ್ದಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಹಂಚಿಕೆ ವೇಳೆ ಬಿಜೆಪಿ ಮೈಸೂರು ಕ್ಷೇತ್ರ ಬಿಟ್ಟುಕೊಟ್ಟುವಂತೆ ಪಟ್ಟು ಹಿಡಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಶೀಘ್ರದಲ್ಲೇ ಮೈಸೂರು ಭಾಗದ ಜೆಡಿಎಸ್​ ಮುಖಂಡರ ಜೊತೆ ಸಭೆ ಮಾಡಲು ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಹಾಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಆತಂಕ ಶುರುವಾಗಿದೆ. ಒಂದು ವೇಳೆ ಮೈಸೂರು ಕ್ಷೇತ್ರ ಜೆಡಿಎಸ್​ ಪಾಲಾದರೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡುವ ಸಾಧ್ಯತೆಗಳಿವೆ.

ಆದ್ರೆ, ಪ್ರತಾಪ್ ಸಿಂಹ ಮಾತ್ರ ಈ ಬಾರಿ ಟಿಕೆಟ್​ ಸಿಕ್ಕೇ ಸಿಗುತ್ತೆ ಎನ್ನುವ ಭರವಸೆಯಲ್ಲಿದ್ದು, ಕಾಂಗ್ರೆಸ್​ನಿಂದ ಯಾರೇ ಸ್ಪರ್ಧಿಸಿದರೂ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Thu, 30 November 23