ಜಂಗಲ್ ರಾಜ್ ಇರುವುದು ಬಿಹಾರದಲ್ಲಿ ಅಲ್ಲ, ದೆಹಲಿಯಲ್ಲಿ: ಬಿಜೆಪಿ ವಿರುದ್ಧ ಕಿಡಿಕಾರಿದ ತೇಜಸ್ವಿ ಯಾದವ್

ಬಿಹಾರದಲ್ಲಿ ಜಂಗಲ್ ರಾಜ್ ಮರಳಿ ಬಂದಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, ಜಂಗಲ್ ರಾಜ್ ಇರುವುದು ಬಿಹಾರದಲ್ಲಿ ಅಲ್ಲ. ಅದಿರುವುದು ನವದೆಹಲಿಯಲ್ಲಿ. ಇಲ್ಲಿ ಬಿಜೆಪಿ ನಾಯಕರು ಮಾತನಾಡಲು ಹೆದರುತ್ತಾರೆ ಎಂದಿದ್ದಾರೆ

ಜಂಗಲ್ ರಾಜ್ ಇರುವುದು ಬಿಹಾರದಲ್ಲಿ ಅಲ್ಲ, ದೆಹಲಿಯಲ್ಲಿ: ಬಿಜೆಪಿ ವಿರುದ್ಧ ಕಿಡಿಕಾರಿದ ತೇಜಸ್ವಿ ಯಾದವ್
ತೇಜಸ್ವಿ ಯಾದವ್
Edited By:

Updated on: Aug 12, 2022 | 8:54 PM

ಬಿಹಾರದ (Bihar) ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav )ಶುಕ್ರವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ನಂತರ ಗಾಂಧಿ ಮನೆಯ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿರುವುದು ಬಿಜೆಪಿಗೆ ಶಾಕ್ ನೀಡಿದೆ. ಬಿಹಾರದಲ್ಲಿ ಜಂಗಲ್ ರಾಜ್ ಮರಳಿ ಬಂದಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಯಾದವ್, ಜಂಗಲ್ ರಾಜ್ ಇರುವುದು ಬಿಹಾರದಲ್ಲಿ ಅಲ್ಲ. ಅದಿರುವುದು ನವದೆಹಲಿಯಲ್ಲಿ. ಇಲ್ಲಿ ಬಿಜೆಪಿ ನಾಯಕರು ಮಾತನಾಡಲು ಹೆದರುತ್ತಾರೆ ಎಂದಿದ್ದಾರೆ. ಬಿಹಾರದಲ್ಲಿನ ಎಲ್ಲ ಬೆಳವಣಿಗೆ ನಂತರ ನಾನು ಕಳೆದ ರಾತ್ರಿ ದೆಹಲಿಗೆ ಬಂದೆ. ನಾನು ದೆಹಲಿಯಲ್ಲಿ ಸೀತಾರಾಮ್ ಯೆಚೂರಿ, ಡಿ. ರಾಜಾ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ಎಲ್ಲರೂ ಅಭಿನಂದಿಸಿ ನಿತೀಶ್ ಕುಮಾರ್ ಸರ್ಕಾರವನ್ನು ಸ್ವಾಗತಿಸಿದ್ದಾರೆ ಎಂದು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

“ಈ ಸರ್ಕಾರ ಶಕ್ತಿಯಿಂದ ಕೆಲಸ ಮಾಡುತ್ತದೆ, ಇದು ಸಾರ್ವಜನಿಕರ ಸರ್ಕಾರ, ನಿತೀಶ್ ಅವರ ನಿರ್ಧಾರವು ಬಿಜೆಪಿಗೆ ಸಕಾಲಿಕ ಹೊಡೆತವಾಗಿದೆ. ಬಿಜೆಪಿ ಹೊರತುಪಡಿಸಿ, ಎಲ್ಲಾ ರಾಜಕೀಯ ಪಕ್ಷಗಳು ಬಿಹಾರ ವಿಧಾನಸಭೆಯಲ್ಲಿ ಒಂದೇ ಆಗಿವೆ. ಇದು ಈಗ ದೇಶಾದ್ಯಂತ ಕಾಣಿಸುತ್ತದೆ. ನಿರುದ್ಯೋಗ, ಹಣದುಬ್ಬರ ಮತ್ತು ಧಾರ್ಮಿಕ ಘರ್ಷಣೆಗಳಿಂದ ಜನರು ಬೇಸತ್ತಿದ್ದಾರೆ ಎಂದಿದ್ದಾರೆ ಬಿಹಾರ ಡಿಸಿಎಂ.

2 ಕೋಟಿ ಉದ್ಯೋಗಗಳನ್ನು ನೀಡುವ ಭರವಸೆಯನ್ನು ಈಡೇರಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಯಾದವ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.”ರಾಜ್ಯದಲ್ಲಿ 19 ಲಕ್ಷ ಉದ್ಯೋಗ ನೀಡುವ ಬಗ್ಗೆ ಬಿಜೆಪಿ ಮಾತನಾಡಿದೆ, ಅವರು 19 ಉದ್ಯೋಗಗಳನ್ನು ನೀಡಿದ್ದೀರಾ? ಅದೇ ರೀತಿ, ಅವರು ದೇಶದಲ್ಲಿ 2 ಕೋಟಿ ಉದ್ಯೋಗಗಳನ್ನು ಒದಗಿಸುವ ಬಗ್ಗೆ ಮಾತನಾಡಿದರು. ಆದರೆ ಅವರು ಕೇವಲ 80 ಲಕ್ಷ ಉದ್ಯೋಗಗಳನ್ನು ನೀಡಿದರು ಎಂದಿದ್ದಾರೆ ಯಾದವ್.

ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಷ್ಟ್ರ ರಾಜಧಾನಿಗೆ ಮೊದಲ ಬಾರಿಗೆ ದೆಹಲಿಗೆ ಯಾದವ್ ಭೇಟಿ ನೀಡಿದ್ದು, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಇಲ್ಲಿರುವುದರಿಂದ ಮತ್ತು ಇಬ್ಬರ ನಡುವಿನ ಚರ್ಚೆಯ ಸಮಯದಲ್ಲಿ ಸಚಿವರ ಹೆಸರನ್ನು ಅಂತಿಮಗೊಳಿಸುವುದು ಇವರ ಅಜೆಂಡಾದಲ್ಲಿ ಹೆಚ್ಚು ಮಹತ್ವದ್ದಾಗಿದೆ.

ಪ್ರಸ್ತುತ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಯಾದವ್ ಅವರ ಉಪ ಮುಖ್ಯಮಂತ್ರಿಯಾಗಿರುವ ಸಚಿವ ಸಂಪುಟವು ಮುಂದಿನ ವಾರದ ಆರಂಭದಲ್ಲಿ ವಿಸ್ತರಣೆಯಾಗಲಿದೆ. ಬಿಹಾರದ ಉಪಮುಖ್ಯಮಂತ್ರಿ ಗಾಂಧಿ ಅವರನ್ನು ಅವರ 10 ಜನಪಥ್ ನಿವಾಸದಲ್ಲಿ ಭೇಟಿಯಾದರು.

ಇದಕ್ಕಿಂತ ಮುನ್ನ ಮುನ್ನ ಅವರು ಇಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರನ್ನು ಭೇಟಿ ಮಾಡಿ ಬಿಹಾರದ ಬೆಳವಣಿಗೆಗಳು ಹಾಗೂ ಮುಂದಿನ ದಾರಿಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಸಭೆಯ ನಂತರ, ತೇಜಸ್ವಿ ಅವರು ಇಬ್ಬರು ಎಡ ಪಕ್ಷದ ನಾಯಕರನ್ನು ಭೇಟಿಯಾದರು. ದೇಶ ಮತ್ತು ಬಿಹಾರದಲ್ಲಿ ಪ್ರಸ್ತುತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸನ್ನಿವೇಶದ ಬಗ್ಗೆ ಸಕಾರಾತ್ಮಕ ಚರ್ಚೆ ನಡೆಸಿರುವುದಾಗಿ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌

Published On - 8:45 pm, Fri, 12 August 22