ವಿಪಕ್ಷ ನಾಯಕನ ಜೊತೆಗೆ ಹೊಸ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ: ಸಂಚಲನ ಮೂಡಿಸಿದ ಯಡಿಯೂರಪ್ಪ ಮಾತು

ವಿರೋಧ ಪಕ್ಷದ ನಾಯಕನ ಆಯ್ಕೆ ಮಾತ್ರವಲ್ಲ ಜೊತೆಗೆ ಕರ್ನಾಟಕ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ಘೋಷಣೆಯಾಗಲಿದೆ ಎಂದು ಸ್ವತಃ ಬಿಎಸ್ ಯಡಿಯೂರಪ್ಪ ಸುಳಿವು ಕೊಟ್ಟಿದ್ದಾರೆ.

ವಿಪಕ್ಷ ನಾಯಕನ ಜೊತೆಗೆ ಹೊಸ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ: ಸಂಚಲನ ಮೂಡಿಸಿದ ಯಡಿಯೂರಪ್ಪ ಮಾತು
ಬಿಎಸ್ ಯಡಿಯೂರಪ್ಪ
Edited By:

Updated on: Jul 05, 2023 | 11:18 AM

ಬೆಂಗಳೂರು: ಈಗಾಗಲೇ ಕಾಂಗ್ರೆಸ್ Congress) ಸರ್ಕಾರ ಅಧಿಕಾರಕ್ಕೆ ಒಂದು ತಿಂಗಳು ಕಳೆದಿದ್ದು, ಇದುವರೆಗೂ ಬಿಜೆಪಿ(BJP) ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಈ ಬಗ್ಗೆ ಸ್ವಪಕ್ಷದ ಕಾರ್ಯಕರ್ಯರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನು ಈ ಬಗ್ಗೆ ಕಾಂಗ್ರೆಸ್​ ಸಹ ಕುಹಕವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್​, ವಿಪಕ್ಷ ನಾಯಕನ ಆಯ್ಕೆ ಮಾಡಲು ಸಿದ್ಧತೆ ನಡೆಸಿದೆ. ಇದರ ಜೊತೆಗೆ ಹೊಸ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆಯಾಗಲಿದೆ ಎಂದು ತಿಳಿದುಬಂದಿಎ. ಈ ಬಗ್ಗೆ ಸ್ವತಃ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

ಇದನ್ನೂ ಓದಿ: 30 ವರ್ಷದ ಇತಿಹಾಸದಲ್ಲೇ ವಿಪಕ್ಷ ನಾಯಕನಿಲ್ಲದೆ ಕಲಾಪ: ಹೈಕಮಾಂಡ್ ಕೈ ಸೇರಿದ ವರದಿ, ಇಂದೇ ಘೋಷಣೆ ಸಾಧ್ಯತೆ

ಈ ಬಗ್ಗೆ ಇಂದು (ಜುಲೈ 05) ಬೆಂಗಳೂರಿನಲ್ಲಿ ಇಂದು(ಜುಲೈ 05) ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್​ವೈ, ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಯಾರು ಆಗಬೇಕು ಎಂದು ಕೇಂದ್ರದ ನಾಯಕರು ಬಂದು ಅಭಿಪ್ರಾಯ ತೆಗೆದುಕೊಂಡು ಹೋಗಿದ್ದಾರೆ. ಬಹುಶಃ ಇವತ್ತು ಅಮಿತ್ ಶಾ, ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಜೊತೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಬಹುದು ಎಂದು ನಾವೆಲ್ಲಾ ಭಾವಿಸಿದ್ದೇವೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ಸ್ಪಷ್ಟಪಡಿಸಿದರು.

ಇಂದೇ ಘೋಷಣೆ ಸಾಧ್ಯತೆ

ಬಿಜೆಪಿಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಶಾಸಕಾಂಗ ಪಕ್ಷದ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷ ಹುದ್ದೆಗಳಿಗೆ ನೇಮಕ ಮಾಡುವ ಸಂಬಂಧ ಪಕ್ಷದ ಕೇಂದ್ರ ಸಮಿತಿಯಿಂದ ವೀಕ್ಷಕರು ರಾಜ್ಯದ ಹಿರಿಯ ಮುಖಂಡರು ಮತ್ತು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ವಾಪಸಾಗಿದ್ದಾರೆ. ವೀಕ್ಷಕರಾಗಿ ಬಂದಿದ್ದ ವಿನೋದ್‌ ತಾವಡೆ ಮತ್ತು ಮನ್ಸುಖ್‌ ಮಾಂಡವಿಯ ಅವರು ಮಂಗಳವಾರ (ಜುಲೈ 04) ರಾತ್ರಿವರೆಗೆ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ವಾಪಸ್ ಆಗಿದ್ದು, ಇಂದು (ಜುಲೈ 05) ಹೈಕಮಾಂಡ್​ಗೆ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ ಸಂಗ್ರಹ ವರದಿಯನ್ನು ಸಲ್ಲಿಸಲಿದ್ದಾರೆ.

ಈಗಾಗಲೇ ತುಂಬ ತಡವಾಗಿದ್ದರಿಂದ ಹೈಕಮಾಂಡ್ ಸಹ ವೀಕ್ಷಕರ ವರದಿ ಆಧರಿಸಿ ಇಂದೇ ಕರ್ನಾಟಕ​ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಮಾಡುವ ಸಾಧ್ಯತೆಗಳಿವೆ.

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಹೆಸರು ಬಲವಾಗಿ ಕೇಳಿಬರುತ್ತಿದೆ. ರಾಜ್ಯಾಧ್ಯಕ್ಷ ಹುದ್ದೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೆಸರು ಕೇಳಿಬಂದಿದ್ದು, ಹೈಮಾಂಡ್​ ಯಾರಿಗೆ ಮಣೆ ಹಾಕುತ್ತೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:10 am, Wed, 5 July 23

Kiran Haniyadka
Follow Us