ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿಟಿ ರವಿ: ಪಾದಯಾತ್ರೆಯಲ್ಲಿ ಘೋಷಣೆ

|

Updated on: Mar 26, 2023 | 10:23 AM

ಮುಂದಿನ ಸಿಎಂ ನಾನೇ ಎಂದು ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಹೇಳಿಕೆ ನೀಡಿದ್ದರು. ಈ ನಡುವೆ ಕರ್ನಾಟಕ ಮುಂದಿನ ಮುಖ್ಯಮಂತ್ರಿ ಸಿಟಿ ರವಿ ಎಂದು ಅಭಿಮಾನಿಗಳು ಘೋಷಣೆ ಕೂಗಲು ಆರಂಭಿಸಿದ್ದಾರೆ.

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿಟಿ ರವಿ: ಪಾದಯಾತ್ರೆಯಲ್ಲಿ ಘೋಷಣೆ
ಸಿಟಿ ರವಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲೆಂದು ಅಭಿಮಾನಿಗಳ ಪಾದಯಾತ್ರೆ
Follow us on

ಚಿಕ್ಕಮಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ಮಾಸ್​ ಲೀಡರ್​ಗಳನ್ನು ಮುಂದಿನ ಮುಖ್ಯಮಂತ್ರಿ ಎಂದು ಅಭಿಮಾನಿಗಳು ಘೋಷಣೆ ಮಾಡುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳು ಹಲವರಿದ್ದರೂ ಸಿದ್ದರಾಮಯ್ಯ (Siddaramaiah) ಅವರು ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುಂದಿನ ಸಿಎಂ ನೀವೇ ಎಂದು ಘೋಷಣೆ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಮುಂದಿನ ಸಿಎಂ ನಾನೇ ಎಂದು ಸ್ವತಃ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಈ ನಡುವೆ ಕರ್ನಾಟಕ ಮುಂದಿನ ಮುಖ್ಯಮಂತ್ರಿ ಸಿಟಿ ರವಿ (CT Ravi) ಎಂದು ಅಭಿಮಾನಿಗಳು ಘೋಷಣೆ ಕೂಗಲು ಆರಂಭಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕರ್ನಾಟಕದ ಮುಖ್ಯಮಂತ್ರಿ ಆಗಲೆಂದು ಅಭಿಮಾನಿಗಳು ಚಿಕ್ಕಮಗಳೂರು ನಗರದಿಂದ ಕುಮಾರಗಿರಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿದ್ದಾರೆ. ಮಲ್ಲೇನಹಳ್ಳಿ ಸಮೀಪವಿರುವ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯ ಸ್ವಾಮಿಗೆ ಬೆಳ್ಳಿಯ ಬಾಣ ಅರ್ಪಿಸಿದ ಅಭಿಮಾನಿಗಳು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿಟಿ ರವಿ ಅವರು ಆಗಲಿ ಎಂದು ಬೇಡಿಕೊಂಡಿದ್ದಾರೆ. ಸುಮಾರು 300ಕ್ಕೂ ಅಧಿಕ ಅಭಿಮಾನಿಗಳು ಕೈಗೊಂಡ ಈ ಪಾದಯಾತ್ರೆಯಲ್ಲಿ ಮುಂದಿನ ಸಿಎಂ ಸಿ.ಟಿ ರವಿ ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ರದ್ದು: ಕೋರ್ಟ್​ಗೆ ಕಾಂಗ್ರೆಸ್ ಯಾಕೆ ಹೋಗಿಲ್ಲ? ಸಿಟಿ ರವಿ ಪ್ರಶ್ನೆ

ಕಾರ್ಯಕರ್ತರು ಉತ್ಸಾಹದಿಂದ ಮುಂದಿನ ಸಿಎಂ ಸಿಟಿ ರವಿ ಎಂದು ಕೂಗಿದ್ದಾರೆ. ನಾವು ಕಾರ್ಯಕರ್ತರ ಉತ್ಸಾಹವನ್ನು ಎಂದಿಗೂ ಕುಗ್ಗಿಸಲು ಸಾಧ್ಯವಿಲ್ಲ. ಅವರು ಸ್ವಇಚ್ಛೆಯಿಂದ ಕೂಗಿದ್ದಾರೆ. ಅದರಲ್ಲೇನು ತಪ್ಪಿಲ್ಲ. 24 ಗಂಟೆಗಳ ಕಾಲ ಜನಸೇವೆ ಮಾಡುವ ಜನನಾಯಕ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಸಿಟಿ ರವಿ ಬೆಂಬಲಿಗ ಶ್ರೀನಿವಾಸ್ ಹೇಳಿದ್ದಾರೆ.

ಸಿಟಿ ರವಿ ಸಿಎಂ ಆಗಲಿದ್ದಾರಾ?

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಅವರು ತೆಗೆದುಕೊಂಡ ಖಡಕ್ ನಿರ್ಧಾರಗಳು ಇತರೆ ರಾಜ್ಯಗಳ ಜನರು ಅವರತಂಹ ಮುಖ್ಯಮಂತ್ರಿ ನಮ್ಮ ರಾಜ್ಯಕ್ಕೆ ಬೇಕೆನ್ನಲು ಆರಂಭಿಸಿದ್ದಾರೆ. ಈ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ. ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಯೋಗಿ ಮಾಡೆಲ್ ಸರ್ಕಾರ ರಚನೆಗೆ ಕಾಯುತ್ತಿದ್ದಾರೆ. ಅಲ್ಲದೆ, ಕರ್ನಾಟಕಕ್ಕೆ ಯುವ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಹಾಗಿದ್ದರೆ ಹೈಕಾಂಡ್ ಮಟ್ಟದಲ್ಲಿ ಸ್ಥಾನ ಪಡೆದುಕೊಂಡಿರುವ ಸಿಟಿ ರವಿ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರಾ? ಕಾದುನೋಡಬೇಕಿದೆ.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:15 am, Sun, 26 March 23