ರಾಷ್ಟ್ರೀಯ ಭದ್ರತೆಗೆ ಆದ್ಯತೆ; ಕೊಲ್ಕತ್ತಾ ವಿಮಾನ ನಿಲ್ದಾಣದ ಮಸೀದಿಗೆ ಪ್ರವೇಶ ನಿಷೇಧಕ್ಕೆ ಸಿಎಂ ಸುವೇಂದು ಅಧಿಕಾರಿ ಸಮರ್ಥನೆ
ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಮಸೀದಿಗೆ ಸಾಮೂಹಿಕ ಪ್ರಾರ್ಥನೆಗಾಗಿ ನೀಡಲಾಗುತ್ತಿದ್ದ ಎಂಟ್ರಿ ಪಾಸ್ಗಳನ್ನು ರದ್ದುಗೊಳಿಸಿರುವ ವಿವಾದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಮ್ಮ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. "ಯಾವುದೇ ವಿಷಯಕ್ಕಿಂತಲೂ ರಾಷ್ಟ್ರೀಯ ಭದ್ರತೆಯೇ ಮೊದಲು" ಎಂದು ಅವರು ಘೋಷಿಸಿದ್ದಾರೆ. ಈ ನಿರ್ಧಾರ ತೀವ್ರ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಪೂರ್ತಿ ವಿವರ ಇಲ್ಲಿದೆ...

ಮುಖ್ಯಾಂಶಗಳು
- ಕೊಲ್ಕತ್ತಾ ವಿಮಾನ ನಿಲ್ದಾಣದ ಮಸೀದಿಗೆ ಎಂಟ್ರಿ ನಿಷೇಧ
- ಪಶ್ಚಿಮ ಬಂಗಾಳದಲ್ಲಿ ಹೊಸ ವಿವಾದ
- ಸರ್ಕಾರ ನೀಡಿದ ಸ್ಪಷ್ಟನೆಯೇನು?
ಕೊಲ್ಕತ್ತಾ, ಜುಲೈ 13: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಬಿಕ್ಕಟ್ಟು ಎದುರಾಗಿದೆ. ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಮಸೀದಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವ ಕ್ರಮ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆದರೆ, ಸರ್ಕಾರದ ಈ ನಿರ್ಧಾರವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಏನಿದು ಮಸೀದಿ ವಿವಾದ?:
ಕೊಲ್ಕತ್ತಾ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಬರುವ ಮಸೀದಿಗೆ ಹೊರಗಿನ ಸಾರ್ವಜನಿಕರು ಮುಕ್ತವಾಗಿ ಪ್ರವೇಶಿಸುವುದನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಇತ್ತೀಚೆಗೆ ನಿರ್ಬಂಧಿಸಿದ್ದಾರೆ. ವಿಮಾನ ನಿಲ್ದಾಣದ ಒಳಭಾಗದ ಭದ್ರತೆಗೆ ಯಾವುದೇ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮ ತೀವ್ರ ವಿವಾದಕ್ಕೆ ಕಾರಣವಾಗಿದೆ.
ವಿಮಾನ ನಿಲ್ದಾಣದ ರನ್ವೇ ಆವರಣದೊಳಗೆ ಸುಮಾರು 136 ವರ್ಷಗಳಷ್ಟು ಹಳೆಯದಾದ ಗೌರಿಪುರ ಜಮಾ ಮಸೀದಿ (ಇದನ್ನು ‘ಬಾಕ್ರಾ ಮಸೀದಿ’ ಎಂದೂ ಕರೆಯಲಾಗುತ್ತದೆ) ಇದೆ. ಇದು ವಿಮಾನ ನಿಲ್ದಾಣದ ಎರಡನೇ ರನ್ವೇಗೆ ಅತ್ಯಂತ ಹತ್ತಿರದಲ್ಲಿದೆ. ಮಸೀದಿಯ ನವೀಕರಣದ ಕಾರಣ ನೀಡಿ ಶನಿವಾರದಿಂದ ಅಲ್ಲಿ ನಮಾಜ್ ಮಾಡುವುದನ್ನು ವಿಮಾನ ನಿಲ್ದಾಣ ಪ್ರಾಧಿಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಾಗೇ, ಹೊರಗಿನವರಿಗೆ ನೀಡಲಾಗುತ್ತಿದ್ದ ಪ್ರವೇಶ ಪಾಸ್ಗಳನ್ನು ರದ್ದುಗೊಳಿಸಿದೆ. ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನನಗಿಂತ ಕೆಟ್ಟವರು ಯಾರೂ ಇರುವುದಿಲ್ಲ; ಬಂಗಾಳದಲ್ಲಿ ಹಿಂಸಾಚಾರ ನಡೆಸುವವರಿಗೆ ಸಿಎಂ ಸುವೇಂದು ಅಧಿಕಾರಿ ಎಚ್ಚರಿಕೆ
ವಿಮಾನ ನಿಲ್ದಾಣದ ಮುಖ್ಯ ರನ್ವೇ ದುರಸ್ತಿಗಾಗಿ ಮುಚ್ಚಿದಾಗ, ಈ ಮಸೀದಿಯ ಕಾರಣದಿಂದಾಗಿ ದೊಡ್ಡ ವಿಮಾನಗಳು ಎರಡನೇ ರನ್ವೇನಲ್ಲಿ ಇಳಿಯಲು ಮತ್ತು ಟೇಕ್-ಆಫ್ ಆಗಲು ತೊಂದರೆಯಾಗುತ್ತಿತ್ತು. ರನ್ವೇ ವಿಸ್ತರಣೆ ಕಾರ್ಯ ಮತ್ತು ಅತ್ಯಾಧುನಿಕ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಅಳವಡಿಕೆಯೂ ಇದರಿಂದಾಗಿ ವಿಳಂಬವಾಗಿತ್ತು ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಸುವೇಂದು ಅಧಿಕಾರಿ ಹೇಳೋದೇನು?:
ಸರ್ಕಾರದ ಈ ನಿರ್ಧಾರದ ಕುರಿತು ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಯಾವುದೇ ದೇಶದಲ್ಲಿ ಎಲ್ಲದಕ್ಕಿಂತಲೂ ರಾಷ್ಟ್ರೀಯ ಭದ್ರತೆಯೇ ಮೊದಲ ಆದ್ಯತೆಯಾಗಿರಬೇಕು. ವಿಮಾನ ನಿಲ್ದಾಣಗಳು ದೇಶದ ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದು, ಅಲ್ಲಿಗೆ ಯಾರು ಬರುತ್ತಾರೆ ಮತ್ತು ಹೋಗುತ್ತಾರೆ ಎಂಬುದರ ಮೇಲೆ ಹೆಚ್ಚು ನಿಗಾ ಇಡುವುದು ಅತ್ಯಗತ್ಯ. ವಿಮಾನ ನಿಲ್ದಾಣದ ಅಧಿಕಾರಿಗಳು ತೆಗೆದುಕೊಂಡಿರುವ ಈ ತಾಂತ್ರಿಕ ಮತ್ತು ಭದ್ರತಾ ನಿರ್ಧಾರಕ್ಕೆ ಯಾವುದೇ ಧರ್ಮ ಅಥವಾ ರಾಜಕೀಯದ ಬಣ್ಣ ಬಳಿಯಬಾರದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಸ್ವಚ್ಛತಾ ಕ್ರಾಂತಿ; ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ, ಉಗುಳಿದರೆ ಸೆ. 1ರಿಂದ ಭಾರಿ ದಂಡ!
“ಕೊಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಜಾಗ ಅತ್ಯಂತ ಸೂಕ್ಷ್ಮವಾಗಿದೆ. ಏಕೆಂದರೆ ಚೀನಾ ಮತ್ತು ಬಾಂಗ್ಲಾದೇಶ ಎರಡೂ ದೇಶಗಳು ಇಲ್ಲಿಗೆ ಹತ್ತಿರದಲ್ಲಿವೆ. ಆದ್ದರಿಂದ ಹೊರಗಿನವರಿಗಾಗಿ ವಿಮಾನ ನಿಲ್ದಾಣದ ಗೇಟ್ಗಳನ್ನು ಮುಕ್ತವಾಗಿಡಲು ಸಾಧ್ಯವಿಲ್ಲ. ನಾವು ಯಾರನ್ನೂ ಧಾರ್ಮಿಕ ಆಚರಣೆಗಳಿಂದ ತಡೆದಿಲ್ಲ. ಕಾನೂನನ್ನು ಗೌರವಿಸಿ ಉತ್ತಮ ನಾಗರಿಕರಾಗಿ ನಡೆದುಕೊಳ್ಳಿ. ಧರ್ಮವನ್ನು ವೈಯಕ್ತಿಕ ವಿಷಯವಾಗಿ ಆಚರಿಸಿ, ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬೇಡಿ. ಆಗ ಎಲ್ಲವೂ ಸುಗಮವಾಗಿ ನಡೆಯುತ್ತದೆ” ಎಂದು ಸಿಎಂ ಹೇಳಿದ್ದಾರೆ.
ವಿರೋಧ ಪಕ್ಷಗಳ ಆಕ್ಷೇಪ:
ಮತ್ತೊಂದೆಡೆ, ಮಸೀದಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿರುವುದನ್ನು ತೃಣಮೂಲ ಕಾಂಗ್ರೆಸ್ (TMC) ಸೇರಿದಂತೆ ಕೆಲವು ಸ್ಥಳೀಯ ಸಂಘಟನೆಗಳು ಮತ್ತು ವಿರೋಧ ಪಕ್ಷದ ನಾಯಕರು ವಿರೋಧಿಸಿದ್ದಾರೆ. ಇದು ಹಲವು ವರ್ಷಗಳಿಂದ ಇದ್ದ ಪದ್ಧತಿಯಾಗಿದ್ದು, ಇದ್ದಕ್ಕಿದ್ದಂತೆ ನಿಷೇಧ ಹೇರಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




