Karnataka polls: ರಾಮನಗರದಿಂದ ಡಿಕೆ ಸುರೇಶ್ ಸ್ಪರ್ಧೆ; ಮಹತ್ವದ ಸುಳಿವು ಕೊಟ್ಟ ಡಿಕೆ ಶಿವಕುಮಾರ್

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ನಿಂದ ರಾಮನಗರದಲ್ಲಿ ಸಂಸದ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್​​ ಮಟ್ಟದಲ್ಲಿಯೂ ಚರ್ಚೆ ಆಗಿರುವುದು ನಿಜ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ರಾಮನಗರ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka polls) ಕಾಂಗ್ರೆಸ್​​ನಿಂದ (Congress) ರಾಮನಗರದಲ್ಲಿ (Ramanagara) ಸಂಸದ ಡಿಕೆ ಸುರೇಶ್ (DK Suresh) ಅವರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್​​ ಮಟ್ಟದಲ್ಲಿಯೂ ಚರ್ಚೆ ಆಗಿರುವುದು ನಿಜ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಡಿಕೆ ಸುರೇಶ್ ಸ್ಪರ್ಧಿಸಬೇಕು ಎಂದು ಬಹಳ ದಿನಗಳಿಂದ ಈ ಭಾಗದ ನಮ್ಮ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಈ‌ ಕ್ಷೇತ್ರದಲ್ಲಿ ಒಂದು ಇತಿಹಾಸ ಇದೆ. ಪಕ್ಷ ಸೂಚಿಸಿದ ಮೇಲೆ ಏನೂ ಮಾಡಲಾಗದು. ನಾನು ಸಚಿವನಾಗಿದ್ದವನು ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿರಲಿಲ್ಲವೇ? ರಾಜಕೀಯದಲ್ಲಿ ಕೆಲವು ಸಂದರ್ಭಗಳಲ್ಲಿ ಅನಿವಾರ್ಯ ಎದುರಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಾಮನಗರದ ಸುಗ್ಗನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಡಿಕೆ ಸುರೇಶ್ ಯಾವತ್ತೂ ವೇದಿಕೆ ಏರಿರಲಿಲ್ಲ, ಮೈಕ್ ಹಿಡಿದಿರಲಿಲ್ಲ. ಹಿಂದೆ ಪಕ್ಷದ ಹಿರಿಯ ನಾಯಕಿ ಸೋನಿಯಾಗಾಂಧಿ ಸಂಸತ್ತಿಗೆ ಅವರ ಹೆಸರು ಘೋಷಣೆ ಮಾಡಿದ್ದರು. ಜನ ಏನು ಹೇಳುತ್ತಾರೆ ಅನ್ನುವುದನ್ನೂ ನಾವು ಕೇಳಬೇಕಲ್ಲವೇ? ನಾವು ಏನಂದುಕೊಳ್ಳುತ್ತೇವೆಯೋ ಅದು ರಾಜಕೀಯ ಅಲ್ಲ. ಯಾವುದೂ ನಮ್ಮ ಕೈಯಲ್ಲಿಲ್ಲ. ಯಾವ ಸಂದರ್ಭದಲ್ಲಿ ಏನು ಆಗಬೇಕೋ ಅದು ಆಗುತ್ತದೆ‌ ಎಂದು ಹೇಳಿದ್ದಾರೆ.

ಇದನ್ನೂ ಓದಿ: Toll Rates: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ತಾತ್ಕಾಲಿಕ ಟೋಲ್ ದರಗಳನ್ನು ಇಲ್ಲಿ ಪರಿಶೀಲಿಸಿ

ಧ್ರುವನಾರಾಯಣ್ ಪುತ್ರ ದರ್ಶನ್​ಗೆ ಟಿಕೇಟ್ ನೀಡುವ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಧ್ರುವನಾರಾಯಣ್ ಅಂತಿಮ ದರ್ಶನ ಪಡೆಯಲು ಖುದ್ದು ಮಲ್ಲಿಕಾರ್ಜುನ ಖರ್ಗೆ ಬಂದಿದ್ದರು. ಅಭಿಮಾನಿಗಳ ಆಕ್ರಂದನ ನೋಡಿದ್ದರು. ಅವರು ಹಾಗೂ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಧ್ರುವನಾರಾಯಣ ಅವರಿಗೆ ಪರ್ಯಾಯ ನಾಯಕ ಇಲ್ಲ. ಅವರು ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದರು. ಅವರು ನನ್ನ ತಮ್ಮನ ಹಾಗೆ ಎಂದು ಡಿಕೆಶಿ ಹೇಳಿದ್ದಾರೆ.

ಮೈಸೂರು ಬೆಂಗಳೂರು ಎಕ್ಸ್​​ಪ್ರೆಸ್​ ವೇ ಟೋಲ್​ಗೆ ವಿರೋಧ

ಮೈಸೂರು ಬೆಂಗಳೂರು ಎಕ್ಸ್​​ಪ್ರೆಸ್​ ವೇಯಲ್ಲಿ ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿದ ಡಿಕೆಶಿ, ಸರ್ವೀಸ್ ರಸ್ತೆ ನೀಡದೇ ಟೋಲ್ ವಸೂಲಿ ಮಾಡಬಾರದು. ಸರ್ಕಾರ ಜನಸಾಮಾನ್ಯರ ಪಿಕ್ ಪಾಕೆಟ್ ಮಾಡುತ್ತಿದೆ. ಈಗ ನಾನೂ ಕೂಡಾ ಟೋಲ್ ಪಾವತಿಸಿ ಬಂದಿದ್ದೇನೆ. ನನ್ನ ಕಾರಿನಲ್ಲಿ ಫಾಸ್ಟ್ ಟ್ಯಾಗ್ ಇರಲಿಲ್ಲ. 500ರೂ‌ ಕೊಟ್ಟಿದ್ದಕ್ಕೆ 230 ರೂ. ವಾಪಸ್ ಕೊಟ್ಟಿದ್ದಾರೆ. ಫಾಸ್ಟ್ ಟ್ಯಾಗ್ ಇಲ್ಲ ಎಂದು ದುಪ್ಪಟ್ಟು ಹಣ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Tue, 14 March 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us