AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಸರಿ ಪಡೆಗೆ ಮತ್ತೊಂದು ಶಾಕ್​: ಕಾಂಗ್ರೆಸ್​ನತ್ತ ಮುಖ ಮಾಡಿದ ಬಿಜೆಪಿ ಹಾಲಿ ಶಾಸಕ, ಮಾತುಕತೆ ಫೈನಲ್​

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಜೋರಾಗಿದೆ. ಈಗಾಗಲೇ ಹಲವು ಬಿಜೆಪಿ ನಾಯಕರುಗಳು ಪಕ್ಷ ತೊರೆದು ಕಾಂಗ್ರೆಸ್​ ಸೇರಿದ್ದಾರೆ. ಇದೀಗ ಹಾಲಿ ಬಿಜೆಪಿ ಶಾಸಕ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ.

ಕೇಸರಿ ಪಡೆಗೆ ಮತ್ತೊಂದು ಶಾಕ್​: ಕಾಂಗ್ರೆಸ್​ನತ್ತ ಮುಖ ಮಾಡಿದ ಬಿಜೆಪಿ ಹಾಲಿ ಶಾಸಕ, ಮಾತುಕತೆ ಫೈನಲ್​
ರಮೇಶ್ ಬಿ. ಜವಳಗೇರಾ
|

Updated on:Mar 28, 2023 | 9:01 AM

Share

ಬೆಂಗಳೂರು:  ಹಿರಿಯ ರಾಜಕಾರಣಿ, ಕೂಡ್ಲಗಿ ಬಿಜೆಪಿ ಶಾಸಕ ಎನ್‌.ವೈ. ಗೋಪಾಲಕೃಷ್ಣ (ny gopalakrishna) ಅವರು ಮರಳಿ ಕಾಂಗ್ರೆಸ್‌ (C0ngress) ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ. ಈ ಸುದ್ದಿ ಹಲವು ದಿನಗಳಿಂದ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ(ಮಾರ್ಚ್ 27) ರಾತ್ರಿ ಕಾಂಗ್ರೆಸ್ ನಾಯಕರನ್ನು ಖುದ್ದು ಭೇಟಿ ಮಾಡಿ ಜೊತೆ ಚರ್ಚಿಸಿದ್ದಾರೆ. ರಾಜಾನುಕುಂಟೆ ಸಮೀಪದ ರೆಸಾರ್ಟ್​ನಲ್ಲಿ ನಡೆಯುತ್ತಿದ್ದ ಸ್ಕ್ರೀನಿಂಗ್ ಕಮಿಟಿ ಸಭೆ ವೇಳೆ ಗೋಪಾಲಕೃಷ್ಣ ತೆರಳಿ ಉಸ್ತುವಾರಿ ಸುರ್ಜೇವಾಲಾ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಜೊತೆ ಚರ್ಚಿಸಿದ್ದಾರೆ ಎಂದು ಖಚಿತ ಮಾಹಿತಿಯಿಂದ ತಿಳಿದುಬಂದಿದೆ. ಗೋಪಾಲಕೃಷ್ಣ ಕಾಂಗ್ರೆಸ್​ ಸೇರ್ಪಡೆ ಬಹುತೇಕೆ ಖಚಿತವಾಗಿದ್ದು, ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ತವರು ಕ್ಷೇತ್ರದ ಪಂಚಮಸಾಲಿ ಮುಖಂಡ ಮರಳಿ ಕಾಂಗ್ರೆಸ್​ಗೆ: ಬಿಜೆಪಿಗೆ ಆಘಾತ ನೀಡಿದ ಮಂಜುನಾಥ​ ಕುನ್ನೂರು

ಎಐಸಿಸಿ ಪರಿಶೀಲನಾ ಸಮಿತಿ ಸಭೆ ವೇಳೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುರ್ಮಾ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ಈ ವೇಳೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನೂ ಚರ್ಚಿಸಿದ್ದಾರೆ.  ಗೋಪಾಲ ಕೃಷ್ಣ ಅವರಿಗೆ ಕಾಂಗ್ರೆಸ್​ ನಾಯಕರಿಂದ ಟಿಕೆಟ್ ಭರವಸೆ ಸಿಕ್ಕಿದೆ ಎಂದು ತಿಳಿದು ಬಂದಿದೆ. ಸದ್ಯದಲ್ಲೇ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ಕಾಂಗ್ರೆಸ್‌ ಸೇರ್ಪಡೆ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೆರೆಯ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದವರಾಗಿರುವ ಎನ್‌.ವೈ.ಗೋಪಾಲಕೃಷ್ಣ , ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಎನ್‌.ವೈ.ಹನುಮಂತಪ್ಪ ಅವರ ಸೋದರರು. ನಾಲ್ಕು ಬಾರಿ ಶಾಸನಸಭೆಗೆ ಪ್ರವೇಶ ಮಾಡಿದ್ದರೂ ಕಳೆದ ಬಾರಿ ಅಂದ್ರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿತ್ತು. ಇದರಿಂದ ಬೇಸರಗೊಂಡಿದ್ದ ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರು, ತಮ್ಮ 40 ವರ್ಷದ ಕಾಂಗ್ರೆಸ್‌ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ಅಲ್ಲದೇ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ತಮ್ಮ ಶಕ್ತಿ ಏನೆಂದು ತೋರಿಸಿದ್ದರು.

ಕೂಡ್ಲಿಗಿಯ ನಾಗೇಂದ್ರ ಬಾಬು ಅವರು ಒಂದು ಕಾಲದಲ್ಲಿ ಶ್ರೀರಾಮುಲು ಅವರ ಪರಮಾಪ್ತರು. ಆದರೆ, ಅವರು ಶ್ರೀ ರಾಮುಲು ಸೇರಿ ರೆಡ್ಡಿ ಬಳಗ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಇನ್ನು ಎನ್‌.ವೈ.ಗೋಪಾಲಕೃಷ್ಣ ಮಾತ್ರ ಶ್ರೀರಾಮುಲು ಸೇರಿ ರೆಡ್ಡಿ ಬಳಗಕ್ಕೆ ಇದುವರೆಗೂ ಪರಮ ಎದುರಾಳಿಯಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಎನ್‌.ವೈ.ಗೋಪಾಲಕೃಷ್ಣ, ಲೋಕಸಭೆ ಚುನಾವಣೆಯಲ್ಲಿ ಅವರ ಸೋದರ ಎನ್‌.ವೈ.ಹನುಮಂತಪ್ಪ ಅವರೇ ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಅವರ ಬಳಗದ ವಿರುದ್ಧ ಚುನಾವಣೆಯಲ್ಲಿ ತೊಡೆತಟ್ಟಿದ್ದರು. ಆದ್ರೆ,  ಟಿಕೆಟ್‌ ಕೈತಪ್ಪಿದ್ದೇ ತಡ ಎನ್‌.ವೈ.ಗೋಪಾಲಕೃಷ್ಣ ಅವರನ್ನು ಶ್ರೀರಾಮುಲು ಬೆಂಗಳೂರಿಗೆ ಕರೆದೊಯ್ದು ಅಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸದಲ್ಲಿ ತರಾತುರಿಯಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಇದೀಗ ಎನ್‌.ವೈ.ಗೋಪಾಲಕೃಷ್ಣ ಅವರು ಮರಳಿ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:49 am, Tue, 28 March 23