AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್‌ಗೆ ಯಾವೆಲ್ಲ ಕ್ಷೇತ್ರ ಎಂಬುದನ್ನು ಕೊನೆಗೂ ಬಹಿರಂಗಪಡಿಸಿದ ಬಿಜೆಪಿ: ಇಲ್ಲಿದೆ ವಿವರ

ಕೊನೆಗೂ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಯಾವೆಲ್ಲ ಕ್ಷೇತ್ರಗಳು ದೊರೆಯಲಿವೆ ಎಂಬುದನ್ನು ಬಿಜೆಪಿ ಅಂತಿಮಗೊಳಿಸಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಬಹಿರಂಗಪಡಿಸಿದ್ದಾರೆ. ಆದರೆ, ಮಂಡ್ಯ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗಿರುವುದರಿಂದ ಸಂಸದ ಸುಮಲತಾ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ಜೆಡಿಎಸ್‌ಗೆ ಯಾವೆಲ್ಲ ಕ್ಷೇತ್ರ ಎಂಬುದನ್ನು ಕೊನೆಗೂ ಬಹಿರಂಗಪಡಿಸಿದ ಬಿಜೆಪಿ: ಇಲ್ಲಿದೆ ವಿವರ
ಜೆಡಿಎಸ್‌ಗೆ ಯಾವೆಲ್ಲ ಕ್ಷೇತ್ರ ಎಂಬುದನ್ನು ಕೊನೆಗೂ ಬಹಿರಂಗಪಡಿಸಿದ ಬಿಜೆಪಿ
Ganapathi Sharma
|

Updated on: Mar 23, 2024 | 4:53 PM

Share

ಬೆಂಗಳೂರು, ಮಾರ್ಚ್​ 23: ಕೇವಲ 2 ಸೀಟಿಗಾಗಿ ನಾವು ಇಷ್ಟೆಲ್ಲ ಮಾಡಬೇಕಾ ಎಂದು ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಲೋಕಸಭೆ ಚುನಾವಣೆಗೆ (Lok Sabha Elections) ಬಿಜೆಪಿ ಜತೆಗಿನ ಮೈತ್ರಿ (BJP JDS Alliance) ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಧಾನಿ ಮೋದಿ ನೇತೃತ್ವದಲ್ಲಿ ಮಾಡುವ ಸಮಾವೇಶಕ್ಕೆ ಆಯಾ ಪ್ರದೇಶದ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಟಿಕೆಟ್ ಹಂಚಿಕೆ ವೇಳೆಯೂ ಜೆಡಿಎಸ್ ಜತೆ ಸಮಾಲೋಚನೆ ನಡೆಸುತ್ತಿಲ್ಲ ಎಂದು ಜೆಡಿಎಸ್ ನಾಯಕರೂ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಿಟ್ಟಿಗೆ ಇದೀಗ ಮದ್ದರೆಯಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಬಹಿರಂಗವಾಗಿಯೇ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ ಬಿಟ್ಟುಕೊಟ್ಟಿರುವುದಾಗಿ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ.

ಜೆಡಿಎಸ್ ಕಾರ್ಯಕರ್ತರ ಜೊತೆಗೂಡಿ ಕೆಲಸ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ರಾಧಾ ಮೋಹನ್ ದಾಸ್ ಕರೆ ನೀಡಿದ್ದಾರೆ. ಅಲ್ಲಿಗೆ, ಬಿಜೆಪಿ ಜೆಡಿಎಸ್ ನಡುವಿನ ಸೀಟು ಹಂಚಿಕೆ ಗುದ್ದಾಟಕ್ಕೆ ತೆರೆಬಿದ್ದಂತಾಗಿದೆ. ಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡರು ಸಹ ದೆಹಲಿಗೆ ತೆರಳಿದ್ದು ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಲಿದ್ದಾರೆ. ಆದರೆ, ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ಸುಮಲತಾ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮಂಡ್ಯ ಜೆಡಿಎಸ್ ಪಾಲಾದ್ರೆ ಸುಮಲತಾ ನಡೆ ಏನು?

ಮಂಡ್ಯ ಕ್ಷೇತ್ರದ ಟಿಕೆಟ್ ಇನ್ನೂ ಅಂತಿಮ ಆಗಿಲ್ಲ ಎಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಅಮಿತ್ ಶಾ ಭೇಟಿ ಬಳಿಕ ಸುಮಲತಾ ಹೇಳಿದ್ದರು. ಪ್ರಧಾನಿ ಮೋದಿಯವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸಹ ಹೇಳಿದ್ದರು. ಆದರೆ, ಇತ್ತ ರಾಧಾ ಮೋಹನ್ ದಾಸ್ ಮಂಡ್ಯ ಅಖಾಡವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದಾಗಿ ಘೋಷಿಸಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕುಮಾರಸ್ವಾಮಿಯವರೇ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಆದರೆ, ಬಿಜೆಪಿ ನಿರ್ಧಾರದ ಬಳಿಕ ತೀರ್ಮಾನ ಮಾಡುವುದಾಗಿ ಹೇಳಿದ್ದ ಸುಮಲತಾ ಈಗೇನು ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಸುಮಲತಾ ಟಿಕೆಟ್‌ ಬಗ್ಗೆ ಪ್ರತಿಕ್ರಿಯಿಸಿರೋ ರಾಧಾ ಮೋಹನ್ ದಾಸ್, ಸುಮಲತಾ ಅವರ ರಾಜಕೀಯ ಭವಿಷ್ಯ ಉತ್ತಮವಾಗಿರಲಿದೆ ಎಂದಷ್ಟೇ ಹೇಳಿದ್ದಾರೆ.

ಇದನ್ನೂ ಓದಿ: ಸುಮಲತಾಗೆ ಕೈತಪ್ಪಿದ ಮಂಡ್ಯ ಬಿಜೆಪಿ ಟಿಕೆಟ್: ಪಕ್ಷೇತರವಾಗಿ ಸ್ಪರ್ಧಿಸಿ ಎಂದ ಆಪ್ತರು

ಕೋಲಾರ ಬಿಜೆಪಿಯಲ್ಲೂ ಕೋಲಾಹಲ: ಮುನಿದ ಮುನಿಸ್ವಾಮಿ!

ರಾಧಾ ಮೋಹನ್ ದಾಸ್ ಹೇಳಿದಂತೆ ಕೋಲಾರ ಕ್ಷೇತ್ರವೂ ಜೆಡಿಎಸ್ ಪಾಲಾದರೆ ಬಂಡಾಯ ಭುಗಿಲೇಳುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಕೋಲಾರ ಸಂಸದ ಮುನಿಸ್ವಾಮಿ ಅತ್ತ ದೆಹಲಿಯಲ್ಲಿ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಆದರೆ ಇತ್ತ ಕೋಲಾರವನ್ನ ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದಾಗಿ ರಾಧಾ ಮೋಹನ್ ದಾಸ್ ಹೇಳಿರುವುದು ಮುನಿಸ್ವಾಮಿ ಹೋರಾಟಕ್ಕೆ ಹಿನ್ನಡೆಯಾದಂತಿದೆ. ಮುನಿಸ್ವಾಮಿ ಮುನಿಸು ತಣಿಸಲು ಮದ್ದರೆದಿರೋ ರಾಧಾ ಮೋಹನ್ ದಾಸ್, ಮುನಿಸ್ವಾಮಿ ರಾಜಕೀಯ ಭವಿಷ್ಯದ ಬಗ್ಗೆಯೂ ಯೋಚನೆ ಮಾಡುತ್ತೇವೆ ಎಂದಿದ್ದಾರೆ.

ಹಾಸನದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಬಂಡಾಯದ ಬಿಸಿ

ಹಾಸನದಲ್ಲಿ ಬಿಜೆಪಿ ಜೆಡಿಎಶ್ ಮೈತ್ರಿಗೆ ಬಂಡಾಯ ಬಿಸಿ ತಟ್ಟಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ತೊಡೆತಟ್ಟಿರುವ ಮಾಜಿ ಶಾಸಕ ಪ್ರೀತಂಗೌಡ ಪರಮಾಪ್ತ ಕಿರಣ್ ಕುಮಾರ್, ತಾನೇ ಬಿಜೆಪಿ ಅಭ್ಯರ್ಥಿ ಅಂತಾ ಮತ ಶಿಕಾರಿ ಆರಂಭಿಸಿದ್ದಾರೆ. ನಾಮಪತ್ರ ಅರ್ಜಿಗೆ ಪೂಜೆ ಸಲ್ಲಿಸಿದ್ದಾರೆ. ಇತ್ತ ಹಾಸನ ಜೆಡಿಎಸ್‌ಗೆ ಎಂದಿರುವ ಹೈಕಮಾಂಡ್‌ಗೆ ಹಾಸನ ಬಿಜೆಪಿ ನಾಯಕರ ಮುನಿಸು ತಣಿಸುವುದು ಸವಾಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯದಲ್ಲಿರುವ ಎಲ್ಲ ಬಂಡಾಯ ಶಮನವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ದೋಸ್ತಿ ಕುಸ್ತಿ: ಬೀದಿಗೆ ಬಂತು ಜೆಡಿಎಸ್, ಬಿಜೆಪಿ ಅಂತಃ ಕಲಹ

ದೆಹಲಿ ನಾಯಕರಿಗೂ ತಲೆನೋವು ತಂದ 5 ಕ್ಷೇತ್ರಗಳು

20 ಕ್ಷೇತ್ರಕ್ಕೆ ಅಭ್ಯರ್ಥಿ ಕಣಕ್ಕಿಳಿಸಿರುವ ಬಿಜೆಪಿ, ಮೂರು ಕ್ಷೇತ್ರವನ್ನು ಬಿಟ್ಟುಕೊಟ್ಟರೂ ಉಳಿದ ಐದು ಕ್ಷೇತ್ರಗಳು ಕಗ್ಗಂಟಾಗಿವೆ. ಹೀಗಾಗಿ ಇವತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಬೆಳಗಾವಿ, ರಾಯಚೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಉತ್ತರ ಕನ್ನಡ ಕ್ಷೇತ್ರಗಳ ಬಗ್ಗೆ ಚರ್ಚೆ ಅಂತಿಮ ಆಗಲಿದೆ.

(ಬ್ಯುರೋ ರಿಪೋರ್ಟ್ ‘ಟಿವಿ9’)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ