ಮತಗಳ್ಳತನ ಆರೋಪ: 1 ವರ್ಷ ಕತ್ತೆ ಕಾಯುತ್ತಿದ್ರಾ? ಅಂತಾ ರಾಹುಲ್, ಕಾಂಗ್ರೆಸ್​ಗೆ ಜೋಶಿ ಪ್ರಶ್ನೆ

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಆಗಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ವಿಧಾನಸಭಾ ಚುನಾವಣಾ ಫಲಿತಾಂಶ ಮತ್ತು ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿ, ಕಾಂಗ್ರೆಸ್ ಪಕ್ಷದ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ. ಕಾಂಗ್ರೆಸ್​ ದಿವಾಳಿಯತ್ತ ಸಾಗುತ್ತಿದೆ ಎಂದರು.

ಮತಗಳ್ಳತನ ಆರೋಪ: 1 ವರ್ಷ ಕತ್ತೆ ಕಾಯುತ್ತಿದ್ರಾ? ಅಂತಾ ರಾಹುಲ್, ಕಾಂಗ್ರೆಸ್​ಗೆ ಜೋಶಿ ಪ್ರಶ್ನೆ
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ
Updated By: ವಿವೇಕ ಬಿರಾದಾರ

Updated on: Aug 02, 2025 | 3:05 PM

ಧಾರವಾಡ, ಆಗಸ್ಟ್​ 02: ಲೋಕಸಭಾ ಚುನಾವಣೆಯ (Loksabha Election) ಸಂದರ್ಭದಲ್ಲಿ ಕರ್ನಾಟಕದಲ್ಲಿ ‘ಮತಗಳ್ಳನ’ ಆಗಿದೆ ಎಂಬ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರ (Rahul Gandhi) ಆರೋಪವನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರು (Pralhad Joshi) ತೀವ್ರವಾಗಿ ಖಂಡಿಸಿದ್ದಾರೆ. ಲೋಕಸಭೆ ಚುನಾವಣೆ ನಡೆದು ಒಂದು ವರ್ಷ ಕಳೆದಿದೆ. ಒಂದು ವರ್ಷದವರೆಗೆ ನೀವು ಕತ್ತೆ ಕಾಯುತ್ತಿದ್ರಾ? ಎಂದು ವಾಗ್ದಾಳಿ ಮಾಡಿದರು.

ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ನಿಮಗೆ 136 ಸೀಟು ಕೊಟ್ಟಿದ್ದಾರೆ. ಇದೀಗ ಜನರು ಅಯೋಗ್ಯರಿಗೆ ಮತ ಹಾಕಿದೆವು ಅಂತ ಶಪಿಸುತ್ತಿದ್ದಾರೆ. ಲೋಕಸಭೆಯಲ್ಲಿ ಜನರು ನಮಗೆ ಮತ ಹಾಕಿದ್ದಕ್ಕೆ ಈ ವಿಚಾರ ಕೇಳುತ್ತಿದ್ದೀರಿ. ಸೋತ ಬಳಿಕ ಮತಗಳ್ಳತನವಾಗಿದೆ, ಆಯೋಗ ಸರಿಯಿಲ್ಲ ಅನ್ನುತ್ತೀರಿ. ಎಲ್ಲೆಲ್ಲಿ ಸೋಲುತ್ತೀರಿ ಆಗ ಇವಿಎಂ ಸರಿ ಇಲ್ಲ ಎನ್ನುತ್ತೀರಿ. ಗೆದ್ದಾಗ ಒಂದೇ ಒಂದು ಮಾತೂ ಆಡುವುದಿಲ್ಲ ಎಂದು ತಿರುಗೇಟು ನೀಡಿದರು.

ಚುನಾವಣೆಯಾಗಿ ಫಲಿತಾಂಶ ಘೋಷಣೆಯಾದ ಬಳಿಕ ಒಂದೇ ಒಂದು ಅರ್ಜಿ ಹಾಕಿದ್ದೀರಾ? ನೀವು ಕತ್ತೆ ಕಾಯಲು ಕೂಡ ಯೋಗ್ಯರಲ್ಲ. ನಮ್ಮ ಭಾರತದ ಕಣ ಕಣದಲ್ಲಿಯೂ ಪ್ರಜಾಪ್ರಭುತ್ವವಿದೆ. ರಾಜೀವ್ ಗಾಂಧಿ ಹತ್ಯೆಯಾದಾಗ ಇಡೀ ದೇಶದಲ್ಲಿಯೇ ಲೋಕಸಭಾ ಚುನಾವಣೆ ನಿಲ್ಲಿಸಿದಿರಿ. ರಾಜೀವ್ ಗಾಂಧಿ ಕ್ಷೇತ್ರದಲ್ಲಷ್ಟೇ ಚುನಾವಣೆ ನಿಲ್ಲಿಸಬೇಕಿತ್ತು. ಆದರೆ ಇಡೀ ದೇಶಾದ್ಯಂತ ಚುನಾವಣೆ ಸ್ಥಗಿತಗೊಳಿಸಿದಿರಿ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ತಮಗೆ ಬೇಕಾದವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿಕೊಂಡರು. ಇದೀಗ ನಮಗೆ ಚುನಾವಣಾ ಆಯೋಗದ ಬಗ್ಗೆ ಹೇಳಲು ಬರುತ್ತಿದ್ದಾರೆ ಎಂದರು.

ಜುಲೈ 21 ರಿಂದ ಸಂಸತ್ತ ಅಧಿವೇಶನ ಶುರುವಾಗಿದೆ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಅಧಿವೇಶನ ನಡೆಯಲು ಬಿಡುತ್ತಿಲ್ಲ. ಕಾಂಗ್ರೆಸ್ ಅಧಿವೇಶನಕ್ಕೂ ಮುಂಚೆ ಆಪರೇಶನ್ ಸಿಂಧೂರ್ ಬಗ್ಗೆ ಚರ್ಚೆಯಾಗೇಕು ಎಂದಿತ್ತು. ಹೀಗಾಗಿ, ನಾವು ಅದಕ್ಕೆ ಸಿದ್ಧರಾಗಿದ್ದೆವು. ಆದರೆ ವಿರೋಧ ಪಕ್ಷದವರು ಆಪರೇಷನ್​ ಸಿಂಧೂರ್ ಬಗ್ಗೆ ಚರ್ಚೆ ಮಾಡಲಿಲ್ಲ. ಆಪರೇಷನ್​ ಸಿಂಧೂರ್​ ಬಗ್ಗೆ ಚರ್ಚೆ ಏಕೆ ನಡೆಸುತ್ತಿಲ್ಲ ಅಂತ ಮಾಧ್ಯಮಗಳಲ್ಲಿ ಜನರು ನಿಮ್ಮನ್ನು ಪ್ರಶ್ನಿಸಿದ ಬಳಿಕ ಚರ್ಚೆ ನಡೆಸಿದ್ರಿ. ವಿರೋಧ ಪಕ್ಷದವರ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರು ಉತ್ತರ ನೀಡಿದರು. ಬಳಿಕ ವಿರೋಧ ಪಕ್ಷದವರು ಅದರ ಚರ್ಚೆ ಬಂದ್ ಮಾಡಿದರು ಎಂದು ತಿಳಿಸಿದರು.

ಇದನ್ನೂ ನೋಡಿ: ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿಎಂ ಸಿದ್ದರಾಮಯ್ಯ

ದೇಶದಲ್ಲಿ ಬೌದ್ಧಿಕವಾಗಿ ಕಾಂಗ್ರೆಸ್ ದಿವಾಳಿಯಾಗಿದೆ. ರಾಹುಲ್ ಗಾಂಧಿ ನೇತ್ರತ್ವದಲ್ಲಿ ಕಾಂಗ್ರೆಸ್​ ದಿವಾಳಿಯಾಗಿ ಹೋಗಿದೆ. ಆಪರೇಷನ್ ಸಿಂಧೂರನಲ್ಲಿ ಅವರ ಹೂರಣ ಹೊರಗೆ ಬಿತ್ತು. ಹೀಗಾಗಿ ಅದರಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಏನೇನೋ ಹೇಳುತ್ತಿದ್ದಾರೆ. ಇದೀಗ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಮಾಡಲು ಸಿದ್ಧರಿಲ್ಲ. ಯುಪಿಎ ಸರಕಾರದ ವೇಳೆಯಲ್ಲಿ 28 ಬಾಂಬ್ ದಾಳಿ ನಡೆದಿದ್ದವು. ಆದರೂ ಪಾಕಿಸ್ತಾನದ ಮೇಲೆ ಒಂದೇ ಒಂದು ಆ್ಯಕ್ಷನ್ ತೆಗೆದುಕೊಂಡಿಲ್ಲ. ಅವೆಲ್ಲವುಗಳ ಬಗ್ಗೆ ನಾವು ಅಧಿವೇಶನದಲ್ಲಿ ಬಯಲಿಗೆ ತಂದೆವು. ಹೀಗಾಗಿ ಇದೀಗ ಚರ್ಚೆ ನಡೆಸಲು ಅವರು ಬಿಡುತ್ತಿಲ್ಲ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Sat, 2 August 25