CM Ibrahim: ‘ರಾಹುಲ್ ಗಾಂಧಿ ಇಲ್ಲಿನ ನಾಯಕರ ಹೆಸರು ಹೇಳಿ ಕರೆಯುವುದನ್ನು ಕಲಿಯಲಿ‘- ಸಿಎಂ ಇಬ್ರಾಹಿಂ

Rahul Gandhi: ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಜೆಡಿಎಸ್​ಗೆ ಸೇರುವುದನ್ನು ಘೋಷಿಸಿದ್ದಾರೆ. ಇದೇ ವೇಳೆ ಪರಿಷತ್​ ಸ್ಥಾನಕ್ಕೆ ಏಕೆ ಇನ್ನೂ ರಾಜಿನಾಮೆ ಕೊಟ್ಟಿಲ್ಲ ಎಂದೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿಗೆ ಸಲಹೆಯನ್ನೂ ಇಬ್ರಾಹಿಂ ನೀಡಿದ್ದಾರೆ.

CM Ibrahim: ‘ರಾಹುಲ್ ಗಾಂಧಿ ಇಲ್ಲಿನ ನಾಯಕರ ಹೆಸರು ಹೇಳಿ ಕರೆಯುವುದನ್ನು ಕಲಿಯಲಿ‘- ಸಿಎಂ ಇಬ್ರಾಹಿಂ
ಸಿ.ಎಂ.ಇಬ್ರಾಹಿಂ
Edited By:

Updated on: Feb 05, 2022 | 1:14 PM

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಲ್ಲಿನ ನಾಯಕರ ಹೆಸರು ಹೇಳಿ ಕರೆಯುವುದನ್ನು ಕಲಿಯಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ (C.M.Ibrahim) ಖಾರವಾಗಿ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ಥಾನಮಾನದ ಕುರಿತಂತೆ ಆಗಿರುವ ಮೋಸದಲ್ಲಿ ಹೈಕಮಾಂಡ್ ಕೈವಾಡ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಾಪ ಹೈಕಮಾಂಡ್​ನವರಿಗೆ ಏನು ಗೊತ್ತಿದೆ? ರಾಹುಲ್ ಗಾಂಧಿಗೆ ಇಲ್ಲಿನ ನಾಯಕರ ಬಗ್ಗೆ ಏನು ಗೊತ್ತಿದೆ?’ ಎಂದು ಮರುಪ್ರಶ್ನಿಸಿದ್ದಾರೆ. ಈ ಹಿಂದಿನ ಘಟನೆಯನ್ನು ನೆನಪಿಸಿಕೊಂಡ ಇಬ್ರಾಹಿಂ, ‘‘ಕೆಪಿಸಿಸಿ ಅಧ್ಯಕ್ಷರಾಗುವ ಮೊದಲು, ದಿನೇಶ್ ಗುಂಡೂರಾವ್ ಯಾರು ಅಂತಾ ನನ್ನನ್ನು ಕೇಳಿದ್ದರು. ಇಂದಿರಾ ಗಾಂಧಿ ನಾಯಕರ ಹೆಸರನ್ನು ಹೇಳಿ ಕರೆಯುತ್ತಿದ್ದರು. ರಾಜೀವ್ ಗಾಂಧಿಯೂ ಹೆಸರು ಹೇಳಿ ಕರೆಯುತ್ತಿದ್ದರು. ಆದರೆ ರಾಹುಲ್ ಗಾಂಧಿ ಹೆಸರನ್ನು ಹೇಳಿ ಕರೆಯುವುದನ್ನು ಕಲಿತಿಲ್ಲ. ಅವರು ಇಲ್ಲಿನ ನಾಯಕರ ಹೆಸರೇಳಿ ಕರೆಯುವುದನ್ನು ಕಲಿಯಲಿ. ಇದು ನಮ್ಮ ಆಶಯ’’ ಎಂದು ಸಲಹೆ ನೀಡಿದ್ದಾರೆ.

ಯಡಿಯೂರಪ್ಪನವರು ವೀರತ್ವ ತೋರಿಸಬೇಕು; ಪಕ್ಷದಿಂದ ಹೊರಗೆ ಬರಬೇಕು- ಇಬ್ರಾಹಿಂ ಸಲಹೆ

ಜೆಡಿಎಸ್ ಪಕ್ಷ ಸೇರುವುದನ್ನು ಘೋಷಿಸಿರುವ ಸಿಎಂ ಇಬ್ರಾಹಿಂ ಇನ್ನೊಂದು ವರ್ಷದಲ್ಲಿ ಕಾಂಗ್ರೆಸ್​ನವರೇ ಸಹಾಯ ಬೇಕು ಎಂದು ಬರುತ್ತಾರೆ ಎಂದಿದ್ದಾರೆ. ಸಿದ್ದರಾಮಯ್ಯನವರು ಕಾಂಗ್ರೆಸ್​​ನಲ್ಲಿ ಖುಷಿಯಾಗೇನೂ ಇಲ್ಲ ಎಂದೂ ಇಬ್ರಾಹಿಂ ಹೇಳಿದ್ದಾರೆ. ದೇವೇಗೌಡರ ಬುದ್ಧಿವಂತಿಕೆ ಹೊಗಳಿದ ಇಬ್ರಾಹಿಂ, ‘ಗೌಡ್ರು ಡ್ಯಾಮ್ ಕಟ್ಟೋಕೆ ಹೋಗಲ್ಲ. ಸೋರೋ ನೀರಿಗೆ ಬಕೆಟ್ ಹಿಡಿತಾರೆ. ಆ ನೀರಲ್ಲೇ ಕೊಡ ತುಂಬಿಸಿಕೊಳ್ಳುತ್ತಾರೆ’ ಎಂದಿದ್ದಾರೆ. ಯಡಿಯೂರಪ್ಪ ವ್ಯಕ್ತಿತ್ವ ದಿನೇ ದಿನೇ ಕ್ಷೀಣ ಆಗುತ್ತಿದೆ. ಅವರು ಧೈರ್ಯ ಮಾಡಬೇಕು. ವೀರತ್ವ ತೋರಿಸಬೇಕು. ಹರಹರ ಮಹಾದೇವ ಎಂದು ಹೊರಗೆ ಬರಬೇಕು ಎಂದು ಇಬ್ರಾಹಿಂ ಸಲಹೆ ನೀಡಿದ್ದಾರೆ.

ಮತಾಂತರ ನಿಷೇಧ ಬಿಲ್​ಗೆ ಹಿನ್ನಡೆ ಆಗಬಾರದಂದು ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ:

ಫೆಬ್ರವರಿ 14ರಂದು ಹುಬ್ಬಳ್ಳಿ ಸಭೆ ನಂತರ ಜೆಡಿಎಸ್​ ಸೇರುವೆ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಕಾಂಗ್ರೆಸ್ ತೊರೆದು ಜೆಡಿಎಸ್​ ಸೇರಲು ದಿನಾಂಕ ಪ್ರಕಟಿಸುವೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನಿಸಿದ್ದೇ‌ನೆ. ಮತಾಂತರ ನಿಷೇಧ ಬಿಲ್​ಗೆ ನನ್ನಿಂದಾಗಿ ಹಿನ್ನಡೆ ಆಗಬಾರದು ಅಂತ ಸದ್ಯಕ್ಕೆ ರಾಜೀನಾಮೆ ಕೊಟ್ಟಿಲ್ಲ. ಬಿಜೆಪಿಗೆ ಕೇವಲ ಒಂದು ಸಂಖ್ಯಾ ಬಲದ ಹಿನ್ನೆಡೆ ಇದೆ. ನಾನು ರಾಜಿನಾಮೆ ನೀಡಿದರೆ ಮತಾಂತರ ನಿಷೇಧ ಬಿಲ್ ಪಾಸಾಗಲು ಕಾರಣವಾದೆ ಎಂಬ ಅಪವಾದವನ್ನು ನನ್ನ ತಲೆಮೇಲೆಯೇ ಹೊರಿಸಬಹುದು. ಇದೇ ಕಾರಣದಿಂದ ಇದುವರೆಗೆ ಪರಿಷತ್​ಗೆ ರಾಜಿನಾಮೆ ನೀಡಿಲ್ಲ ಎಂದು ಇಬ್ರಾಹಿಂ ಹೇಳಿದ್ದಾರೆ.

ಕಾಂಗ್ರೆಸ್​ನಲ್ಲಿ ನಾನು ಅಲ್ಲಾಡಿದ್ದಕ್ಕೆ ನಳಪಡ್​ಗೆ ಅಧ್ಯಕ್ಷ ಸ್ಥಾನ, ಖಾದರ್​​ಗೆ ಉಪನಾಯಕ ಸ್ಥಾನ ಸಿಕ್ಕಿದೆ. ನಾನು ಬಿಟ್ಟರೆ ಇನ್ನು ಕೆಲವರಿಗೆ ಅವಕಾಶ ಸಿಗುತ್ತದೆ. ಇಬ್ರಾಹಿಂಗೆ ಖಾದರ್ ಸರಿಸಮಾನ ಅನ್ನೋದಾದರೆ, ಸಿದ್ದರಾಮಯ್ಯಗೆ ವಿಶ್ವನಾಥ್ ಸಮ; ಅವರನ್ನ ಸಿಎಂ ಮಾಡ್ತಾರಾ? ಎಂದು ಇಬ್ರಾಹಿಂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಕೃಷ್ಣ ಬೈರೇಗೌಡ ಪರ್ಯಾಯ ನಾಯಕರಲ್ವಾ? ಹಾಗಾದರೆ ಅವರು ಒಕ್ಕಲಿಗರೆ ಅಲ್ವಾ? ಎಂದು ಕೇಳಿರುವ ಇಬ್ರಾಹಿಂ, ಅವರಿಗೊಂದು ನಮಗೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ. ನಾನು ಸೆಂಟ್ರಲ್ ಮಿನಿಸ್ಟರ್ ಆಗಿದ್ದಾಗ ಟಿಕೆಟ್ ಕೇಳೋಕೆ ನನ್ನ ಹತ್ತಿರ ಬಂದಿದ್ದರು‌. ನಾನು ಭಾಷಣ ಮಾಡುತ್ತಿದ್ದರೆ ಸಿದ್ದರಾಮಯ್ಯನವರು ಮೋಟರ್ ಸೈಕಲ್ ನಲ್ಲಿ ಬಂದು ನನ್ನ ಭಾಷಣ ಕೇಳಿ ಹೋಗ್ತಿದ್ದರು ಎಂದಿದ್ದಾರೆ ಇಬ್ರಾಹಿಂ.

ಸತೀಶ್ ಜಾರಕಿಹೊಳಿಗೆ ಟಿಕೆಟ್ ಕೊಡಿಸಿದ್ದು ನಾನು: ಇಬ್ರಾಹಿಂ

ಸತೀಶ್ ಜಾರಕಿಹೊಳಿ ಅವರಿಗೆ ಎಂಎಲ್​ಎ ಟಿಕೆಟ್ ಕೊಡಿಸಿದ್ದು ನಾನು ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಸತೀಶ್ ಕಾಂಗ್ರೆಸ್​ಗೆ ಬಂದಾಗ ಎಂಎಲ್​ಎ ಟಿಕೆಟ್ ನೀಡಿರಲಿಲ್ಲ. ಆಗ ಹೋರಾಟ ಮಾಡಿ‌ ಮಲ್ಲಿಕಾರ್ಜುನ ಖರ್ಗೆಯವರಿಂದ ಬಿ ಫಾರಂ ಕೊಡಿಸಿದ್ದೆ. ಈ ವಿಚಾರವನ್ನು ಸತೀಶ್ ಅವರಲ್ಲೂ ಬೇಕಾದರೆ ಕೇಳಿ ಎಂದು ಸಿಎಂ ಇಬ್ರಾಹಿಂ ನುಡಿದಿದ್ದಾರೆ.

YouTube video player

ಇದನ್ನೂ ಓದಿ:

ಹಿಜಾಬ್​​ ಹೆಸರಲ್ಲಿ ದೇಶದ ಪುತ್ರಿಯರ ಭವಿಷ್ಯವನ್ನೇ ಲೂಟಿ ಮಾಡಲಾಗುತ್ತಿದೆ; ಉಡುಪಿ ಕಾಲೇಜು ವಿವಾದದಲ್ಲಿ ಕಾಲಿಟ್ಟ ರಾಹುಲ್ ಗಾಂಧಿ

‘ಅಲಿಂಗ ಚಳುವಳಿ’ ಘೋಷಿಸಿದ ಸಿಎಂ ಇಬ್ರಾಹಿಂ; ಜೆಡಿಎಸ್ ಸೇರುವ ಬಗ್ಗೆಯೂ ಮಾಹಿತಿ ನೀಡಿದ ನಾಯಕ

Loading...
Unable to load recommendations.
Follow Us