ದಾವಣಗೆರೆಯಲ್ಲಿ ನಡೆದ ಪ್ರಧಾನಿ ಮೋದಿ ಸಮಾವೇಶದಲ್ಲಿ 3 ಕಡೆ ಭದ್ರತಾ ಲೋಪ: ಟಿವಿ9ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ

|

Updated on: Mar 25, 2023 | 9:28 PM

ದಾವಣಗೆರೆಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಮಹಾಸಂಗಮದಲ್ಲಿ ಒಟ್ಟು 3 ಕಡೆ ಭದ್ರತಾ ಲೋಪ ಉಂಟಾಗಿದೆ ಎಂದು ಟಿವಿ9ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ.

ದಾವಣಗೆರೆಯಲ್ಲಿ ನಡೆದ ಪ್ರಧಾನಿ ಮೋದಿ ಸಮಾವೇಶದಲ್ಲಿ 3 ಕಡೆ ಭದ್ರತಾ ಲೋಪ: ಟಿವಿ9ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ
Follow us on

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಮಾ.25) ರಾಜ್ಯದ ಬೆಣ್ಣೆ ನಗರಿ ದಾವಣಗೆರೆಗೆ (Davanagere) ಭೇಟಿ ನೀಡಿದ್ದರು. ನಗರದ ಹೊರ ವಲಯದ ಜಿಎಂಐಟಿ ಕಾಲೇಜ್ ಪಕ್ಕದಲ್ಲಿ ನಡೆದ ಮೋದಿ ಮಹಾಸಂಗಮದಲ್ಲಿ (Modi Maha Sangama Convention) ಭಾಗಿಯಾಗಿದ್ದರು.  ಜಿಲ್ಲೆಯಲ್ಲಿ ನಡೆದ ಮೋದಿ ಸಮಾವೇಶದಲ್ಲಿ ಒಟ್ಟು 3 ಕಡೆ ಭದ್ರತಾ ಲೋಪ (security lapses) ಉಂಟಾಗಿದೆ ಎಂದು ಟಿವಿ9ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ. ಮೊದಲಿಗೆ ಮಹಾಸಂಗಮ ಸಮಾವೇಶದ ಅಂಗವಾಗಿ ಪ್ರಧಾನಿ ಮೋದಿ ರೋಡ್‌ಶೋ ಮಾಡಿದ್ದು, ಈ ವೇಳೆ ಮೋದಿ ವಾಹನದ ಬಳಿ ಓರ್ವ ಯುವಕ ನುಗ್ಗಿಬಂದಿದ್ದ. ಪ್ರಧಾನಿಗೆ ಹಾರ ಹಾಕಲು ಬ್ಯಾರಿಕೇಡ್‌ಗಳನ್ನು ಹಾರಿ ಕೊಪ್ಪಳ ಮೂಲದ ಬಸವರಾಜ್‌(28) ಯತ್ನಿಸಿದ್ದ. ಬಳಿಕ ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಯುವಕನ ವಿಚಾರಣೆ ಮಾಡಲಾಗಿದೆ. GMIT ಹೆಲಿಪ್ಯಾಡ್‌ನಿಂದ ರೋಡ್‌ಶೋನಲ್ಲಿ ತೆರಳುತ್ತಿದ್ದಾಗ ಭದ್ರತಾ ಲೋಪ ಉಂಟಾಗಿದೆ.

ಬಳಿಕ ಪ್ರಧಾನಿ ಮೋದಿ ಮಾತನಾಡುವಾಗ ಕಾರ್ಯಕ್ರಮ ನಡೆಯುವ ಸ್ಥಳದ ಹಿಂದೆ ಜನರು ಬ್ಯಾರಿಕೇಡ್ ತಳ್ಳಿ ರೋಡ್ ಕಡೆಗೆ ನುಗ್ಗಿದರು. ಇಲ್ಲಿ ಸರಿಯಾದ ಪೊಲೀಸ್ ಬಂದೋಬಸ್ತ್ ಇರಲಿಲ್ಲ ಇದು ಎರಡನೇ ಭದ್ರತಾ ಲೋಪವಾಗಿದೆ. ಪ್ರಧಾನಿ ಭಾಷಣ ಮಾಡುತ್ತಿದ್ದಾಗಲೇ 3ನೇ ಸಲ ಭದ್ರತಾ ಲೋಪವಾಗಿದೆ. ಭದ್ರತಾ ಲೋಪದ ಬಗ್ಗೆ ಗುಪ್ತಚರ ಇಲಾಖೆ ಕೇಂದ್ರಕ್ಕೆ ವರದಿ ಸಲ್ಲಿಸಿದೆ.

ಇದನ್ನೂ ಓದಿ: Narendra Modi: ಖರ್ಗೆ, ಸಿದ್ದರಾಮಯ್ಯಗೆ ಟಾಂಗ್; ಕಾಂಗ್ರೆಸ್​ನ​​ ಗ್ಯಾರಂಟಿಗಳು ಪೊಳ್ಳು ಭರವಸೆಗಳೆಂದ ಪ್ರಧಾನಿ ಮೋದಿ

ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಟಿವಿ9ಗೆ​ ಮಾಹಿತಿ

ಈ ಕುರಿತಾಗಿ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಟಿವಿ9ಗೆ​ ಮಾಹಿತಿ ನೀಡಿದ್ದು, ಪ್ರಧಾನಿ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯವಾಗಿಲ್ಲ. ಮೋದಿ ರೋಡ್​ಶೋ ವೇಳೆ ಜನ ಹೆಚ್ಚಾಗಿದ್ದರಿಂದ ತಳ್ಳಾಟ ಶುರುವಾಯಿತು. ಆಗ ಬ್ಯಾರಿಕೇಡ್​ ಮುರಿದ ಕಾರಣ ಓರ್ವ ಯುವಕ ಹೊರಗೆ ಓಡಿಬಂದಿದ್ದ. ನಮ್ಮ ಪೊಲೀಸರು ಆ ಯುವಕನನ್ನು ವಾಪಸ್ ಕಳಿಸಿದ್ದರು. ಆ ಯುವಕ ಇದ್ದ ಸ್ಥಳಕ್ಕೂ ಪ್ರಧಾನಿ ಮೋದಿಗೂ 20 ಅಡಿ ಅಂತರವಿತ್ತು ಎಂದು ಸ್ಪಷ್ಟನೆ ನೀಡಿದರು.

ಪ್ರಧಾನಿ ಮೋದಿ ಆಗಮನ ವೇಳೆ ಡಿ ಜೋನ್​ ಪ್ರವೇಶಿಸಿದ್ದ ಎನ್​ಸಿಸಿ ಅಧಿಕಾರಿ ವಶಕ್ಕೆ

ದಾವಣಗೆರೆಯಲ್ಲಿ ಮಹಾಸಂಗಮಕ್ಕೆ ಬಂದಾಗ ಪ್ರಧಾನಿ ಮೋದಿ ರೋಡ್​ಶೋ ವೇಳೆ ಓರ್ವ ಎನ್​ಸಿಸಿ ಅಧಿಕಾರಿ ಡಿ ಜೋನ್​ ಪ್ರವೇಶಿಸಿದ್ದ. ನಿಷೇಧಿತ ಪ್ರದೇಶವನ್ನು ಪ್ರವೇಶಿಸಿದ್ದ ಎನ್​ಸಿಸಿ ಅಧಿಕಾರಿ ರಾಜ್​ಗೌರವ್ ಎಂದು ಗುರುತಿಸಲಾಗಿದೆ.​ NCC ಅಧಿಕಾರಿ ಸಮವಸ್ತ್ರ ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದ. ಪ್ರಧಾನಿ ಮೋದಿ ಜತೆ ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸಿದ್ದ ಆರೋಪ ಮಾಡಲಾಗಿದೆ. 17 ವರ್ಷ ಸೇನೆಯಲ್ಲಿ ಸೇವೆ, ಈಗ NCC ಅಧಿಕಾರಿ ಆಗಿರುವ ರಾಜ್​ಗೌರವ್​ನನ್ನು​ ವಶಕ್ಕೆ ಪಡೆದು ಗಾಂಧಿನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ

ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಬಿಜೆಪಿ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮೋದಿ ಮಾತು ಆರಂಭಿಸಿದರು. ಕರ್ನಾಟಕದ ಬಿಜೆಪಿಗೆ ಧನ್ಯವಾದ ಸಮರ್ಪಿಸುತ್ತೇನೆ. ರಾಜ್ಯ ಬಿಜೆಪಿ ಈ ಕಾರ್ಯಕ್ರಮ ಆಯೋಜಿಸಿದ್ದರಿಂದ ನನಗೆ ನಿಮ್ಮನ್ನೆಲ್ಲ ಕಾಣಲು ಸಾಧ್ಯವಾಯಿತು. ನಿಮ್ಮೆಲ್ಲರ ದರ್ಶನ ನನಗೆ ದೊಡ್ಡ ಸೌಭಾಗ್ಯ ಎಂದು ಮೋದಿ ಹೇಳಿದರು.

ಇದನ್ನೂ ಓದಿ: ನಾಳೆ ಬೆಂಗಳೂರಿಗೆ ಅಮಿತ್ ಶಾ: ನಗರವಾಸಗಿಗಳಿಗೆ ಟ್ರಾಫಿಕ್ ಬಿಸಿ, ಪರ್ಯಾಯ ಮಾರ್ಗದ ವ್ಯವಸ್ಥೆ ಹೀಗಿದೆ

ಹರಿಹರೇಶ್ವರ ಮಂದಿರದ ರೂಪದಲ್ಲಿ ಹರಿ ಮತ್ತು ಹರರ ಸಮನ್ವಯವಾಗಿದೆ. ಅಂಥ ಹರಿಹರದ ಸಮೀಪದಲ್ಲಿರುವ ಈ ಪುಣ್ಯ ಕ್ಷೇತ್ರದಲ್ಲಿ ಕರ್ನಾಟಕ ಬಿಜೆಪಿಯ ನಾಲ್ಕು ವಿಜಯ ಯಾತ್ರೆಗಳ ಮಹಾಸಂಗಮವಾಗಿದೆ. ಇದಕ್ಕಾಗಿ ಕರ್ನಾಟಕ ಬಿಜೆಪಿಯ ಎಲ್ಲ ಕಾರ್ಯಕರ್ತರಿಗೆ ಹೃದಯಾಂತರಾಳದ ಧನ್ಯವಾದ ಸಮರ್ಪಿಸುತ್ತಿದ್ದೇನೆ. ಪ್ರತಿ ಯಾತ್ರೆಯಲ್ಲೂ ಜನರ ವಿಶ್ವಾಸ ವ್ಯಕ್ತವಾಗಿರುವುದನ್ನು ವಿಡಿಯೋಗಳಲ್ಲಿ ನೋಡಿದ್ದೇನೆ. ಇದು ಅಭೂತಪೂರ್ವ ಮತ್ತು ಅದ್ಭುತ ಎಂದು ಮೋದಿ ಹೇಳಿದರು.

ದೇಶಾದ್ಯಂತ 7 ಟೆಕ್ಸ್ ಟೈಲ್ಸ್ ಹಬ್ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ಒಂದು ದಾವಣಗೆರೆಯಲ್ಲಿ ಇದೆ. ಇದು ಹಲವು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಿದೆ. ಈ ಮೂಲಕ ಯುವಕರಿಗೆ ಉದ್ಯೋಗದ ಅವಕಾಶ ದೊರಕುತ್ತಿದೆ. ಪ್ರಪಂಚದಾದ್ಯಂತ ಭಾರತಕ್ಕೆ ಜೈಕಾರ ಹಾಕುತ್ತಿದ್ದಾರೆ. ಇದು ಕೇವಲ ಮೋದಿಯ ಕಾರಣಕ್ಕೆ ಅಲ್ಲ. ನೀವೆಲ್ಲರೂ ವೋಟ್ ನೀಡಿದ ಕಾರಣಕ್ಕೆ ಜಗತ್ತಿನಲ್ಲಿ ಭಾರತದ ಪರ ಜೈಕಾರ ಮೊಳಗುತ್ತಿದೆ. ಇದು ಕರ್ನಾಟದಲ್ಲೂ ನಿಮ್ಮಿಂದ ಸಾಧ್ಯ ಆಗಬೇಕು ಎಂದು ಮೋದಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:21 pm, Sat, 25 March 23