ವಿಪಕ್ಷ ನಾಯಕರ ಆಯ್ಕೆ ಕಸರತ್ತು: ಕೇಂದ್ರದ ಇಬ್ಬರು ವೀಕ್ಷಕರು ನಾಳೆ ಬೆಂಗಳೂರಿಗೆ, ದೆಹಲಿಯಲ್ಲಿ ಯಡಿಯೂರಪ್ಪ ಹೇಳಿಕೆ

ಕರ್ನಾಟಕ ವಿಧಾನಸಭೆ ಮತ್ತು ಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಅವರು ಇಂದು ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದರು.

ವಿಪಕ್ಷ ನಾಯಕರ ಆಯ್ಕೆ ಕಸರತ್ತು: ಕೇಂದ್ರದ ಇಬ್ಬರು ವೀಕ್ಷಕರು ನಾಳೆ ಬೆಂಗಳೂರಿಗೆ, ದೆಹಲಿಯಲ್ಲಿ ಯಡಿಯೂರಪ್ಪ ಹೇಳಿಕೆ
ಮಾಜಿ ಮುಖ್ಯಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ವಿದೇಶ ಪ್ರವಾಸದಿಂದ ವಾಪಸ್ ಆಗಿದ್ದಾರೆ.
Edited By: Rakesh Nayak Manchi

Updated on: Jul 02, 2023 | 10:46 PM

ನವದೆಹಲಿ: ಕರ್ನಾಟಕ ವಿಪಕ್ಷ ನಾಯಕರ ಆಯ್ಕೆಗಾಗಿ ರಾಜ್ಯ ಬಿಜೆಪಿ ನಾಯಕರು ಹಾಗೂ ಹೈಕಮಾಂಡ್ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಇಂದು ದೆಹಲಿಗೆ ಭೇಟಿ ನೀಡಿ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿಯಾದ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa), ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ನಾಳೆ ಕೇಂದ್ರದಿಂದ ವೀಕ್ಷಕರಾದ ವಿನೋದ್​ ತಾವ್ಡೆ, ಮನ್ಸುಖ್​ ಮಾಂಡವೀಯ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಾಳೆ ಅಧಿವೇಶನಕ್ಕೆ ವಿಪಕ್ಷ ನಾಯಕ ಇರುವುದಿಲ್ಲ ಎಂದು ತಿಳಿಸಿದರು.

ಬೆಂಗಳೂರಿನಿಂದ ದೆಹಲಿಗೆ ತೆರಳಿದ ಯಡಿಯೂರಪ್ಪ ಅವರು ಕೃಷ್ಣಮೆನನ್ ಮಾರ್ಗದಲ್ಲಿರುವ ಅಮಿತ್ ಶಾ ಅವರ ನಿವಾಸಕ್ಕೆ ಹೋಗಿ ಎಂಟು ನಿಮಿಷಗಳ ಕಾಲ ಚರ್ಚಿಸಿದ ನಂತರ ಮೋತಿಲಾಲ್​ ನೆಹರು ಮಾರ್ಗದಲ್ಲಿರುವ ಜೆಪಿ ನಡ್ಡಾ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು. ಅಲ್ಲಿಂದ ಮತ್ತೆ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಇದನ್ನೂ ಓದಿ: ಹೈಕಮಾಂಡ್ ಅಂಗಳಕ್ಕೆ ವಿಪಕ್ಷ ನಾಯಕನ ಆಯ್ಕೆ: ದಿಲ್ಲಿಗೆ ಹೊರಟ ಯಡಿಯೂರಪ್ಪ, ವಿರೋಧ ಪಕ್ಷ ನಾಯಕನ ಸೀಟ್​ನಲ್ಲಿ ಕೂರುವುದು ಯಾರು?

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಡ್ಡಾ, ಕೇಂದ್ರ ಗೃಹ ಸಚಿವ ಶಾ ಭೇಟಿಯಾಗಿ ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ವಿಪಕ್ಷ ನಾಯಕರ ಆಯ್ಕೆ ಸಂಬಂಧ ನಾಳೆ ಬೆಂಗಳೂರಿಗೆ ವೀಕ್ಷಕರಾಗಿ ವಿನೋದ್​ ತಾವ್ಡೆ, ಮನ್ಸುಖ್​ ಮಾಂಡವೀಯ ಆಗಮಿಸುತ್ತಿದ್ದಾರೆ. ಇವರು ಶಾಸಕರ ಜೊತೆ ಚರ್ಚಿಸಿ ಎಲ್ಲಾ ವಿವರಗಳನ್ನು ವರಿಷ್ಠರಿಗೆ ತಿಳಿಸಲಿದ್ದಾರೆ. ನಂತರ ವಿಪಕ್ಷ ನಾಯಕರ ಆಯ್ಕೆ ನಡೆಯಲಿದೆ. ಅಗತ್ಯವಿದ್ದರೆ ಮತ್ತೊಮ್ಮೆ ದೆಹಲಿಗೆ ಕರೆಸಿಕೊಳ್ಳುತ್ತೇವೆ ಎಂದಿರುವುದಾಗಿ ತಿಳಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 pm, Sun, 2 July 23

Harish GR
Follow Us