ತುಮಕೂರು ಲೋಕಸಭಾ BJP ಟಿಕೆಟ್​ ಮೇಲೆ ವಿ ಸೋಮಣ್ಣ ಕಣ್ಣು; ಸದ್ದಿಲ್ಲದೆ ಹಲವು ಮುಖಂಡರ ಭೇಟಿ

| Updated By: Rakesh Nayak Manchi

Updated on: Feb 04, 2024 | 7:24 AM

ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು, ಇತ್ತೀಚೆಗಷ್ಟೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಅಮಿತ್ ಶಾ ಮನವಿ ಮಾಡಿದ್ದರು. ಅದರಂತೆ, ಕ್ಷೇತ್ರದಲ್ಲಿ ಸದ್ದಿಲ್ಲದೇ ಹಲವು ಮುಖಂಡರನ್ನ ಭೇಟಿಯಾಗುತ್ತಿದ್ದಾರೆ.

ತುಮಕೂರು ಲೋಕಸಭಾ BJP ಟಿಕೆಟ್​ ಮೇಲೆ ವಿ ಸೋಮಣ್ಣ ಕಣ್ಣು; ಸದ್ದಿಲ್ಲದೆ ಹಲವು ಮುಖಂಡರ ಭೇಟಿ
ತುಮಕೂರು ಲೋಕಸಭಾ ಟಿಕೆಟ್​ ಮೇಲೆ ವಿ ಸೋಮಣ್ಣ ಕಣ್ಣು; ಹಲವು ಮುಖಂಡರ ಭೇಟಿ
Follow us on

ತುಮಕೂರು, ಫೆ.4: ಈ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ವಿ.ಸೋಮಣ್ಣ (V Somanna) ಅವರು, ಇತ್ತೀಚೆಗಷ್ಟೇ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಅಮಿತ್ ಶಾ ಮನವಿ ಮಾಡಿದ್ದರು. ಅದರಂತೆ, ಕ್ಷೇತ್ರದಲ್ಲಿ ಸದ್ದಿಲ್ಲದೇ ಹಲವು ಮುಖಂಡರನ್ನ ಭೇಟಿಯಾಗುತ್ತಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಿನ್ನೆಯೂ ತುಮಕೂರಿಗೆ ಆಗಮಿಸಿದ್ದ ವಿ ಸೋಮಣ್ಣ, ಬಿಜೆಪಿ ಮುಖಂಡರ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಳಿಕ ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಸೋಮಣ್ಣರಿಗೆ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದಾರೆ. ಸದ್ದಿಲ್ಲದೇ ನಿರಂತರವಾಗಿ ತುಮಕೂರಿಗೆ ಬಂದು ಹೋಗುತ್ತಿರುವ ಸೋಮಣ್ಣ, ಇಂದು ದೆಹಲಿಗೆ ಭೇಟಿ ನೀಡಿ ವರಿಷ್ಠರ ಭೇಟಿಯಾಗುವ ಸಾಧ್ಯತೆ ಇದೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅನಿವಾರ್ಯವಾಗಿ ಒಪ್ಪಿಕೊಂಡು ಸೋತ ನಂತರ ಸೋಮಣ್ಣ ಪಕ್ಷದ ರಾಜ್ಯ ನಾಯಕರ ವಿರುದ್ಧ ಸಿಡಿದೆದ್ದಿದ್ದರು. ಹಲವು ನಾಯಕರ ವಿರುದ್ಧ ಬಹಿರಂಗ ಟೀಕೆಗಳನ್ನೂ ಮಾಡಿದ್ದರು. ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ವದಂತಿಗಳೂ ಹಬ್ಬಿದ್ದವು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಅವರು ಇದೀಗ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿರುವುದು ಕುತೂಹಲ ಮೂಡಿಸಿತ್ತು.

ಇದನ್ನೂ ಓದಿ: ಮುನಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ವಾಪಸ್ಸು ಕರೆತಂದ ಹೈಕಮಾಂಡ್ ತೀರ್ಪನ್ನು ಸ್ವಾಗತಿಸುತ್ತೇನೆ: ವಿ ಸೋಮಣ್ಣ

ಜನವರಿ ತಿಂಗಳಲ್ಲಿ ಸೋಮಣ್ಣ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಉಭಯ ನಾಯಕರು ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗಾದ ಸೋಲು ಮತ್ತು ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪವಾಗಿದೆ.

ವಿಧಾನಸಭಾ ಚುನಾವಣೆಯ ಸೋಲಿನ ಬಗ್ಗೆ ಅಮಿತ್ ಶಾ ಅವರಿಗೆ ವಿವರಿಸಿದ ಸೋಮಣ್ಣ, ರಾಜ್ಯ ನಾಯಕರ ವಿರುದ್ಧ ದೂರು ನೀಡಿದ್ದರು. ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡವಂತೆ ಅಮಿತ್ ಶಾ ಬಳಿ ಸೋಮಣ್ಣ ಮನವಿ ಮಾಡಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಅಮಿತ್ ಶಾ ಮನವಿ ಮಾಡಿದ್ದು, ಯಾವುದಕ್ಕೂ ತುಮಕೂರು ಸೀಟು ಹಂಚಿಕೆ ಬಳಿಕ ನಿರ್ಧಾರ ಮಾಡುವೆ ಎಂದು ಸೋಮಣ್ಣ ಹೇಳಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ, ಅಮಿತ್ ಶಾ ಭೇಟಿ ಬಳಿಕ ಮಾತನಾಡಿದ ಸೋಮಣ್ಣ, ಪಕ್ಷದ ಮುಖ್ಯವಾಹಿನಿಯಲ್ಲಿ ಇರುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ರಾಜ್ಯಸಭಾ ಸ್ಥಾನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ. ರಾಜ್ಯದಲ್ಲಿ 3 ಲೋಕಸಭಾ ಕ್ಷೇತ್ರ ಗೆಲ್ಲಿಸಿಕೊಡುವುದಾಗಿ ಹೇಳಿದ್ದೇನೆ ಎಂದಿದ್ದರು.

ಕೆಲವೊಂದು ಪ್ರಮುಖ ವಿಚಾರಗಳನ್ನು ನಾನು ಚರ್ಚೆ ಮಾಡಿದ್ದೇನೆ. ಮಾತುಕತೆಯ ಎಲ್ಲಾ ವಿವರಗಳನ್ನು ಈಗ ಬಹಿರಂಗವಾಗಿ ಹೇಳಲಾಗದು. ಶಾ ಭೇಟಿ ಬಹಳ ಸಮಾಧಾನ ತಂದಿದೆ. ನಿಮ್ಮ ಸೇವೆಯನ್ನು ಬಳಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದು ಸೋಮಣ್ಣ ಹೇಳಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 am, Sun, 4 February 24