ಸಿದ್ದಲಿಂಗಯ್ಯ ನುಡಿನಮನ : ‘ಪ್ರಖರ ಚಿಂತನೆ, ವಿಡಂಬನಾ ಪ್ರಜ್ಞೆ ಏಕಕಾಲಕ್ಕೆ ಸಿದ್ಧಿಸಿತ್ತು’

Obituary : ‘ಕನ್ನಡ ಸಾಹಿತ್ಯ ಬೂಸಾ‘ ಎಂದ ಬಸವಲಿಂಗಪ್ಪನವರನ್ನು ಬೆಂಬಲಿಸಿ ಸಿದ್ದಲಿಂಗಯ್ಯನವರು ಅನೇಕ ಸಭೆಗಳನ್ನು ಏರ್ಪಡಿಸಿದರು. ವಿದ್ಯಾರ್ಥಿಗಳ ಮಧ್ಯೆ ತೀವ್ರ ಘರ್ಷಣೆಯೂ ಆಯಿತು. ಆದರೆ ಸಿದ್ದಲಿಂಗಯ್ಇಯದೆಲ್ಲವನ್ನೂ ಧೈರ್ಯವಾಗಿ ಎದುರಿಸಿದರು. ಪ್ರಖರವಾದ ಚಿಂತನೆ ಧೈರ್ಯ ಪದವಿ ಓದುತ್ತಿರುವಾಗಲೇ ಇವರಲ್ಲಿತ್ತು.’ ಡಾ. ಬರಗೂರು ರಾಮಚಂದ್ರಪ್ಪ 

ಸಿದ್ದಲಿಂಗಯ್ಯ ನುಡಿನಮನ : ‘ಪ್ರಖರ ಚಿಂತನೆ, ವಿಡಂಬನಾ ಪ್ರಜ್ಞೆ ಏಕಕಾಲಕ್ಕೆ ಸಿದ್ಧಿಸಿತ್ತು’
ಡಾ. ಸಿದ್ದಲಿಂಗಯ್ಯ ಮತ್ತು ಡಾ ಬರಗೂರು ರಾಮಚಂದ್ರಪ್ಪ
Follow us
|

Updated on:Jun 11, 2021 | 9:21 PM

ಮುಂದೆ ಅವರು ಎಂಎಲ್​ಸಿ ಆದಾಗ ಜನತಾ ಸರ್ಕಾರ ಇತ್ತು. ಆಸ್ಥಾನಕ್ಕೆ ನನ್ನನ್ನೂ ಕೇಳಿದ್ದರು ಆದರೆ ನಾನು ಒಪ್ಪಲಿಲ್ಲ. ಆಗ ಬೇರೆ ಕಾರಣಗಳು ಇದ್ದವು. ಇವರು 12 ವರ್ಷ ಕಾರ್ಯ ನಿರ್ವಹಿಸಿದರು.  70ರ ದಶಕದದಿಂದ ಕಾಂಗ್ರೆಸ್ ಆಡಳಿತ ನಡೆಸುತ್ತ ಒಳ್ಳೆಯದನ್ನೂ ಮಾಡಿತ್ತು ಕೆಟ್ಟದ್ದನ್ನೂ. ಆದರೆ ನಮಗೆಲ್ಲ ಒಂದು ಬದಲಾವಣೆ ಬೇಕಿತ್ತು ಎನ್ನಿಸಿದ್ದು ನಿಜ. ಮುಂದೆ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದರು. ಯಡಿಯೂರಪ್ಪನವರನ್ನು ‘ಅಭಿನವ ಬಸವಣ್ಣ’ ಅಂತ ಬಣ್ಣಿಸಿದರು ಎಂಬುದಕ್ಕೆ ಅವರ ಆಪ್ತ ಮತ್ತು ಸಮಾನಮನಸ್ಕರಿಗೆ ಅಸಮಾಧಾನ ಉಂಟಾಯಿತು. ಇರಲಿ, ಇಂದಿಗೂ ಅವರು ನನ್ನ ಮನಸ್ಸಿನಲ್ಲಿ ಉಳಿದಿರುವುದು ತಮ್ಮ ಪ್ರಖರ ಚಿಂತನೆಗಳಿಂದ. ಆಪ್ತಭಾವದಿಂದ. ಡಾ. ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ, ವಿಮರ್ಶಕರು

*

ನಾನು ಬೆಂಗಳೂರಿಗೆ ಸರಕಾರಿ ಕಲಾ ಕಾಲೇಜಿಗೆ ಆಗಷ್ಟೇ ಉಪನ್ಯಾಸಕನಾಗಿ ಸೇರಿಕೊಂಡಿದ್ದೆ. ಆಗ ಪದವಿ ಓದುತ್ತಿದ್ದ ಸಿದ್ದಲಿಂಗಯ್ಯ ನನ್ನ ವಿದ್ಯಾರ್ಥಿ. 45 ವರ್ಷಗಳಿಂದ ಅವರನ್ನು ಹತ್ತಿರದಿಂದ ಬಲ್ಲೆ. ಆಗ ಅವರು ಎರಡನೇ ಬಿಎ ಆನರ್ಸ್ ಓದುತ್ತಿದ್ದರು. ಬಸವಲಿಂಗಪ್ಪನವರು ‘ಕನ್ನಡ ಸಾಹಿತ್ಯ ಬೂಸಾ ಸಾಹಿತ್ಯ’ ಎಂದು ಹೇಳಿದ್ದು ಪತ್ರಿಕೆಯಲ್ಲಿ ವರದಿ ಆಯಿತು. ಆಗ ಅದರ ವಿರುದ್ಧವಾಗಿ ಬಹಳಷ್ಟು ಚರ್ಚೆಯಾಯಿತು. ಬಸವಲಿಂಗಪ್ಪನವರು ದೇವರು ಧರ್ಮಗಳ ವಿರುದ್ಧ ಪ್ರಖರವಾಗಿ ಮಾತನಾಡುತ್ತಿದ್ದಂಥ ವ್ಯಕ್ತಿ. ಹೀಗಿದ್ದಾಗ ಸಿದ್ದಲಿಂಗಯ್ಯನವರು ಬಸವಲಿಂಗಪ್ಪನವರ ಪರವಾಗಿ ಬೆಂಬಲಿಸಿ ಸಭೆಗಳನ್ನು ಏರ್ಪಡಿಸಿದರು. ವಿದ್ಯಾರ್ಥಿಗಳ ಮಧ್ಯೆ ತೀವ್ರ ಘರ್ಷಣೆಯಾಗಿದ್ದೂ ಉಂಟು ಈ ವಿಷಯವಾಗಿ. ಆದರೆ ಸಿದ್ದಲಿಂಗಯ್ಯ ಇದೆಲ್ಲವನ್ನೂ ಧೈರ್ಯವಾಗಿ ಎದುರಿಸಿದರು. ಪ್ರಖರವಾದ ಚಿಂತನೆ ಧೈರ್ಯ ಪದವಿ ಓದುತ್ತಿರುವಾಗಲೇ ಇವರಲ್ಲಿತ್ತು.

ನಂತರ ಎಂಎ ಓದಲು ಸೆಂಟ್ರಲ್ ಕಾಲೇಜಿಗೆ ಸೇರಿದರು. ನಾನು ಕೂಡ ಅಲ್ಲಿಗೆ ಹೋದೆ. ಮತ್ತೆ ಒಂದು ವರ್ಷ ನನ್ನ ವಿದ್ಯಾರ್ಥಿಯಾದರು. ಅಲ್ಲಿಯೇ ಕೆಲಸಕ್ಕೂ ಸೇರಿ ಸಹೋದ್ಯೋಗಿಯೂ ಆದರು. ನಂತರ ಕನ್ನಡ ಅಧ್ಯಯನ ಪೀಠದ ನಿರ್ದೇಶಕರಾದರು. ದಲಿತ ಚಳವಳಿ, ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟುಹಾಕುವಲ್ಲಿ ಪ್ರಮುಖರೆನ್ನಿಸಿಕೊಂಡರು. 1979ರಲ್ಲಿ ಮೊದಲನೇ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಕಾಳೇಗೌಡ ನಾಗವಾರ, ಸಿಜಿಕೆ, ಡಿ. ಆರ್. ನಾಗರಾಜ್ ಸಂಚಾಲಕರಾಗಿದ್ದರು. ರಾಜ್ಯ ಸಂಚಾಲಕರಲ್ಲಿ ನಾನು ಇಂಧೂದರ, ಸಿದ್ದಲಿಂಗಯ್ಯ ಇದ್ದೆವು.

ಸಾಹಿತ್ಯ ಕ್ಷೇತ್ರದ ಒಳಗಡೆ ಹೊಲೆಮಾದಿಗರ ಹಾಡು, ಈ ಶೀರ್ಷಿಕೆಯೇ ಸಂಚಲನ ಉಂಟುಮಾಡಿತ್ತು ಆ ಕಾಲದಲ್ಲಿ. ಅನೇಕ ಹೋರಾಟದ ಹಾದಿಗಳಿಗೆ ಈ ಕೃತಿ ಸ್ಪೂರ್ತಿ ನೀಡಿತು. ಅಲ್ಲದೆ, ಇವರ ಮುಂದಿನ ಕೃತಿಗಳು ಸಾಹಿತ್ಯ ವಲಯದಲ್ಲಿಯೂ ವಿಮರ್ಶಕರ ಮೆಚ್ಚುಗೆ ಪಡೆಯುತ್ತ ಬಂದವು. ಪ್ರಖರ ಮಾತಿನೊಂದಿಗೆ ವಿಡಂಬನಾ ಪ್ರಜ್ಞೆ ಅವರಲ್ಲಿ ಸದಾ ಜಾಗೃತವಾಗಿರುತ್ತಿತ್ತು. ಊರು ಕೇರಿ, ಅವತಾರಗಳು ಇದನ್ನು ಓದಿದರೆ ಅವರ ವಿಡಂಬನೆ ಶಕ್ತಿ ಚೆನ್ನಾಗಿ ಅರ್ಥವಾಗುತ್ತದೆ. ಒಟ್ಟಾರೆಯಾಗಿ ಕಟ್ಟುವ ಕ್ರಿಯೆ ಅವರ ಒಳನೋಟಗಳಲ್ಲಿ ಇತ್ತು.

ಅವರ ಮದುವೆಗೆ ನಾನು ನನ್ನ ಶ್ರೀಮತಿ ಸಾಕ್ಷಿ. ರಮಾಕುಮಾರಿ ಕೂಡ ನನ್ನ ವಿದ್ಯಾರ್ಥಿ.  ಸಿದ್ದಲಿಂಗಯ್ಯ ಮತ್ತು ರಮಾಕುಮಾರಿಯವರ ಮದುವೆ ಪೋಷಕರ ಗಮನಕ್ಕೆ ತರದೆ ಆಗಬೇಕಿತ್ತು. ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಗೌರಿಬಿದನೂರಿನಲ್ಲಿ ಈ ವ್ಯವಸ್ಥೆ ಮಾಡಿದರು. ಅಲ್ಲಿಯ ಸಬ್​ ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಯಿತು. ನಂತರ ಸೀತಾರಾಮ ಅವರ ಮೂಲಮನೆಯಲ್ಲಿ ಊಟ ಮಾಡಿಕೊಂಡು ಮದುಮಕ್ಕಳೊಂದಿಗೆ ಬೆಂಗಳೂರಿಗೆ ಮರಳಿದೆವು.

ಎರಡೂ ಮನೆಯವರಿಗೆ ಈ ಮದುವೆಯ ಬಗ್ಗೆ ಒಪ್ಪಿಸುವಲ್ಲಿ ನನ್ನ ಹೆಂಡತಿಯ ಪಾತ್ರ ದೊಡ್ಡದು. ರಮಾಕುಮಾರಿ ತಂದೆ ತಾಯಿ ನಮ್ಮ ಮನೆಗೆ ಬರುತ್ತಿದ್ದರಿಂದ ಪರಿಚಯವಿತ್ತು. ಅಂತೂ ಇತ್ತ ಹೆಣ್ಣಿನವರಿಗೂ ಒಪ್ಪಿಸಿ, ಅತ್ತ ಗಂಡಿನವರಿಗೂ ಒಪ್ಪಿಸಿ ಹುಡುಗಿಯನ್ನು ಸಿದ್ದಲಿಂಗಯ್ಯನವರ ಮನೆಗೆ ಕಳುಹಿಸಿದ್ದಾಯಿತು. ಹಾಗಾಗಿ ಇವರ  ವೈಯಕ್ತಿಕ ಬದುಕಿನಲ್ಲಿಯೂ ನಮ್ಮ ಪಾತ್ರವಿದೆ. ಇತ್ತೀಚಿನ ದಿನಗಳಲ್ಲಿ ಸಂಪರ್ಕ ಕಡಿಮೆ ಇತ್ತು. ನಾನು ಸ್ವಯಂ  ನಿವೃತ್ತಿ ತೆಗೆದುಕೊಂಡೆ. ವಿಶ್ವವಿದ್ಯಾಲಯಕ್ಕೆ ಹೋಗುವುದು ಕಡಿಮೆ ಆಯಿತು. ಬಹಳ ಚಟುವಟಿಕೆಯ ವ್ಯಕ್ತಿ. ಕೊರೊನಾ ಸಂದರ್ಭದಲ್ಲಿಯೂ ಅನೇಕ ಸಮಾರಂಭಗಳಿಗೆ ಹೋಗುತ್ತಿದ್ದರು.

ಮುಂದೆ ಅವರು ಎಂಎಲ್​ಸಿ ಆದಾಗ ಜನತಾ ಸರ್ಕಾರ ಇತ್ತು. ಆಸ್ಥಾನಕ್ಕೆ ನನ್ನನ್ನೂ ಕೇಳಿದ್ದರು ಆದರೆ ನಾನು ಒಪ್ಪಲಿಲ್ಲ. ಆಗ ಬೇರೆ ಕಾರಣಗಳು ಇದ್ದವು. ಇವರು 12 ವರ್ಷ ಕಾರ್ಯ ನಿರ್ವಹಿಸಿದರು.  70ರ ದಶಕದದಿಂದ ಕಾಂಗ್ರೆಸ್ ಆಡಳಿತ ನಡೆಸುತ್ತ ಒಳ್ಳೆಯದನ್ನೂ ಮಾಡಿತ್ತು ಕೆಟ್ಟದ್ದನ್ನೂ. ಆದರೆ ನಮಗೆಲ್ಲ ಒಂದು ಬದಲಾವಣೆ ಬೇಕಿತ್ತು ಎನ್ನಿಸಿದ್ದು ನಿಜ. ಮುಂದೆ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದರು. ಯಡಿಯೂರಪ್ಪನವರನ್ನು ‘ಅಭಿನವ ಬಸವಣ್ಣ’ ಅಂತ ಬಣ್ಣಿಸಿದರು ಎಂಬುದಕ್ಕೆ ಅವರ ಆಪ್ತ ಮತ್ತು ಸಮಾನಮನಸ್ಕರಿಗೆ ಅಸಮಾಧಾನ ಉಂಟಾಯಿತು. ಇರಲಿ, ಇಂದಿಗೂ ಅವರು ನನ್ನ ಮನಸ್ಸಿನಲ್ಲಿ ಉಳಿದಿರುವುದು ತಮ್ಮ ಪ್ರಖರ ಚಿಂತನೆಗಳಿಂದ. ಆಪ್ತಭಾವದಿಂದ.

ಇದನ್ನೂ ಓದಿ :ಸಿದ್ದಲಿಂಗಯ್ಯ ನುಡಿನಮನ ; ಏನೋ ಬೆಳಕಿದೆ ಇವನಲ್ಲಿ ಅನ್ನಿಸಿಯೇ ನಾನು ಕೀರಂ ‘ಹೊಲೆಮಾದಿಗರ ಹಾಡು’ ಪ್ರಕಟಿಸಿದೆವು; ಡಾ.ವಿಜಯಾ

Published On - 8:55 pm, Fri, 11 June 21