
ರುದ್ರಾಕ್ಷಿಯು ಶಿವನ ಆಶೀರ್ವಾದದ ಸಂಕೇತ ಹಾಗೂ ಆಧ್ಯಾತ್ಮಿಕ ಶಕ್ತಿಯ ಮೂಲ ಎಂದು ನಂಬಲಾಗುತ್ತದೆ. ಆದರೆ ಹಲವು ವರ್ಷಗಳಿಂದ ಧರಿಸುತ್ತಿರುವ ರುದ್ರಾಕ್ಷಿ ಹಠಾತ್ತಾಗಿ ಮುರಿದಾಗ ಅಥವಾ ಬಿರುಕು ಬಿಟ್ಟಾಗ ಮನಸ್ಸಿನಲ್ಲಿ ಭಯ ಮತ್ತು ಆತಂಕ ಮೂಡುವುದು ಸಹಜ. ರುದ್ರಾಕ್ಷಿ ಒಡೆಯಲು ಕಾರಣಗಳೇನು, ಮುರಿದರೆ ಏನು ಮಾಡಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ರುದ್ರಾಕ್ಷಿಯು ಮರದಿಂದ ಸಿಗುವ ನೈಸರ್ಗಿಕ ಬೀಜವಾಗಿರುವುದರಿಂದ ಕಾಲಾನಂತರದಲ್ಲಿ ಮುರಿಯುವುದು ಸಹಜ. ತೇವಾಂಶದ ಕೊರತೆಯಿಂದಾಗಿ ಬೀಜ ಒಣಗುವುದು, ದೈನಂದಿನ ಬಳಕೆಯಿಂದಾಗುವ ಸವೆತ, ಬೆವರಿನ ಸಂಪರ್ಕ ಹಾಗೂ ದಾರದ ನಿರಂತರ ಘರ್ಷಣೆಯಿಂದ ಮಣಿ ದುರ್ಬಲಗೊಂಡು ಒಡೆಯುತ್ತದೆ. ಅಲ್ಲದೆ, ನಕಲಿ ಅಥವಾ ಕಡಿಮೆ ಗುಣಮಟ್ಟದ ರುದ್ರಾಕ್ಷಿಗಳು ಬಹುಬೇಗನೆ ಬಿರುಕು ಬಿಡುತ್ತವೆ.
ರುದ್ರಾಕ್ಷಿ ಒಡೆಯುವುದು ಅಪಶಕುನ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ರುದ್ರಾಕ್ಷಿಯು ಧರಿಸಿದ ವ್ಯಕ್ತಿಯ ಮೇಲಿದ್ದ ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡಾಗ ಅಥವಾ ಅದನ್ನು ಧರಿಸಿದ ಉದ್ದೇಶ ಪೂರ್ಣಗೊಂಡಾಗ ಮುರಿಯುತ್ತದೆ ಎಂದು ಭಾವಿಸಲಾಗುತ್ತದೆ. ಆದ್ದರಿಂದ ರುದ್ರಾಕ್ಷಿ ಒಡೆದ ತಕ್ಷಣ ಭಯಪಡುವ ಅಗತ್ಯವಿಲ್ಲ.
ಸಾಂಪ್ರದಾಯಿಕ ಪೂಜಾ ನಿಯಮಗಳ ಪ್ರಕಾರ, ಒಡೆದ ಅಥವಾ ಬಿರುಕು ಬಿಟ್ಟ ರುದ್ರಾಕ್ಷಿಯನ್ನು ಮತ್ತೆ ಧರಿಸಬಾರದು. ಹಳೆಯ ಹಾಗೂ ಮುರಿದ ಮಣಿಯನ್ನು ಗೌರವಯುತವಾಗಿ ಸಂರಕ್ಷಿಸಬೇಕು ಅಥವಾ ಸಾಂಪ್ರದಾಯಿಕ ಮಾರ್ಗಗಳಲ್ಲಿ ವಿಲೇವಾರಿ ಮಾಡಿ, ಹೊಸ ರುದ್ರಾಕ್ಷಿಯನ್ನು ಧರಿಸುವುದು ಸೂಕ್ತ.
ಇದನ್ನೂ ಓದಿ: ಮೊದಲ ಭೇಟಿಯಲ್ಲೇ ಎಲ್ಲರನ್ನೂ ಸೆಳೆಯುವ ಶಕ್ತಿ ಈ 3 ರಾಶಿಯವರಿಗಿದೆ; ಇವರ ಮೋಡಿಗೆ ಬೀಳದವರಿಲ್ಲ!
ರುದ್ರಾಕ್ಷಿಯನ್ನು ಪವಿತ್ರವೆಂದು ಪರಿಗಣಿಸುವುದರಿಂದ ಅದನ್ನು ಎಂದಿಗೂ ಕಸದ ಬುಟ್ಟಿಗೆ ಎಸೆಯಬಾರದು. ಅದನ್ನು ನದಿ ಅಥವಾ ಹರಿಯುವ ಶುದ್ಧ ನೀರಿನಲ್ಲಿ ವಿಸರ್ಜಿಸಬಹುದು. ಇಲ್ಲವೇ ತುಳಸಿ ಅಥವಾ ಅರಳಿ ಮರದಂತಹ ಪವಿತ್ರ ಗಿಡಗಳ ಬುಡದಲ್ಲಿ ಮಣ್ಣಿನಲ್ಲಿ ಹೂಳಬಹುದು ಅಥವಾ ಹತ್ತಿರದ ಶಿವನ ದೇವಾಲಯಕ್ಕೆ ನೀಡಿ ಅರ್ಪಿಸಬಹುದು.
ಸೋಮವಾರ ಅಥವಾ ಮಹಾ ಶಿವರಾತ್ರಿಯಂದು ಹೊಸ ರುದ್ರಾಕ್ಷಿಯನ್ನು ಧರಿಸುವುದು ಅತ್ಯಂತ ಶುಭ. ಧರಿಸುವ ಮೊದಲು ಅದನ್ನು ಗಂಗಾಜಲ ಅಥವಾ ಹಾಲಿನಿಂದ ಶುದ್ಧೀಕರಿಸಿ, ಶಿವನಿಗೆ ಪ್ರಾರ್ಥನೆ ಸಲ್ಲಿಸಿ, ‘ಓಂ ನಮಃ ಶಿವಾಯ’ ಮಂತ್ರವನ್ನು ಪಠಿಸುತ್ತಾ ಧಾರಣೆ ಮಾಡಬೇಕು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:53 am, Sat, 29 August 26