
2026ರ ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆಯ ಋತುವು ಆರಂಭವಾಗುತ್ತಿದ್ದು, ಈ ಬಾರಿ ಕೇದಾರನಾಥ ಮತ್ತು ಬದರಿನಾಥ ಧಾಮಗಳಿಗೆ ಭೇಟಿ ನೀಡುವ ಭಕ್ತರು ತಮ್ಮ ಪ್ರಯಾಣದ ಬಜೆಟ್ ಸ್ವಲ್ಪ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ಪೂಜಾ ಶುಲ್ಕಗಳನ್ನು ಪರಿಷ್ಕರಿಸಿದೆ ಮತ್ತು ಹೆಲಿಕಾಪ್ಟರ್ ಸೇವೆಗಳಿಗೂ ಹೊಸ ದರಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಸಾಮಾನ್ಯ ಭಕ್ತರಿಗೆ ಸಮಾಧಾನದ ಸಂಗತಿಯೆಂದರೆ, ದೇವಾಲಯಗಳಲ್ಲಿನ ಸಾಂಪ್ರದಾಯಿಕ ನಿಯಮಿತ ದರ್ಶನವು ಮೊದಲಿನಂತೆಯೇ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಹೆಲಿಕಾಪ್ಟರ್ ಸೇವೆಗಳಿಗಾಗಿ ಈ ವರ್ಷ ಹೊಸ ಟೆಂಡರ್ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿದ್ದು, ಒಟ್ಟು ಎಂಟು ನಿರ್ವಾಹಕರು ವಿವಿಧ ಮಾರ್ಗಗಳಲ್ಲಿ ಸೇವೆ ಒದಗಿಸಲಿದ್ದಾರೆ. ಹೊಸ ದರದ ಅನ್ವಯ, ಗುಪ್ತಕಾಶಿಯಿಂದ ಕೇದಾರನಾಥಕ್ಕೆ ಏಕಮುಖ ಪ್ರಯಾಣಕ್ಕೆ 6,077ರೂ., ಫಟಾದಿಂದ 4,840 ಮತ್ತು ಶಿರಸಿಯಿಂದ ರೂ. 3,043 ನಿಗದಿಪಡಿಸಲಾಗಿದೆ. ಈ ಬೆಲೆಗಳಿಗೆ ಜಿಎಸ್ಟಿ (GST) ಮತ್ತು ಆನ್ಲೈನ್ ಬುಕಿಂಗ್ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸುವುದರಿಂದ ಒಟ್ಟು ವೆಚ್ಚದಲ್ಲಿ ಏರಿಕೆಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಟಾ ಮಾರ್ಗದಲ್ಲಿ ಬೆಲೆ ಹೆಚ್ಚಳವು ಗಮನಾರ್ಹವಾಗಿದ್ದರೂ, ಶಿರಸಿ ಮಾರ್ಗದ ಪ್ರಯಾಣಿಕರಿಗೆ ದರವು ತುಲನಾತ್ಮಕವಾಗಿ ಸಮಾಧಾನಕರವಾಗಿದೆ.
ಕೇದಾರನಾಥ ದೇವಾಲಯದಲ್ಲಿ ವಿಶೇಷ ಪೂಜೆಗಳ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಒಂದು ದಿನದ ಪೂಜಾ ಶುಲ್ಕವನ್ನು 28,600 ರಿಂದ 51,00 ರೂ.ಗೆ ಹೆಚ್ಚಿಸಲಾಗಿದ್ದು, ಇದು ಸುಮಾರು ಶೇ.78 ರಷ್ಟು ಹೆಚ್ಚಳವಾಗಿದೆ. ಉಳಿದಂತೆ ಮಹಾಭಿಷೇಕಕ್ಕೆ 11,500, ರುದ್ರಾಭಿಷೇಕಕ್ಕೆ 7,500 ರೂ. ಮತ್ತು ಅಖಂಡ ಜ್ಯೋತಿ ಬೆಳಗಿಸಲು 5,100 ರೂ. ನಿಗದಿಪಡಿಸಲಾಗಿದೆ. ಭಕ್ತರು ಶಿವ ಸಹಸ್ರನಾಮ ಪಠಣಕ್ಕೆ 2,500 ಮತ್ತು ಬಾಲಾ ಭೋಗ್ ನೈವೇದ್ಯಕ್ಕೆ 1,500 ರೂ. ಪಾವತಿಸಬೇಕಾಗುತ್ತದೆ.
ಬದರಿನಾಥ ಧಾಮದಲ್ಲಿಯೂ ಸಹ ವಿವಿಧ ಧಾರ್ಮಿಕ ವಿಧಿವಿಧಾನಗಳ ಶುಲ್ಕವನ್ನು ಹೆಚ್ಚಿಸಲಾಗಿದೆ. ಇಲ್ಲಿ ಶ್ರೀಮದ್ ಭಾಗವತ ಕಥಾ ಶ್ರವಣದ ಶುಲ್ಕವನ್ನು 51,000 ರಿಂದ ನೇರವಾಗಿ 1,00,000ರೂ. ಕ್ಕೆ ಏರಿಸಲಾಗಿದೆ. ಹಾಗೆಯೇ ಮಹಾಭಿಷೇಕಕ್ಕೆ 5,500, ವೇದ ಮತ್ತು ಗೀತಾ ಪಠಣಕ್ಕೆ 6,000 ಹಾಗೂ ಅಖಂಡ ಜ್ಯೋತಿಗೆ 5,100 ನಿಗದಿಪಡಿಸಲಾಗಿದೆ. ಕಪೂರ್ ಆರತಿ ಮತ್ತು ಖೀರ್ ಭೋಗ್ನಂತಹ ಸೇವೆಗಳ ದರಗಳನ್ನೂ ಸಹ ಭಕ್ತರ ಅನುಕೂಲಕ್ಕೆ ತಕ್ಕಂತೆ ಪರಿಷ್ಕರಿಸಲಾಗಿದ್ದರೂ, ಒಟ್ಟಾರೆ ಪೂಜಾ ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?
ಈ ವರ್ಷ ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಲು ಯೋಜಿಸುತ್ತಿರುವ ಭಕ್ತರು, ತಮ್ಮ ಪ್ರಯಾಣದ ಯೋಜನೆಯನ್ನು ಸಿದ್ಧಪಡಿಸುವಾಗ ಈ ಹೊಸ ದರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ವಿಶೇಷ ಪೂಜೆಗಳನ್ನು ಮಾಡಿಸಲು ಇಚ್ಛಿಸುವವರು ಮತ್ತು ಹೆಲಿಕಾಪ್ಟರ್ ಸೇವೆಯನ್ನು ಬಳಸುವವರು ಹೆಚ್ಚುವರಿ ಜಿಎಸ್ಟಿ ಮತ್ತು ಸೇವಾ ತೆರಿಗೆಗಳನ್ನು ಒಳಗೊಂಡಂತೆ ವೆಚ್ಚವನ್ನು ಅಂದಾಜು ಮಾಡಿಕೊಳ್ಳಬೇಕು. ದರಗಳಲ್ಲಿ ಏರಿಕೆಯಾಗಿದ್ದರೂ, ಯಾತ್ರೆಯ ಪಾವಿತ್ರ್ಯತೆ ಮತ್ತು ಭಕ್ತರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಸುಗಮಗೊಳಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ