Dvimukhi Rudraksha: ದ್ವಿಮುಖ ರುದ್ರಾಕ್ಷಿ ಧಾರಣೆಯಿಂದ ಸಿಗುವ ಲಾಭ ಮತ್ತು ಆಧ್ಯಾತ್ಮಿಕ ಪ್ರಭಾವ
ದ್ವಿಮುಖ ರುದ್ರಾಕ್ಷಿ ಚಂದ್ರನ ಹಾಗೂ ಅರ್ಧನಾರೀಶ್ವರನ ಪ್ರತೀಕವಾಗಿದ್ದು, ತಾಳ್ಮೆ, ಮಾನಸಿಕ ನೆಮ್ಮದಿ ಮತ್ತು ಸಹನೆಗೆ ಸಹಕಾರಿ. ಇದು ಕೋಪವನ್ನು ಕಡಿಮೆ ಮಾಡಿ ಕುಂಡಲಿನಿ ಶಕ್ತಿಯ ಜಾಗೃತಿಗೆ ನೆರವಾಗುತ್ತದೆ. ನಿವೃತ್ತ ನೌಕರರಿಗೆ ಹಾಗೂ ಮಾನಸಿಕ ಶಾಂತಿ ಬಯಸುವವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದನ್ನು ಸೋಮವಾರದಂದು ಶಿವನ ಸನ್ನಿಧಿಯಲ್ಲಿ ನಿಯಮಾನುಸಾರ ಧಾರಣೆ ಮಾಡಬೇಕು ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ದ್ವಿಮುಖ ರುದ್ರಾಕ್ಷಿಯ ಮಹತ್ವ, ಪ್ರಯೋಜನಗಳು ಮತ್ತು ಧಾರಣಾ ವಿಧಿಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದ್ದಾರೆ. ರುದ್ರಾಕ್ಷಿಗಳು ಏಕಮುಖದಿಂದ ಹಿಡಿದು 24 ಮುಖಗಳವರೆಗೆ ಲಭ್ಯವಿವೆ. ಪ್ರತಿಯೊಂದು ರುದ್ರಾಕ್ಷಿಯೂ ತನ್ನದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿದೆ. ಇವುಗಳಲ್ಲಿ ದ್ವಿಮುಖ ರುದ್ರಾಕ್ಷಿಯು ಚಂದ್ರನ ಪ್ರತೀಕವಾಗಿದೆ. ಏಕಮುಖ ರುದ್ರಾಕ್ಷಿ ಸೂರ್ಯನ ಪ್ರತೀಕವಾಗಿದ್ದರೆ, ದ್ವಿಮುಖ ರುದ್ರಾಕ್ಷಿಯು ಚಂದ್ರನ ಪ್ರಭಾವವನ್ನು ಹೊಂದಿರುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.
ದ್ವಿಮುಖ ರುದ್ರಾಕ್ಷಿಯ ಮುಖ್ಯ ಪ್ರಯೋಜನಗಳೆಂದರೆ ತಾಳ್ಮೆ, ಸಹನೆ, ಮಾನಸಿಕ ಸಂತೃಪ್ತಿ ಮತ್ತು ನೆಮ್ಮದಿ. ಇದನ್ನು ಧರಿಸುವುದರಿಂದ ಹಣ ಬಂದೇ ಬರುತ್ತದೆ ಎಂಬುದು ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಲಾಯಿತು. ಬದಲಾಗಿ, ರುದ್ರಾಕ್ಷಿ ಧಾರಣೆಯಿಂದ ದೇಹದಲ್ಲಿರುವ ಅಗ್ನಿ, ವಾಯು ಮತ್ತು ಜಲಭೂತಗಳು ಜಾಗೃತಗೊಂಡು ಮನಸ್ಸನ್ನು ಶುದ್ಧೀಕರಿಸುತ್ತವೆ. ಇದರಿಂದ ಸಕಾರಾತ್ಮಕ ಶಕ್ತಿಯು ವೃದ್ಧಿಸುತ್ತದೆ ಮತ್ತು ಮಾಡುವ ಕೆಲಸದಲ್ಲಿ ಯಶಸ್ಸು ಸಾಧಿಸಲು ನೆರವಾಗುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
ಈ ರುದ್ರಾಕ್ಷಿಯು ಅರ್ಧನಾರೀಶ್ವರನ ಪ್ರತೀಕವಾಗಿದ್ದು, ಶಿವ ಮತ್ತು ಪಾರ್ವತಿಯ ಅಂಶಗಳನ್ನು ಒಳಗೊಂಡಿದೆ. ಸ್ತ್ರೀಲಿಂಗ ಮತ್ತು ಪುಲ್ಲಿಂಗದ ಸಮ್ಮಿಲನವನ್ನು ಇದು ಪ್ರತಿನಿಧಿಸುತ್ತದೆ. ಇದು ವಿಶೇಷವಾದ ರುದ್ರಾಕ್ಷಿಯಾಗಿದ್ದು, ಎಲ್ಲರೂ ಇದನ್ನು ಧರಿಸಬಹುದಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಿವೃತ್ತ ನೌಕರರು ಮತ್ತು 50 ವರ್ಷ ದಾಟಿದವರಿಗೆ ಇದು ಬಹಳ ಉತ್ತಮ ಎಂದು ಹೇಳಲಾಗಿದೆ. ವಯಸ್ಸಾದಂತೆ ಬರುವ ಕೋಪ, ಅಸಮಾಧಾನ ಮತ್ತು ಮಾನಸಿಕ ಅಶಾಂತಿಯನ್ನು ಕಡಿಮೆ ಮಾಡಲು ಇದು ಸಹಕಾರಿ. ಇದನ್ನು ಧರಿಸುವುದರಿಂದ ತಾಮಸ ಗುಣ ಅಂದರೆ ಕೋಪದ ಗುಣ ಕಡಿಮೆಯಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.
ಇದನ್ನೂ ಓದಿ: ತುಳಸಿ ಮಾಲೆ ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
ದ್ವಿಮುಖ ರುದ್ರಾಕ್ಷಿಯು ಕುಂಡಲಿನಿ ಶಕ್ತಿಯ ಜಾಗೃತಿಗೆ ಸಹಾಯ ಮಾಡುತ್ತದೆ. ಇದರಿಂದ ಸಪ್ತ ಚಕ್ರಗಳು ಸಕ್ರಿಯಗೊಂಡು ಮಾನಸಿಕ ಶಾಂತಿ ಲಭಿಸುತ್ತದೆ. ಇದು ಅನೇಕ ಕಾಯಿಲೆಗಳಿಂದ ಮುಕ್ತಿ ನೀಡಲು ಕೂಡ ನೆರವಾಗುತ್ತದೆ, ಉದಾಹರಣೆಗೆ ಮೂರ್ಛೆ ಕಾಯಿಲೆ, ದೇಹದ ತಣ್ಣಗಾಗುವಿಕೆ, ಮಾನಸಿಕ ತೃಪ್ತಿಯ ಕೊರತೆ ಇತ್ಯಾದಿ. ದೇಹದಲ್ಲಿ ನೀರಿನ ಅಂಶ ಕಡಿಮೆ ಇರುವವರು, ಪದೇ ಪದೇ ಗರ್ಭಪಾತವಾಗುವ ಮಹಿಳೆಯರು ಮತ್ತು ಶೀತ ರೋಗ, ನೆಗಡಿ, ಮೂಗಿನ ತೊಂದರೆಯಿಂದ ಬಳಲುವವರಿಗೂ ಇದು ಪ್ರಯೋಜನಕಾರಿ. ಇದು ವೈಜ್ಞಾನಿಕ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ಉತ್ತಮ ಪರಿಣಾಮ ಬೀರುತ್ತದೆ.
ದ್ವಿಮುಖ ರುದ್ರಾಕ್ಷಿಯನ್ನು ಧಾರಣೆ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಇದನ್ನು ಸಾಧ್ಯವಾದಷ್ಟು ಸೋಮವಾರದ ಸಂಧ್ಯಾಕಾಲದಲ್ಲಿ, ಗೋದೋಳಿ ಮುಹೂರ್ತದಲ್ಲಿ ಶಿವನ ದೇವಸ್ಥಾನದಲ್ಲಿ ಧರಿಸಬೇಕು. ಶುಕ್ಲಪಕ್ಷದ ಸೋಮವಾರವು ಹೆಚ್ಚು ಸೂಕ್ತ. ರುದ್ರಾಕ್ಷಿಯನ್ನು ಧರಿಸುವ ಮೊದಲು ಶುದ್ಧ ಜಲ, ಹಾಲು, ಮೊಸರು ಮತ್ತು ಜೇನುತುಪ್ಪದಿಂದ ಅಭಿಷೇಕ ಮಾಡಿ, ನಂತರ ದೇವರ ಪಕ್ಕದಲ್ಲಿಟ್ಟು ಪ್ರಾರ್ಥಿಸಬೇಕು. ದ್ವಿಮುಖ ರುದ್ರಾಕ್ಷಿ ಧಾರಣೆ ಮಾಡುವವರು ಕನಿಷ್ಠ 108 ಬಾರಿ “ಓಂ ನಮಃ ರುದ್ರಾಯ” ಮಂತ್ರವನ್ನು ಜಪಿಸಬೇಕು. ಇದರಿಂದ ಶಾಂತಿ, ನೆಮ್ಮದಿ ಮತ್ತು ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




