ಈ ದೇವಾಲಯದಲ್ಲಿ ಶಿವನು ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತಾನೆ!

ಸ್ತಂಭೇಶ್ವರ ಮಹಾದೇವ ದೇವಾಲಯವು ಗುಜರಾತ್​​​ನ ಭರೂಚ್ ಜಿಲ್ಲೆಯ ಸಮುದ್ರ ತೀರದಲ್ಲಿದೆ. ಇದು ದಿನಕ್ಕೆ ಎರಡು ಬಾರಿ ತನ್ನ ಸ್ಥಳದಿಂದ ಕಣ್ಮರೆಯಾಗುತ್ತದೆ. ಈ ಕಾರಣದಿಂದಾಗಿ ಈ ವಿಶಿಷ್ಟ ದೇವಾಲಯವನ್ನು ಕಣ್ಮರೆಯಾಗುವ ದೇವಾಲಯ ಎಂದೂ ಕೂಡ ಕರೆಯಲಾಗುತ್ತದೆ. ವಾಸ್ತವವಾಗಿ, ದೇವಾಲಯದ ಕಣ್ಮರೆಯ ಹಿಂದೆ ಯಾವುದೇ ಪವಾಡವಿಲ್ಲ, ಆದರೆ ಪ್ರಕೃತಿಯ ಸುಂದರ ವಿದ್ಯಮಾನವಿದೆ. ಈ ದೇವಾಲಯಕ್ಕೆ ಸುಮಾರು 200 ವರ್ಷಗಳ ಹಿಂದಿನ ಇತಿಹಾಸವೂ ಇದೆ.

ಈ ದೇವಾಲಯದಲ್ಲಿ ಶಿವನು ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತಾನೆ!
ಸ್ತಂಭೇಶ್ವರ ಮಹಾದೇವ ದೇವಸ್ಥಾನ
Edited By:

Updated on: Feb 06, 2024 | 10:28 AM

ದೇಶಾದ್ಯಂತ ಶಿವನ ಅನೇಕ ಪ್ರಾಚೀನ ದೇವಾಲಯಗಳಿವೆ. ಅದು ನಿಮಗೂ ಗೊತ್ತು! ಈ ಎಲ್ಲಾ ದೇವಾಲಯಗಳು ತಮ್ಮದೇ ಆದ ಪೌರಾಣಿಕ ಇತಿಹಾಸವನ್ನು ಕೂಡ ಹೊಂದಿವೆ. 12 ಜ್ಯೋತಿರ್ಲಿಂಗಗಳ ಬಗ್ಗೆ ನೀವು ಕೇಳಿರಬಹುದು, ಆದರೆ ಹಗಲಿನಲ್ಲಿ ಕಣ್ಮರೆಯಾಗುವ ಭೋಲೆನಾಥ ದೇವಾಲಯದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಅಷ್ಟೇ ಅಲ್ಲ, ಇಲ್ಲಿರುವ ಶಿವಲಿಂಗಕ್ಕೆ ಸಮುದ್ರದ ಅಲೆಗಳೇ ಜಲಾಭಿಷೇಕ ಮಾಡುತ್ತವೆ. ಇಲ್ಲಿರುವ ವಿಶೇಷತೆಗಳಿಂದಲೇ ಈ ದೇವಾಲಯ ಯಾವಾಗಲೂ ಚರ್ಚೆಯಲ್ಲಿರುತ್ತದೆ. ಜೊತೆಗೆ ಈ ಕಾರಣದಿಂದಾಗಿ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಷ್ಟೆಲ್ಲಾ ತಿಳಿದ ಮೇಲೆ ದೇವಸ್ಥಾನದ ಬಗ್ಗೆಯೂ ತಿಳಿಯಬೇಕಲ್ಲವೇ? ಈ ದೇವಸ್ಥಾನ, ಗುಜರಾತ್​​ನ ವಡೋದರಾದಲ್ಲಿರುವ ಸ್ತಂಭೇಶ್ವರ ಮಹಾದೇವನ ದೇವಾಲಯ. ಇಲ್ಲಿರುವ ದೇವರು ಕಣ್ಮರೆಯಾಗುವುದರ ಹಿಂದಿನ ರಹಸ್ಯವೇನು ಎಂಬುದರ ಬಗ್ಗೆ ಸವಿವರವಾಗಿ ತಿಳಿಯೋಣ.

ದೇವಾಲಯವೇ ಕಣ್ಮರೆಯಾಗುತ್ತೆ!

ಸ್ತಂಭೇಶ್ವರ ಮಹಾದೇವ ದೇವಾಲಯವು ಗುಜರಾತ್​​​ನ ಭರೂಚ್ ಜಿಲ್ಲೆಯ ಸಮುದ್ರ ತೀರದಲ್ಲಿದೆ. ಇದು ದಿನಕ್ಕೆ ಎರಡು ಬಾರಿ ತನ್ನ ಸ್ಥಳದಿಂದ ಕಣ್ಮರೆಯಾಗುತ್ತದೆ. ಈ ಕಾರಣದಿಂದಾಗಿ ಈ ವಿಶಿಷ್ಟ ದೇವಾಲಯವನ್ನು ಕಣ್ಮರೆಯಾಗುವ ದೇವಾಲಯ ಎಂದೂ ಕೂಡ ಕರೆಯಲಾಗುತ್ತದೆ. ವಾಸ್ತವವಾಗಿ, ದೇವಾಲಯದ ಕಣ್ಮರೆಯ ಹಿಂದೆ ಯಾವುದೇ ಪವಾಡವಿಲ್ಲ, ಆದರೆ ಪ್ರಕೃತಿಯ ಸುಂದರ ವಿದ್ಯಮಾನವಿದೆ. ಈ ದೇವಾಲಯಕ್ಕೆ ಸುಮಾರು 200 ವರ್ಷಗಳ ಹಿಂದಿನ ಇತಿಹಾಸವೂ ಇದೆ.

ಈ ಮಂದಿರವು ಸಮುದ್ರ ತೀರದಲ್ಲಿರುವುದರಿಂದ, ಅಲ್ಲಿ ಉಬ್ಬರ ಇಳಿತ ಹೆಚ್ಚಾದಾಗ, ಇಡೀ ದೇವಾಲಯವು ಸಮುದ್ರದಲ್ಲಿ ಮುಳುಗುತ್ತದೆ. ಹಾಗಾಗಿ ಇಲ್ಲಿನ ಜನರು ಸಮುದ್ರದ ಉಬ್ಬರ ಕಡಿಮೆಯಾದ ನಂತರವೇ ದೇವರ ಪೂಜೆಗೆ ತೆರಳುತ್ತಾರೆ. ಇಂತಹ ನೈಸರ್ಗಿಕ ಚಟುವಟಿಕೆಗಳು ಶತಮಾನಗಳಿಂದ ನಡೆಯುತ್ತಾ ಬಂದಿದೆ. ಉಬ್ಬರವಿಳಿತದ ಸಮಯದಲ್ಲಿ ಏರುವ ನೀರಿನ ಅಲೆಗಳು ದೇವಾಲಯದಲ್ಲಿ ಮಹಾದೇವನ ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತವೆ. ವಿಶೇಷವೆಂದರೆ ಈ ಘಟನೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಡೆಯುತ್ತದೆ.

ಇದನ್ನೂ ಓದಿ: ಫೆಬ್ರವರಿ ತಿಂಗಳ ಮೊದಲ ಪ್ರದೋಷ ವ್ರತದ ದಿನಾಂಕ ಮತ್ತು ಸಮಯ ಇಲ್ಲಿದೆ

ಇಲ್ಲಿನ ಇತಿಹಾಸವೇನು?

ಈ ದೇವಾಲಯದ ನಿರ್ಮಾಣದ ಕಥೆಯನ್ನು ಸ್ಕಂದ ಪುರಾಣದಲ್ಲಿ ವಿವರಿಸಲಾಗಿದೆ. ತಾರಕಾಸುರನು ಶಿವನಿಗಾಗಿ ಬಹಳ ಕಠಿಣ ತಪಸ್ಸು ಮಾಡಿದ್ದನೆಂದು ಹೇಳಲಾಗುತ್ತದೆ, ಈ ಕಾರಣದಿಂದಾಗಿ ಭಗವಾನ್ ಭೋಲೆನಾಥನು ಸಂತೋಷಗೊಂಡು ಅವನಿಗೆ ವರವನ್ನು ನೀಡಿದ್ದನಂತೆ. ಆ ವರದ ಪ್ರಕಾರ ತಾರಕಾಸುರನನ್ನು ಆರು ತಿಂಗಳ ಒಳಗಿನ ಮಗು ಮಾತ್ರ ಕೊಲ್ಲಬಹುದಾಗಿರುತ್ತದೆ. ಶಿವನಿಂದ ವರ ಪಡೆದ ನಂತರ ತಾರಕಾಸುರ ಎಲ್ಲೆಡೆ ತನ್ನ ಭಯ ಹುಟ್ಟಿಸಿ, ಎಲ್ಲಾ ದೇವಾನುದೇವತೆಗಳಿಗೆ ಮತ್ತು ಋಷಿಗಳಿಗೆ ತೊಂದರೆ ನೀಡಲು ಪ್ರಾರಂಭಿಸುತ್ತಾನಂತೆ. ರಾಕ್ಷಸನ ಅಟ್ಟಹಾಸಕ್ಕೆ ತೊಂದರೆ ಅನುಭವಿಸಿದ ಎಲ್ಲಾ ದೇವತೆಗಳು ಮತ್ತು ಋಷಿಗಳು ವಿಷ್ಣುವಿನ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರಂತೆ. ಬಳಿಕ ವಿಷ್ಣುವಿನ ಅಣತಿಯ ಮೇರೆಗೆ ಕೇವಲ 6 ದಿನದವನಾದ ಕಾರ್ತಿಕೇಯನು, ತಾರಕಾಸುರ ಎಂಬ ರಾಕ್ಷಸನನ್ನು ಮಟ್ಟ ಹಾಕಿದನಂತೆ. ನಂತರ, ತಾರಕಾಸುರನು ಭಗವಾನ್ ಶಂಕರನ ಭಕ್ತನೆಂದು ತಿಳಿದಾಗ, ಕಾರ್ತಿಕೇಯನಿಗೆ ಸಾಕಷ್ಟು ನಿರಾಶೆಯಾಗುತ್ತದಂತೆ. ಈ ಪಾಪದಿಂದ ಮುಕ್ತಿ ಪಡೆಯಲು, ರಾಕ್ಷಸನನ್ನು ಕೊಂದ ಸ್ಥಳದಲ್ಲಿ ಶಿವ ದೇವಾಲಯವನ್ನು ನಿರ್ಮಿಸಬೇಕೆಂದು ವಿಷ್ಣು, ಕಾರ್ತಿಕೇಯನಿಗೆ ಹೇಳುತ್ತಾನಂತೆ. ಆ ಬಳಿಕ ಎಲ್ಲಾ ದೇವತೆಗಳು ಒಟ್ಟಾಗಿ ಮಹಿಸಾಗರ ಸಂಗಮ ತೀರ್ಥದಲ್ಲಿ ವಿಶ್ವಾನಂದಕ ಸ್ತಂಭವನ್ನು ಸ್ಥಾಪಿಸಿದರಂತೆ. ಹಾಗಾಗಿ ಇದನ್ನೇ ಇಂದು ಸ್ತಂಭೇಶ್ವರ ತೀರ್ಥ ಎಂದು ಕರೆಯಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us