
ನಮ್ಮ ದೈನಂದಿನ ಜೀವನದಲ್ಲಿ ಸಿಹಿ ಮತ್ತು ಖಾರವಾದ ಆಹಾರಕ್ಕೆ ವಿಭಿನ್ನ ಪ್ರಾಮುಖ್ಯತೆಯಿದೆ. ಕೆಲವರು ಸಿಹಿ ಆಹಾರವನ್ನು ಹೆಚ್ಚು ಇಷ್ಟಪಟ್ಟರೆ, ಮತ್ತೆ ಕೆಲವರು ಖಾರದ ಆಹಾರಕ್ಕೆ ಆದ್ಯತೆ ನೀಡುತ್ತಾರೆ. ಈ ಆಹಾರದ ಆಯ್ಕೆ ನಮ್ಮ ಜಾತಕದಲ್ಲಿರುವ ಗ್ರಹಗಳ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಸಿಹಿ ಆಹಾರವನ್ನು ಹೆಚ್ಚು ಇಷ್ಟಪಡುವವರ ಮೇಲೆ ಮುಖ್ಯವಾಗಿ ಗುರು ಗ್ರಹ (ಬೃಹಸ್ಪತಿ) ಮತ್ತು ಶುಕ್ರ ಗ್ರಹಗಳ ಪ್ರಭಾವವಿರುತ್ತದೆ. ಈ ಗ್ರಹಗಳ ಅನುಗ್ರಹದಿಂದಾಗಿ, ಸಿಹಿ ಪ್ರಿಯರು ಸಾಮಾನ್ಯವಾಗಿ ಕೆಲವು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಇವರು ಸಾತ್ವಿಕ ಸ್ವಭಾವದವರು, ನಿಧಾನವಾಗಿ ಮಾತನಾಡುವವರು, ತಾಳ್ಮೆ ಮತ್ತು ಸೌಮ್ಯತೆಯನ್ನು ಹೊಂದಿರುತ್ತಾರೆ. ಯಾವುದೇ ಕಷ್ಟದ ಸಂದರ್ಭದಲ್ಲಿ ಗಲಿಬಿಲಿಗೊಳ್ಳದೆ, ಯೋಚನಾಶಕ್ತಿಯಿಂದ ವರ್ತಿಸುತ್ತಾರೆ. ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ವಿವಾಹ ವಿಷಯಗಳಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಇವರಲ್ಲಿ ಕಲೆ ಮತ್ತು ಪ್ರತಿಭೆ ಹೆಚ್ಚಾಗಿರುತ್ತದೆ. ಜೀವನದಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚುವ ಪ್ರವೃತ್ತಿ ಹೊಂದಿರುತ್ತಾರೆ. ಕೆಲವೊಮ್ಮೆ ಸಾಧಕರಾಗಿದ್ದರೂ, ಅದೃಷ್ಟವನ್ನು ಸರಿಯಾಗಿ ಬಳಸಿಕೊಳ್ಳದಿರುವ ಸಾಧ್ಯತೆಯೂ ಇರುತ್ತದೆ. ಇವರು ಬೇರೆಯವರ ಅಧೀನದಲ್ಲಿ ಇರಲು ಇಷ್ಟಪಡುವುದಿಲ್ಲ.
ಖಾರವಾದ ಆಹಾರವನ್ನು ಇಷ್ಟಪಡುವವರ ಮೇಲೆ ಕುಜ ಗ್ರಹ (ಮಂಗಳ) ಮತ್ತು ರವಿ ಗ್ರಹಗಳ (ಸೂರ್ಯ) ಪ್ರಭಾವ ಹೆಚ್ಚಾಗಿರುತ್ತದೆ. ಇಂತಹ ವ್ಯಕ್ತಿಗಳು ಶಕ್ತಿವಂತರು, ಧೈರ್ಯವಂತರು ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧರಿರುತ್ತಾರೆ. ಇವರಲ್ಲಿ ಒಂದು ಪ್ರಮುಖ ಗುಣವೆಂದರೆ ಬೇಗ ನಿರ್ಧಾರ ತೆಗೆದುಕೊಳ್ಳುವುದು. ಕೆಲವೊಮ್ಮೆ ಇದು ಆತುರದ ನಿರ್ಧಾರಗಳಾಗಿ ಮಾರ್ಪಟ್ಟು ಜೀವನದಲ್ಲಿ ಅಡೆತಡೆಗಳಿಗೆ ಕಾರಣವಾಗಬಹುದು. ಖಾರ ಪ್ರಿಯರು ನೇರವಾಗಿ ಮಾತನಾಡುವವರು, ಸ್ಪಷ್ಟವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು ಆಗಿರುತ್ತಾರೆ. ಕೋಪ ಹೆಚ್ಚಾಗಿದ್ದರೂ, ಹೋರಾಟದ ಮನೋಭಾವ ಹೊಂದಿರುತ್ತಾರೆ. ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಪ್ರವೃತ್ತಿ ಇವರಲ್ಲಿ ಕಂಡುಬರುತ್ತದೆ.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?
ಜೀವನದಲ್ಲಿ ಸಿಹಿ ಮತ್ತು ಖಾರ ಎರಡೂ ಅವಶ್ಯಕ. ಬೇವಿನ-ಬೆಲ್ಲ, ಎಳ್ಳು-ಬೆಲ್ಲದಂತಹ ಸಂಪ್ರದಾಯಗಳು ಈ ಸಮತೋಲನದ ಮಹತ್ವವನ್ನು ಸಾರುತ್ತವೆ. ಪೂರ್ವಿಕರು ಹಬ್ಬಗಳಲ್ಲಿ ಇಂತಹ ಆಹಾರ ಪದ್ಧತಿಗಳನ್ನು ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಮತ್ತು ಸಾಮಾಜಿಕವಾಗಿ ಆಯಾ ಕಾಲಕ್ಕೆ ತಕ್ಕಂತೆ ರೂಪಿಸಿದ್ದಾರೆ. ಕೇವಲ ಸಿಹಿ ಅಥವಾ ಕೇವಲ ಖಾರ ಸೇವಿಸುವುದರಿಂದ ದೇಹಕ್ಕೆ ಸಂಪೂರ್ಣ ಪೋಷಣೆ ದೊರೆಯುವುದಿಲ್ಲ. ಸಮತೋಲಿತ ಆಹಾರ ಸೇವನೆ ದೇಹಕ್ಕೆ ಅತ್ಯಗತ್ಯ. ಸಿಹಿ ಮತ್ತು ಖಾರದ ಆಹಾರದ ಆಯ್ಕೆಯು ನಮ್ಮ ಶರೀರದಲ್ಲಿರುವ ರಜೋಗುಣ, ತಮೋಗುಣ ಮತ್ತು ಸಾತ್ವಿಕ ಗುಣಗಳನ್ನು ಪ್ರಜ್ವಲಿಸಲು ಮತ್ತು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ