ಹುಲಿ ಉಗುರು, ನರಿ ಹಲ್ಲು ಬಳಸುವ ಬಗ್ಗೆ ಶಾಸ್ತ್ರಗಳಲ್ಲಿ ಆಧಾರ ಇದೆಯಾ? ಜ್ಯೋತಿಷ್ಯ ಮತ್ತು ಶಾಸ್ತ್ರ ಏನು ಹೇಳುತ್ತದೆ?
Tiger Claw Pendant Row: ಹುಲಿ ಉಗುರನ್ನು ಬಳಿಯಿಟ್ಟುಕೊಂಡರೆ ಅದನ್ನು ಧರಿಸಿದ ವ್ಯಕ್ತಿಗೆ ರಕ್ಷಣೆ, ಬಲ, ಶ್ರೇಯಸ್ಸು ಅನ್ನೋದು ಯಾರೋ ಕೆಲವರು ಹಬ್ಬಿಸಿದ ಹಾಗೂ ಹಬ್ಬಿಸುತ್ತಾ ಇರುವ ವದಂತಿ. ಇದಕ್ಕೆ ಯಾವುದೇ ಶಾಸ್ತ್ರದಲ್ಲೂ ಉಲ್ಲೇಖ ಇಲ್ಲ, ಪ್ರಮಾಣ ಇಲ್ಲ, ಗ್ರಂಥ, ಪುರಾಣಗಳಲ್ಲಿ ಪ್ರಸ್ತಾವ ಇಲ್ಲ, ಎನ್ನುತ್ತಲೇ ಟಿವಿ9 ಕನ್ನಡ ವೆಬ್ ಸೈಟ್ ಜತೆಗೆ ಮಾತಿಗೆ ಆರಂಭ ಮಾಡಿದರು ಉಡುಪಿ ಜಿಲ್ಲೆಯ ಕಾಪುವಿನ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ

ಹುಲಿ ಉಗುರನ್ನು ಬಳಿಯಿಟ್ಟುಕೊಂಡರೆ ಅದನ್ನು ಧರಿಸಿದ ವ್ಯಕ್ತಿಗೆ ರಕ್ಷಣೆ, ಬಲ, ಶ್ರೇಯಸ್ಸು ಅನ್ನೋದು ಯಾರೋ ಕೆಲವರು ಹಬ್ಬಿಸಿದ ಹಾಗೂ ಹಬ್ಬಿಸುತ್ತಾ ಇರುವ ವದಂತಿ. ಇದಕ್ಕೆ ಯಾವುದೇ ಶಾಸ್ತ್ರದಲ್ಲೂ ಉಲ್ಲೇಖ ಇಲ್ಲ, ಪ್ರಮಾಣ ಇಲ್ಲ, ಗ್ರಂಥ, ಪುರಾಣಗಳಲ್ಲಿ ಪ್ರಸ್ತಾವ ಇಲ್ಲ, ಎನ್ನುತ್ತಲೇ ಟಿವಿ9 ಕನ್ನಡ ವೆಬ್ ಸೈಟ್ ಜತೆಗೆ ಮಾತಿಗೆ ಆರಂಭ ಮಾಡಿದರು ಉಡುಪಿ ಜಿಲ್ಲೆಯ ಕಾಪುವಿನ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ. ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ವರ್ತೂರ್ ಸಂತೋಷ್ ಅವರನ್ನು ಹುಲಿ ಉಗುರನ್ನು ಧರಿಸಿದ್ದರು ಎಂದು ಬಂಧಿಸಿದ ನಂತರ ಹೀಗೊಂದು ವಿಚಾರ ಚರ್ಚೆಯಲ್ಲಿದೆ.
ಹಾಗಿದ್ದಲ್ಲಿ ಈ ಹುಲಿ ಉಗುರು ಧರಿಸಬೇಕು ಎನ್ನುವ ವಿಚಾರ ಬಂದಿದ್ದಾದರೂ ಎಲ್ಲಿಂದ ಇರಬಹುದು ಎಂದು ಅವರನ್ನೇ ಮರು ಪ್ರಶ್ನಿಸಲಾಯಿತು. ಅದಕ್ಕೆ ಉತ್ತರಿಸಿದ ಅವರು, ಕಾಡಂಚಿನಲ್ಲಿ ಅಥವಾ ವನ್ಯಮೃಗಗಳ ಸಂಚಾರ ಇರುವ ಕಡೆಗಳಲ್ಲಿ ಇರುವಂಥ ಜನರು ಹಿಂದೆಲ್ಲಾ ಒಂದು ಹುಲಿ ಸತ್ತ ನಂತರ ಅದರ ಉಗುರು, ಹಲ್ಲು ಇಂಥದ್ದನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಏಕೆಂದರೆ, ಪ್ರಾಣಿಗಳಿಗೆ ವಾಸನಾ ಗ್ರಹಣ ಶಕ್ತಿ ವಿಪರೀತ ಹೆಚ್ಚು. ಹುಲಿಯ ಉಗುರು, ಹಲ್ಲು ಇತ್ಯಾದಿಗಳು ಇರುವ ಸ್ಥಳವನ್ನು ಹುಲಿ ಇರುವ ಸ್ಥಳ ಅಂತಲೇ ಅಂದುಕೊಂಡು, ಉಳಿದ ಕ್ರೂರ ಪ್ರಾಣಿಗಳು ಆ ಕಡೆಗೆ ಹೋಗುತ್ತಿರಲಿಲ್ಲ. ಆದ್ದರಿಂದ ಅದನ್ನು ಇಟ್ಟುಕೊಳ್ಳುತ್ತಿದ್ದರು. ನೆನಪಿರಲಿ, ಅದಕ್ಕೆ ಚಿನ್ನದ್ದೇನೋ ಮಾಡಿಸಿ, ಸರ ಮಾಡಿಯೆಲ್ಲ ಏನೂ ಹಾಕಿಕೊಳ್ಳುತ್ತಿರಲಿಲ್ಲ ಎಂದರು.
ಇನ್ನೂ ಮಾತು ಮುಂದುವರಿಸಿ, ನಾನು ಕಂಡಂಥ ಉದಾಹರಣೆ ಹೇಳ್ತೀನಿ. ನನ್ನ ಚಿಕ್ಕ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ ಕೋಳಿ ಪಂದ್ಯಕ್ಕೆ ಹೋಗುತ್ತಿದ್ದ. ಅವನು ಹೋಗುವ ಮೊದಲಿಗೆ ತನ್ನ ಹತ್ತಿರ ಇದ್ದ ನರಿಯ ಹಲ್ಲನ್ನು ತೇಯ್ದು, ಅದನ್ನು ಕೋಳಿಯ ಕಾಲಿಗೆ ಹಚ್ಚುತ್ತಿದ್ದ. ಎದುರಾಳಿ ಕೋಳಿ ಇದರ ವಾಸನೆಗೆ ಹೆದರಿ ಓಡುತ್ತಿತ್ತು. ಅದಕ್ಕೇನು ನರಿಯ ಬಂದಿದೆ ಎಂದೆನಿಸುತ್ತಿತ್ತೋ ಏನೋ, ಹೆದರಿ ಓಡಿಬಿಡುತ್ತಿತ್ತು. ನೀವು ಇದನ್ನೇ ಹುಲಿ ಉಗುರಿಗೂ ಅನ್ವಯಿಸಿಕೊಳ್ಳಬಹುದು ಎಂದು ಹೇಳಿದರು.
ಆದರೆ, ಇತ್ತೀಚೆಗೆ ಒಂದು ಹೊಸ ಟ್ರೆಂಡ್. ಹುಲಿ ಉಗುರಿದ್ದರೆ ಅದನ್ನು ಧರಿಸಿದ ವ್ಯಕ್ತಿಗೆ ಶಕ್ತಿ, ಆಕರ್ಷಣೆ, ಬಲ ಬಂದು ಬಿಡುತ್ತದೆ ಎಂದು ಯಾರೋ ಯೂ ಟ್ಯೂಬ್, ಮಾಧ್ಯಮವೊಂದರಲ್ಲೋ ಹೇಳಿಬಿಟ್ಟಿರುತ್ತಾರೆ. ಜನ ಕೂಡ ಒಂದು ಕೈಲಿ ನೈಲ್ ಕಟ್ಟರ್, ಮತ್ತೊಂದು ಕೈಯಲ್ಲಿ ನೋಟಿನ ಕಟ್ಟು ಹಿಡಿದು ಓಡಾಡುತ್ತಾ ಇರುತ್ತಾರೆ. “ಇದೆ, ನಿಮಗೇನಾದರೂ ಬೇಕಾ?” ಅಂತ ಅಯೋಗ್ಯ, ಅವಿವೇಕಿ, ವಂಚಕನೊಬ್ಬ ಕೇಳಿದ ಕೂಡಲೇ ಕಾಯ್ದೆ, ಕಾನೂನು, ಕಟ್ಟಲೆ ಹಾಗೂ ಕೊನೆಗೆ ಪ್ರಾಣಿ ದಯೆ, ಮನುಷ್ಯತ್ವವನ್ನೂ ಮರೆತು, ಖರೀದಿ ಮಾಡಿಬಿಡುತ್ತಾರೆ. ಇದು ತಮ್ಮದೇ ಸಾಧನೆ ಎಂಬಂತೆ ಎದೆ ಮೇಲೆ ಹಾಕಿಕೊಂಡು, ತೋರಿಸುತ್ತಾ ಓಡಾಡುತ್ತಾರೆ ಎಂದು ಅವರು ತಿವಿದರು.
ಈ ದೇಶದಲ್ಲಿ ಬೇಟೆಗೆ ನಿಷೇಧ ಹಾಕುವ ಮುಂಚಿನ ಪರಿಸ್ಥಿತಿ ಬೇರೆ ಇತ್ತು. ಈಗ ಕಾನೂನು ಬಿಗಿಯಾಗಿದೆ, ಅಷ್ಟೇ ಅಲ್ಲ, ಜನರಲ್ಲಿ ಅರಿವನ್ನು ಸಹ ಮೂಡಿಸಲಾಗುತ್ತಿದೆ. ಆದರೆ ಇವತ್ತಿಗೂ ವಾಮಾಚಾರ ಪ್ರಯೋಗ ಮಾಡುವವರಲ್ಲಿ ಹಾಗೂ ಅದನ್ನು ಬಿಡುಗಡೆ ಮಾಡುತ್ತೇನೆ ಎನ್ನುತ್ತಾ ಓಡಾಡುವವರಲ್ಲಿ ಇಂಥ ವನ್ಯಮೃಗಗಳ ಅಂಗಾಂಗಗಳ ಬಳಕೆ ಮಾಡುವ ಪರಿಪಾಠ ಹಾಗೇ ಮುಂದುವರಿದುಕೊಂಡು ಬಂದಿದೆ. ಅದರಲ್ಲೂ ಈ ಉಗುರು ಏನೂ ಆಗಲ್ಲ. ಅದರ ಬಾಳಿಕೆ ಹೆಚ್ಚು. ಆ ಕಾರಣದಿಂದ ಇದನ್ನು ಆಭರಣದ ರೀತಿ ಬಳಸುವ ತನಕ ಬೆಳೆದು ಬಂದಿದೆ. ಇದಕ್ಕೆ ಕಠಿಣ ಕಾನೂನೇ ಒಂದೊಳ್ಳೆ ಪರಿಹಾರ. ಏಕೆಂದರೆ ತಿಳಿವಳಿಕೆ ಹೇಳಿ, ತಿಳಿಯುವವರಿಗಾದರೆ ಇಂಥ ವಿಚಾರಗಳಿಗೆ ಹೋಗಲ್ಲ. ತಮಗೆ ಏನೋ ಸಿಕ್ಕಿಬಿಡುತ್ತದೆ ಎಂದುಕೊಳ್ಳುವವರಿಗೆ ಕಾನೂನು, ಮಾನವೀಯತೆಗಿಂತ ಸ್ವಾರ್ಥವೇ ಹೆಚ್ಚು ಎಂದರು.
ಆದರೆ, ಈ ಹಿಂದೆ ಕೃಷ್ಣಮೃಗದ ಚರ್ಮದ ಒಂದು ಸಣ್ಣ ತುಂಡನ್ನು ಉಪನಯನದ ವೇಳೆ ಜನಿವಾರಕ್ಕೆ ಗಂಟು ಕಟ್ಟುವ ಪರಿಪಾಠ ಇತ್ತು. ಜತೆಗೆ ಸಂಧ್ಯಾವಂದನೆಯನ್ನು ಕೃಷ್ಣಾಜಿನದ ಮೇಲೆ ಮಾಡಲಾಗುತ್ತಿತ್ತು. ಆದರೆ ಕಾಲದ ಹಾಗೂ ಕಾನೂನಿನ ಬದಲಾವಣೆಯನ್ನು ಗುರುತಿಸಿದ ಮೇಲೆ ಈಗ ಇದನ್ನು ಅನುಸರಿಸುತ್ತಿಲ್ಲ. ಸಂಧ್ಯಾವಂದನೆಗೆ ಧರ್ಬಾಸನವನ್ನೇ ಅಂದರೆ, ಧರ್ಬೆಯಿಂದ ಮಾಡಿದ್ದನ್ನು ಬಳಸಲಾಗುತ್ತಿದೆ. ಉಪನಯನದ ವೇಳೆ ಕೂಡ ಕೃಷ್ಣಾಜಿನದ ತುಂಡನ್ನು ಜನಿವಾರಕ್ಕೆ ಕಟ್ಟುತ್ತಿಲ್ಲ. ಇನ್ನು ಕೆಲವು ಪರಂಪರೆಯಿರುವಂಥ ಮಠಗಳಲ್ಲಿ ಹುಲಿ ಚರ್ಮದ ಮೇಲೆ ಕೂರುವಂಥ ಸ್ವಾಮಿಗಳನ್ನು ನೋಡಬಹುದು. ಅವುಗಳನ್ನು ಲೈಸೆನ್ಸ್ ಮಾಡಿಸಿಯೇ ಬಳಸುವಂಥವರು ದೊಡ್ಡ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಆ ಮಠದ ಹಿರಿಯರು ಅಥವಾ ಮೂಲ ಗುರುಗಳಿಂದ ಬಂದಂಥದ್ದನ್ನು ಬಳಸಿಕೊಂಡು ಬರುತ್ತಾರೆ ವಿನಾ ಈಗ ಹೊಸದಾಗಿ ಹೇಗಾದರೂ ಪಡೆದುಕೊಳ್ಳೋಣ ಎಂಬ ಮನೋಭಾವ ಇಲ್ಲ ಎಂದು ಮಾತು ಮುಗಿಸಿದರು ಪ್ರಕಾಶ್ ಅಮ್ಮಣ್ಣಾಯ.
ಇದೇ ಪ್ರಶ್ನೆಯನ್ನು ನೆಲಮಂಗಲದಲ್ಲಿ ಇರುವಂಥ, ಜ್ಯೋತಿಷ್ಯ ಹಾಗೂ ಪೌರೋಹಿತ್ಯ ಎರಡರ ಬಗ್ಗೆಯೂ ಅಧಿಕಾರಯುತವಾಗಿ ಮಾತನಾಡಬಲ್ಲಂಥ ಪಂಡಿತ್ ವಿಠ್ಠಲ ಭಟ್ ಅವರನ್ನು ಕೇಳಲಾಯಿತು. “ಹುಲಿ ಉಗುರನ್ನು ಧರಿಸುವುದಕ್ಕೆ ಯಾವುದೇ ಶಾಸ್ತ್ರಸಮ್ಮತ ಪ್ರಮಾಣ ಇಲ್ಲ. ಇದನ್ನು ಖಡಾಖಂಡಿತವಾಗಿ ಹೇಳಬಲ್ಲೆ. ಆದರೆ ಇದನ್ನು ವಾಮಾಚಾರ, ಕೃತ್ರಿಮ ಪ್ರಯೋಗಕ್ಕೆ ಬಳಸುತ್ತಾರೆಯೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ,” ಎಂದು ಹೇಳಿದರು.
ಹುಲಿ ಉಗುರು, ಹಲ್ಲು, ಆನೆ ಬಾಲದ ಕೂದಲು, ನರಿಯ ಹಲ್ಲು… ಇವುಗಳನ್ನು ಇಟ್ಟುಕೊಂಡರೆ ತಮಗೊಂದು ಅಗೋಚರ ಶಕ್ತಿ ಸಿಕ್ಕಿಬಿಡುತ್ತದೆ ಎಂದು ಜನರಲ್ಲಿ ವನ್ಯಪ್ರಾಣಿಗಳ ಬಗ್ಗೆ ವಿಚಿತ್ರ ಹಾಗೂ ಯಾವುದೇ ಆಧಾರ ಇಲ್ಲದಂಥ ನಂಬಿಕೆಯೊಂದು ಬೆಳೆದು ಹೋಗಿದೆ. ಮಹಾಭಾರತ, ರಾಮಾಯಣ ಹಾಗೂ ಪುರಾಣಗಳು, ವೇದಗಳು ಇವುಗಳ ಪೈಕಿ ಯಾವುದರಲ್ಲಾದರೂ ಆ ಬಗ್ಗೆ ಪ್ರಸ್ತಾವ ಇದೆಯಾ? ಅಂದರೆ ಇಲ್ಲ. ಇನ್ನು ಬದಲಾದ ಕಾಲಮಾನದಲ್ಲಿ. ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿರುವ ಬಿಗಿಯಾದ ಕಾನೂನುಗಳ ಬಗ್ಗೆ ತಿಳಿವಳಿಕೆ ಇರುವಂಥವರು ಯಾರೂ ಇಂಥ ಮೂರ್ಖತನದ ಕೆಲಸಕ್ಕೆ ಕೈ ಹಾಕಲ್ಲ. ಆದ್ದರಿಂದ ಉಗುರಿನ ಆಸೆಗೆ ಬಿದ್ದು, ತಲೆಗೆ ತಂದುಕೊಳ್ಳುವುದು ಬೇಡ.
(ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಆಯಾ ವ್ಯಕ್ತಿಗಳದಾಗಿರುತ್ತದೆ. ಟಿವಿ9 ಕನ್ನಡ ಈ ನಂಬಿಕೆಯನ್ನು ಪುಷ್ಟೀಕರಿಸುವುದಿಲ್ಲ. ಯಾವುದೇ ವನ್ಯಪ್ರಾಣಿಗಳಿಗೂ ಹಿಂಸೆ ಆಗುವುದನ್ನು ಹಾಗೂ ಅವುಗಳ ಅಂಗಾಂಗಗಳನ್ನು ಆಭರಣದ ರೀತಿಯಲ್ಲೋ ಅಥವಾ ಮತ್ಯಾವ ರೀತಿಯಲ್ಲೋ ಬಳಸುವುದನ್ನು ಟಿವಿ9 ಕನ್ನಡ ಉತ್ತೇಜಿಸುವುದಿಲ್ಲ.- ಸಂಪಾದಕರು)
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ)
Published On - 5:25 pm, Wed, 25 October 23