
ಹಿಂದೂ ಧರ್ಮದಲ್ಲಿ ಆಂಜನೇಯನನ್ನು ಬಲ, ಬುದ್ಧಿಮತ್ತೆ ಮತ್ತು ಭಕ್ತಿಯ ಪ್ರತೀಕವೆಂದು ಪೂಜಿಸಲಾಗುತ್ತದೆ. ಪಂಚಮುಖಿ ಹನುಮಂತನು ಭಗವಾನ್ ಆಂಜನೇಯ ಸ್ವಾಮಿಯ ರೂಪಗಳಲ್ಲಿ ಒಂದಾಗಿದ್ದು, 5 ವಿವಿಧ ಮುಖಗಳನ್ನು ಹೊಂದಿರುವ ಹನುಮಂತನ ರೂಪವಾಗಿದೆ. ಪಂಚಮುಖಿ ಆಂಜನೇಯನ ಉಪಾಸನೆಯ ಹಿಂದಿರುವ ರಹಸ್ಯವೇನು? ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಡಾ.ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.
ಆಂಜನೇಯನು ಐದು ಮುಖಗಳನ್ನು ಹೊಂದಿರುವುದು ಅವನ ಅಸಾಮಾನ್ಯತೆಯನ್ನು ಸೂಚಿಸುತ್ತದೆ. ಈ ಐದು ಮುಖಗಳು ಹನುಮಂತ, ನರಸಿಂಹ, ವರಾಹ, ಹಯಗ್ರೀವ ಮತ್ತು ಗರುಡ. ಪ್ರತಿಯೊಂದು ಮುಖವೂ ವಿಭಿನ್ನ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತದೆ. ಹನುಮಂತನು ಬುದ್ಧಿ ಮತ್ತು ಚಾತುರ್ಯ, ನರಸಿಂಹನು ಧೈರ್ಯ ಮತ್ತು ಪರಾಕ್ರಮವನ್ನು, ವರಾಹನು ಮನೋಬಲವನ್ನು ಮತ್ತು ಹಯಗ್ರೀವನು ಜ್ಞಾನ ಮತ್ತು ವಿದ್ಯೆಯನ್ನು ಸಂಕೇತಿಸುತ್ತಾನೆ. ಗರುಡನು ಅಷ್ಟಸಿದ್ಧಿಗಳನ್ನು ಕರುಣಿಸುತ್ತಾನೆ ಎನ್ನಲಾಗಿದೆ.
ಇದನ್ನೂ ಓದಿ: ಸೂರ್ಯ ಮೃಗಶಿರ ನಕ್ಷತ್ರಕ್ಕೆ ಪ್ರವೇಶ; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ
ಪಂಚಮುಖಿ ಆಂಜನೇಯನ ಐದು ಮುಖಗಳು ಪಂಚಭೂತಗಳು ಮತ್ತು ಐದು ದಿಕ್ಕುಗಳನ್ನು ಕೂಡ ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ, ಹನುಮಾನನು ಪಾತಾಳಲೋಕದಲ್ಲಿ ರಾಮ ಮತ್ತು ಲಕ್ಷ್ಮಣರನ್ನು ಮಹಿರಾವಣನಿಂದ ಬಿಡುಗಡೆ ಮಾಡಲು ಐದು ಜ್ಯೋತಿಗಳನ್ನು ಶಾಂತಗೊಳಿಸಿದನು. ಈ ಘಟನೆಯ ನಂತರವೇ ಪಂಚಮುಖಿ ಆಂಜನೇಯನ ರೂಪವು ಹುಟ್ಟಿಕೊಂಡಿತು ಎಂದು ನಂಬಲಾಗಿದೆ.
ಪಂಚಮುಖಿ ಆಂಜನೇಯನ ಉಪಾಸನೆಯಿಂದ ಬುದ್ಧಿ, ಶಕ್ತಿ, ಧೈರ್ಯ ಮತ್ತು ಮನೋಬಲ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ. ಮನೆಯಲ್ಲಿ ಪಂಚಮುಖಿ ಹನುಮಾನನ ಚಿತ್ರ ಅಥವಾ ವಿಗ್ರಹವನ್ನು ಇಟ್ಟುಕೊಳ್ಳುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆಯಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ