
ತಿರುಮಲ: ಕಲಿಯುಗ ವೈಕುಂಠ ಎಂದೇ ಪ್ರಸಿದ್ಧವಾಗಿರುವ ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಆಗಸ್ಟ್ 23ರಿಂದ 25ರವರೆಗೆ ಶ್ರೀವಾರಿ ಪವಿತ್ರೋತ್ಸವಗಳು ನಡೆಯಲಿವೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD) ತಿಳಿಸಿದೆ. ಆಗಸ್ಟ್ 22ರಂದು ಅಂಕುರಾರ್ಪಣ ಕಾರ್ಯಕ್ರಮದೊಂದಿಗೆ ಪವಿತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ವರ್ಷವಿಡೀ ದೇವಾಲಯದಲ್ಲಿ ನಡೆಯುವ ವಿವಿಧ ಅರ್ಚನೆ, ಸೇವೆ ಹಾಗೂ ಉತ್ಸವಗಳ ಸಂದರ್ಭದಲ್ಲಿ ಯಾತ್ರಿಕರು ಅಥವಾ ಸಿಬ್ಬಂದಿಯಿಂದ ಉಂಟಾದ ಲೋಪದೋಷಗಳಿಗೆ ಪ್ರಾಯಶ್ಚಿತ್ತವಾಗಿ, ದೇವಾಲಯದ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದಿಂದ ಆಗಮ ಶಾಸ್ತ್ರದ ವಿಧಿವಿಧಾನಗಳಂತೆ ಈ ಪವಿತ್ರೋತ್ಸವವನ್ನು ನೆರವೇರಿಸಲಾಗುತ್ತದೆ.
ಪವಿತ್ರೋತ್ಸವದ ಅಂಗವಾಗಿ ಆಗಸ್ಟ್ 23ರಿಂದ 25ರವರೆಗೆ ಮೂರು ದಿನಗಳ ಕಾಲ ಬೆಳಿಗ್ಗೆ 9ರಿಂದ 11ರವರೆಗೆ ದೇವಾಲಯದ ಸಂಪಂಗಿ ಪ್ರಕಾರದಲ್ಲಿ ಸ್ನಪ ತಿರುಮಂಜನಂ ನೆರವೇರಲಿದೆ. ಸಂಜೆ ಶ್ರೀದೇವಿ ಮತ್ತು ಭೂದೇವಿಯ ಸಮೇತ ಶ್ರೀ ಮಲಯಪ್ಪ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿದ ಆಭರಣಗಳೊಂದಿಗೆ ದೇವಾಲಯದ ನಾಲ್ಕು ಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರಿಗೆ ಸ್ವಾಮಿಯ ವಿಶೇಷ ದರ್ಶನದ ಅವಕಾಶ ದೊರೆಯಲಿದೆ. ಆಗಸ್ಟ್ 23ರಂದು ಪವಿತ್ರ ವಸ್ತುಗಳ ಪ್ರತಿಷ್ಠಾಪನೆ, ಆಗಸ್ಟ್ 24ರಂದು ಪವಿತ್ರ ವಸ್ತುಗಳ ಸಮರ್ಪಣೆ ಹಾಗೂ ಆಗಸ್ಟ್ 25ರಂದು ಪೂರ್ಣಾಹುತಿ ಕಾರ್ಯಕ್ರಮಗಳು ನಡೆಯಲಿವೆ.
ಪವಿತ್ರೋತ್ಸವದ ಹಿನ್ನೆಲೆಯಲ್ಲಿ ಟಿಟಿಡಿ ಹಲವು ಪಾವತಿಸಿದ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಆಗಸ್ಟ್ 22ರಂದು ಸಹಸ್ರದೀಪಾಲಂಕಾರ ಸೇವೆ ನಡೆಯುವುದಿಲ್ಲ. ಆಗಸ್ಟ್ 23ರಿಂದ 25ರವರೆಗೆ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರದೀಪಾಲಂಕಾರ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಆಗಸ್ಟ್ 25ರಂದು ಅಷ್ಟದಳಪದ ಪದ್ಮಾರಾಧನೆ ಸೇವೆ ಹಾಗೂ ಆಗಸ್ಟ್ 26ರಂದು ವಿವಾಹೋತ್ಸವ ಸೇವೆಯನ್ನೂ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ
ಇದೇ ವೇಳೆ, ತಿರುಪತಿಯ ಶ್ರೀನಿವಾಸಂ, ವಿಷ್ಣು ನಿವಾಸಂ ಮತ್ತು ಭೂದೇವಿ ಕಾಂಪ್ಲೆಕ್ಸ್ ಕೌಂಟರ್ಗಳಲ್ಲಿ ಬುಧವಾರ ವಿತರಿಸಬೇಕಿದ್ದ ಸರ್ವ ದರ್ಶನ (SSD) ಟೋಕನ್ಗಳ ವಿತರಣೆಯನ್ನು ಟಿಟಿಡಿ ಸ್ಥಗಿತಗೊಳಿಸಿದೆ. ಬುಧವಾರ ವಿತರಿಸಬೇಕಿದ್ದ ಟೋಕನ್ಗಳನ್ನು ಗುರುವಾರದ ದರ್ಶನಕ್ಕೆ ನೀಡಲಾಗುವುದಿಲ್ಲ. ಟೋಕನ್ ಇಲ್ಲದೆ ಬರುವ ಭಕ್ತರು ನೇರವಾಗಿ ತಿರುಮಲ ತಲುಪಿ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮೂಲಕ ಸರ್ವ ದರ್ಶನ ಪಡೆಯುವಂತೆ ಟಿಟಿಡಿ ಮನವಿ ಮಾಡಿದೆ. ಶುಕ್ರವಾರದ ದರ್ಶನಕ್ಕಾಗಿ ಗುರುವಾರ ಮಧ್ಯಾಹ್ನದಿಂದ ಎಂದಿನಂತೆ ಎಸ್ಎಸ್ಡಿ ಟೋಕನ್ಗಳ ವಿತರಣೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಎಸ್ಎಸ್ಡಿ ಟೋಕನ್ ವಿತರಣೆ ಸ್ಥಗಿತಗೊಳಿಸಿರುವುದಕ್ಕೆ ಕೆಲವು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಟೋಕನ್ಗಳಿಲ್ಲದೆ ತಿರುಮಲಕ್ಕೆ ಆಗಮಿಸುವ ಭಕ್ತರಿಗೂ ಸರ್ವ ದರ್ಶನದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕ್ರಮವನ್ನು ಸತತ ಏಳು ಬುಧವಾರಗಳ ಕಾಲ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಟಿಟಿಡಿ ತಿಳಿಸಿದೆ.
ಮಂಗಳವಾರ ಬೆಳಿಗ್ಗೆ 6 ಗಂಟೆಗೆ ತಿರುಮಲ ಶ್ರೀವಾರಿ ದರ್ಶನಕ್ಕಾಗಿ 10,000 ಎಸ್ಎಸ್ಡಿ ಟೋಕನ್ಗಳನ್ನು ವಿತರಿಸಲಾಯಿತು. ಈ ಟೋಕನ್ ಹೊಂದಿರುವ ಭಕ್ತರಿಗೆ ಬುಧವಾರ ಮಧ್ಯಾಹ್ನ 12ರಿಂದ ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ, ಶ್ರೀವಾರಿ ಮೆಟ್ಟು ಮಾರ್ಗದ ಮೂಲಕ ತಿರುಮಲಕ್ಕೆ ತೆರಳುವ ಭಕ್ತರಿಗಾಗಿ 2,000 ಟೋಕನ್ಗಳನ್ನು ವಿತರಿಸಲಾಗಿದೆ. ಪವಿತ್ರೋತ್ಸವದ ಹಿನ್ನೆಲೆಯಲ್ಲಿ ಸೇವೆಗಳು ಮತ್ತು ದರ್ಶನ ವ್ಯವಸ್ಥೆಯಲ್ಲಿ ಬದಲಾವಣೆಗಳಿರುವುದರಿಂದ ಭಕ್ತರು ಟಿಟಿಡಿ ಸೂಚನೆಗಳನ್ನು ಗಮನಿಸಿ ತಿರುಮಲ ಯಾತ್ರೆಯನ್ನು ಯೋಜಿಸುವಂತೆ ಮನವಿ ಮಾಡಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Wed, 12 August 26