
ನೀವೇನಾದರೂ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳಲು ಯೋಜಿಸುತ್ತಿದ್ದರೆ, ಈ ಮಾಹಿತಿ ನಿಮಗಾಗಿ. ತಿರುಮಲದಲ್ಲಿ ಅತಿಯಾದ ಭಕ್ತರ ದಟ್ಟಣೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (TTD) ಸರ್ವ ದರ್ಶನ ಟೋಕನ್ (SSD) ವಿತರಣೆಯಲ್ಲಿ ಪ್ರಮುಖ ಬದಲಾವಣೆ ಮಾಡಿದೆ.
ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು TTD ಬುಧವಾರ ನೀಡಲಾಗುತ್ತಿದ್ದ ‘ಸ್ಲಾಟೆಡ್ ಸರ್ವ ದರ್ಶನ’ (SSD) ಟೋಕನ್ಗಳ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಸಾಮಾನ್ಯವಾಗಿ ಮರುದಿನದ ದರ್ಶನಕ್ಕಾಗಿ ಹಿಂದಿನ ದಿನವೇ ಟೋಕನ್ಗಳನ್ನು ಶ್ರೀನಿವಾಸಂ, ವಿಷ್ಣು ನಿವಾಸಂ ಮತ್ತು ಭೂದೇವಿ ಸಂಕೀರ್ಣಗಳಲ್ಲಿ ನೀಡಲಾಗುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಿಂದಾಗಿ ಗುರುವಾರ ದರ್ಶನಕ್ಕೆ ನೀಡಬೇಕಿದ್ದ ಬುಧವಾರದ ಟೋಕನ್ಗಳನ್ನು ನೀಡಿಲ್ಲ. ಶುಕ್ರವಾರ ಸ್ವಾಮಿಯ ದರ್ಶನ ಪಡೆಯಲು ಬಯಸುವ ಭಕ್ತರಿಗೆ ಗುರುವಾರ ಮಧ್ಯಾಹ್ನದಿಂದ ಮತ್ತೆ ಎಂದಿನಂತೆ ಟೋಕನ್ಗಳನ್ನು ನೀಡಲಾಗುವುದು ಎಂದು TTD ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಮಳೆ ಹಾಗೂ ಶಾಲಾ-ಕಾಲೇಜುಗಳು ಪ್ರಾರಂಭವಾಗುವುದರಿಂದ ತಿರುಮಲದಲ್ಲಿ ಜನಸಂದಣಿ ಕಡಿಮೆಯಿರುತ್ತದೆ. ಆದರೆ, ಕಳೆದ ಎರಡು ವಾರಗಳಿಂದ ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಪ್ರಸ್ತುತ ಸಾಮಾನ್ಯ ದರ್ಶನಕ್ಕೆ 12 ರಿಂದ 24 ಗಂಟೆಗಳ ಕಾಲ ಸಮಯ ತಗಲುತ್ತಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್-2 ರ 31 ಕಂಪಾರ್ಟ್ಮೆಂಟ್ಗಳು ಹಾಗೂ ನಾರಾಯಣಗಿರಿಯ 9 ಕಂಪಾರ್ಟ್ಮೆಂಟ್ಗಳು ಭಕ್ತರಿಂದ ಸಂಪೂರ್ಣವಾಗಿ ತುಂಬಿ ತುಳುಕುತ್ತಿವೆ. ಸತತ ನಾಲ್ಕನೇ ವಾರವೂ ಈ ರೀತಿ SSD ಟೋಕನ್ ವಿತರಣೆಯನ್ನು ಮಧ್ಯದಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಂಗಳವಾರ ಬೆಳಿಗ್ಗೆ 5 ಗಂಟೆಗೆ ವಿತರಣೆ ಆರಂಭವಾದ ಕೇವಲ ಒಂದು ಗಂಟೆಯಲ್ಲೇ ಎಲ್ಲಾ ಟೋಕನ್ಗಳು ಖಾಲಿಯಾಗಿದ್ದರಿಂದ, ದೂರದೂರುಗಳಿಂದ ಬಂದ ಭಕ್ತರು ತೊಂದರೆ ಅನುಭವಿಸುವಂತಾಯಿತು.
ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ
ತಿರುಪತಿಯ ಪ್ರಸಿದ್ಧ ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಜುಲೈ 24 ರಿಂದ 26 ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಶ್ರೀದೇವಿ ಮತ್ತು ಭೂದೇವಿ ಸಮೇತ ಶ್ರೀ ಗೋವಿಂದರಾಜಸ್ವಾಮಿಯ ವಿಗ್ರಹಗಳಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ‘ವಿಧ್ಯುಕ್ತ ಅಭಿಷೇಕ’ ನಡೆಯಲಿದೆ.
ತಿರುಮಲಕ್ಕೆ ಆಗಮಿಸುವ ಭಕ್ತರು ಪ್ರಸ್ತುತ ಪರಿಸ್ಥಿತಿ ಮತ್ತು TTD ಅಧಿಕೃತವಾಗಿ ನೀಡುವ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ