
ಚಿನ್ನವನ್ನು ಕೇವಲ ಆಭರಣವಾಗಿ ಮಾತ್ರವಲ್ಲದೆ, ಕಷ್ಟಕಾಲದ ಭದ್ರತೆಯಾಗಿ ಅಥವಾ ಒಂದು ಅಮೂಲ್ಯ ಆಸ್ತಿಯಾಗಿ ಭಾರತೀಯರು ಕಾಣುತ್ತಾರೆ. ಆದರೆ, ಅನೇಕ ಮನೆಗಳಲ್ಲಿ ಎಷ್ಟು ಚಿನ್ನ ಖರೀದಿಸಿದರೂ ಅದು ಕೈಯಲ್ಲಿ ನಿಲ್ಲುವುದಿಲ್ಲ; ಯಾವುದೋ ಒಂದು ಕಾರಣಕ್ಕೆ ಅದು ಮಾರಾಟವಾಗುತ್ತದೆ ಅಥವಾ ಕಳೆದುಹೋಗುತ್ತದೆ. ಇದಕ್ಕೆ ವಾಸ್ತು ದೋಷ ಮತ್ತು ಜ್ಯೋತಿಷ್ಯದ ಕಾರಣಗಳಿರಬಹುದು ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಮನೆಯಲ್ಲಿ ಚಿನ್ನ ಸ್ಥಿರವಾಗಿ ನಿಲ್ಲದಿರಲು ಇರುವ ಪ್ರಮುಖ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಚಿನ್ನವನ್ನು ಸಂಪತ್ತು, ಸಮೃದ್ಧಿ ಮತ್ತು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸ್ವಚ್ಛತೆ ಇರುವಲ್ಲಿ ಮಾತ್ರ ನೆಲೆಸುತ್ತಾಳೆ. ನಿರಂತರವಾಗಿ ಅಸ್ತವ್ಯಸ್ತವಾಗಿರುವ ವಸ್ತುಗಳು, ಮುರಿದ ಪಾತ್ರೆಗಳು, ಜೇಡರ ಬಲೆ ಅಥವಾ ಕಸ ತುಂಬಿರುವ ಮನೆಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ. ಅಂತಹ ಮನೆಗಳಲ್ಲಿ ಆರ್ಥಿಕ ಏರಿಳಿತಗಳು ಉಂಟಾಗುತ್ತವೆ ಮತ್ತು ಲಕ್ಷ್ಮಿಯ ಸ್ವರೂಪವಾದ ಚಿನ್ನವು ಮನೆಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ.
ವಾಸ್ತುವಿನಲ್ಲಿ ದಿಕ್ಕಿನ ಪಾತ್ರ ಬಹಳ ದೊಡ್ಡದು. ಚಿನ್ನ ಮತ್ತು ಬೆಳ್ಳಿಯನ್ನು ಇಡುವಾಗ ದಿಕ್ಕಿನ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ದಕ್ಷಿಣ ಅಥವಾ ಆಗ್ನೇಯ (South-East) ದಿಕ್ಕನ್ನು ಅಗ್ನಿ ಮೂಲೆಯೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಚಿನ್ನವನ್ನು ಇಡುವುದರಿಂದ ಅದು ‘ಕಳೆದುಹೋಗುವ’ ಅಥವಾ ‘ಖರ್ಚಾಗುವ’ ಸಾಧ್ಯತೆ ಹೆಚ್ಚು. ಆದ್ದರಿಂದ ಚಿನ್ನದಂತಹ ಬೆಲೆಬಾಳುವ ವಸ್ತುಗಳನ್ನು ಇಡಲು ನೈಋತ್ಯ (South-West) ದಿಕ್ಕು ಅತ್ಯಂತ ಶ್ರೇಷ್ಠ. ಇಲ್ಲಿ ಇರಿಸಲಾದ ಆಸ್ತಿ ಅಥವಾ ಸಂಪತ್ತು ಸ್ಥಿರವಾಗಿ ಬೆಳೆಯುತ್ತದೆ.
ಶಾಸ್ತ್ರಗಳ ಪ್ರಕಾರ, ಅತಿಯಾದ ಸಾಲ ಮಾಡಿ ತಂದ ಹಣದಿಂದ ಚಿನ್ನವನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ಚಿನ್ನವು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ ಮತ್ತು ಯಾವುದೋ ಒಂದು ಹಣಕಾಸಿನ ಮುಗ್ಗಟ್ಟಿನಿಂದಾಗಿ ಅದು ಬೇಗನೆ ಮನೆಯಿಂದ ಹೊರಹೋಗುವಂತಾಗುತ್ತದೆ.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು (Jupiter) ಚಿನ್ನಕ್ಕೆ ಕಾರಕನಾದರೆ, ಶುಕ್ರ (Venus) ಐಶ್ವರ್ಯ ಮತ್ತು ಆಭರಣಗಳ ಕಾರಕ. ನಿಮ್ಮ ಜಾತಕದಲ್ಲಿ ಈ ಎರಡು ಗ್ರಹಗಳು ದುರ್ಬಲವಾಗಿದ್ದರೆ, ಚಿನ್ನವು ನಿಮ್ಮ ಕೈಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಪದೇ ಪದೇ ಆಭರಣಗಳು ಒಡೆಯುವುದು ಅಥವಾ ಕಳೆದುಹೋಗುವುದು ಜಾತಕದಲ್ಲಿನ ಇಂತಹ ದೋಷಗಳ ಲಕ್ಷಣವಾಗಿರಬಹುದು.
ವಾರಕ್ಕೊಮ್ಮೆ ಶುಕ್ರವಾರ ಲಕ್ಷ್ಮಿ ದೇವಿಯನ್ನು ಪೂಜಿಸಿ, ಆಭರಣಗಳಿಗೆ ಧೂಪ ತೋರಿಸುವುದರಿಂದ ಸಮೃದ್ಧಿ ಹೆಚ್ಚುತ್ತದೆ. ಮನೆಯ ಈಶಾನ್ಯ ಮೂಲೆಯನ್ನು ಸದಾ ಸ್ವಚ್ಛವಾಗಿಡಿ, ಇದು ದೈವಿಕ ಶಕ್ತಿಯ ಕೇಂದ್ರವಾಗಿದೆ. ಚಿನ್ನವನ್ನು ಯಾವಾಗಲೂ ಒಂದು ಕೆಂಪು ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಸುರಕ್ಷಿತವಾಗಿಡುವುದು ಶುಭ ಫಲ ನೀಡುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ